ಬೆಳಗಾವಿ
ಹರಿಹರನ ರಗಳೆಯ ಪ್ರಕಾರ ನಿಜವಾದ ರೇವಣಸಿದ್ಧನು ಹೆಚ್ಚು ಕಡಿಮೆ ಬಸವಣ್ಣನವರ ಸಮಕಾಲೀನನಾಗಿದ್ದು ೧೨ನೆಯ ಶತಮಾನದಲ್ಲಿ ಜೀವಿಸಿದ್ದನು. ಹಾಗಾಗಿ ಆತ ವೀರಶೈವ ಧರ್ಮದ ಸಂಸ್ಥಾಪಕನಾಗಿರಲಾರ. ರೇವಣನು ಧರ್ಮವನ್ನು ಹುಟ್ಟುಹಾಕಿದನೆಂದು ರಗಳೆಯಲ್ಲಿ ಎಲ್ಲೂ ಹೇಳಿಲ್ಲ. ಅಷ್ಟು ಮಾತ್ರವಲ್ಲˌ ‘ವೀರಶೈವ’ ಪದ ಇಡಿ ರಗಳೆಯಲ್ಲಿ ಒಮ್ಮೆಯೂ ಕಾಣಿಸಿಕೊಂಡಿಲ್ಲ.
ಪವಾಡಗಳನ್ನು ಎಸಗಿ ಇಹದಲ್ಲಿ ಶಿವಭಕ್ತಿಯನ್ನು ಪ್ರಚುರಪಡಿಸಿದ ಶೈವ ಸಂತನೆಂದು ಮಾತ್ರ ರೇವಣನನ್ನು ವರ್ಣಿಸಲಾಗಿದೆ. ದಾರಿಯಲ್ಲಿ ಸಿಕ್ಕ ಶಿವಲಿಂಗಗಳನ್ನು ಪೂಜಿಸುತ್ತ ಅವನು ದ್ರಾವಿಡ ದೇಶವನ್ನು ಸುತ್ತಾಡಿದ. ಸ್ಥಾವರಲಿಂಗಗಳನ್ನು ಪೂಜಿಸಿದ ರೇವಣನು ಇಷ್ಟಲಿಂಗ ಧರ್ಮದ ಸಂಸ್ಥಾಪಕನೆಂತು ಆದಾನು? ಇದು ಕೌತುಕದ ಸಂಗತಿಯಾಗಿದೆ.
ಮೇಲಾಗಿ ಲಿಂಗಾಯತ ಧರ್ಮದ ವೈಶಿಷ್ಟ್ಯಗಳಾದ ಅಷ್ಟಾವರಣˌ ಪಂಚಾಚಾರˌ ಮತ್ತು ಷಟಸ್ಥಲಗಳನ್ನು ರಗಳೆಯಲ್ಲಿ ಹೆಸರಿಸಲಾಗಿಲ್ಲ. ಒಟ್ಟಾರೆ ರಗಳೆಯ ಪರಿಶೀಲನೆಯಿಂದ ರೇವಣನು ವೀರಶೈವನಾಗಿರಲಿಲ್ಲ. ರಗಳೆಯ ರೇವಣನು ಲಕುಲೀಶ ಶೈವನಾಗಿರುವನು.
ಏನೇ ಆಗಲಿˌ ರೇವಣನ ಕುರಿತ ಉಳಿದ ಅನೇಕ ಕೃತಿಗಳ ಪ್ರಕಾರ ಅವನನ್ನು ಪ್ರಥಮ ವೀರಶೈವ ಆಚಾರ್ಯನೆಂದು ಪರಿಗಣಿಸೋಣˌ ಆದರೆˌ ಅವನನ್ನು ಧರ್ಮಸಂಸ್ಥಾಪಕನೆಂದು ಪರಿಗಣಿಸುವುದೆಂದರೆ ಸತ್ಯದ ಬುಡಕ್ಕೆ ಕೊಡಲಿಯಿಟ್ಟಂತೆ.
- ಇಂಗ್ಲೀಷ್ ಮೂಲ: ಪ್ರೊ. ಎಂ. ಆರ್. ಸಾಖರೆ.
(ಲಿಂಗಾಯತ ಧರ್ಮದ ಇತಿಹಾಸ ಮತ್ತು ದರ್ಶನ)
ಕನ್ನಡಾನುವಾದ:
೧. ಡಾ. ಹೆಚ್.ಎಸ್.ಎಂ. ಪ್ರಕಾಶ್.
೨. ಪ್ರೊ. ಸದಿನಂದ ಕನವಳ್ಳಿ. - (ಕೃಪೆ ಡಾ. ಜೆ ಎಸ್ ಪಾಟೀಲ್)