ಸಾಣೇಹಳ್ಳಿ
ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವಯೋಗ ದಿನಾಚರಣೆಯ ನಿಮಿತ್ತ ನಾಲ್ಕು ದಿನಗಳ ಯೋಗ ಶಿಬಿರ ಆಯೋಜಿಸಲಾಗಿತ್ತು.
ಮುಕ್ತಾಯ ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಯೋಗ ಬಾಹ್ಯ ಪ್ರದರ್ಶನವಲ್ಲ; ಅಂತರ್ದರ್ಶನಕ್ಕೆ ಸ್ಫೂರ್ತಿಯಾಗಬೇಕು.
ಆಸನಗಳಿಗೆ ಒತ್ತುಕೊಟ್ಟು ಯೋಗವನ್ನು ಮರೆಯುವರು. ಯೋಗ ಮತ್ತು ಆಸನ ಎರಡು ಸೇರಿದಾಗಲೇ ವ್ಯಕ್ತಿಯ ವ್ಯಕ್ತಿತ್ವದ ವಿಕಾಸ ಆಗುವಂಥದ್ದು. ಆಸನ, ಧ್ಯಾನ, ಪ್ರಾಣಾಯಮದ ಜೊತೆಗೆ ವಚನಗಳನ್ನು ಹೇಳುವ ಮೂಲಕ ಯೋಗದ ಕಡೆ ಸಾಗಬೇಕು. ಇವೆರೆಡು ಏಕಕಾಲಕ್ಕೆ ನಡೆಯುವಂಥ ಕ್ರಿಯೆಗಳು. ಇವುಗಳ ಮೂಲಕ ನಮ್ಮ ಮನಸ್ಸಿನ ದುರ್ಭಾವನೆಗಳನ್ನು ದೂರ ಮಾಡಿಕೊಂಡು ಸದ್ಭಾವನೆಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುವುದು.
ಯೋಗದಿಂದ ವ್ಯಕ್ತಿಗತ ಶುದ್ಧಿಯ ಜೊತೆಗೆ ವಿಶ್ವಶಾಂತಿಯೂ ಸ್ಥಾಪಿತವಾಗುತ್ತದೆ. ಬಸವಾದಿ ಶಿವಶರಣರು ಭಕ್ತಿಯೋಗ, ಶಿವಯೋಗ, ಜ್ಞಾನಯೋಗ, ಕರ್ಮಯೋಗಗಳ ಮೂಲಕ ಲಿಂಗಾಂಗ ಸಾಮರಸ್ಯದಲ್ಲೇ ಯೋಗವನ್ನು ಕಂಡುಕೊಂಡಿದ್ದರು.
ಶರಣರು ಇಷ್ಟಲಿಂಗದ ಮೂಲಕ ಶಿವಯೋಗವನ್ನು ಪರಿಚಯಿಸಿದ್ದಾರೆ. ನಿತ್ಯ ಪೂಜೆ ಮಾಡಿಕೊಳ್ಳುವ ಮೂಲಕ ಆಂತರಿಕ ಮತ್ತು ಬಾಹ್ಯ ಶುದ್ಧಿಯನ್ನು ಮಾಡಿಕೊಳ್ಳಬಹುದು. ಇನ್ನೊಬ್ಬರು ಮೆಚ್ಚಲಿ ಎನ್ನುವುದಕ್ಕಿಂತ ಮನ ಮೆಚ್ಚುವಂತೆ, ಆತ್ಮವಂಚನೆ ಮಾಡಿಕೊಳ್ಳದೆ ನಮ್ಮ ನಮ್ಮ ಕೆಲಸಗಳನ್ನು ಮಾಡಿದಾಗ ಸಹಜವಾಗಿಯೇ ಶಾಂತಿ, ನೆಮ್ಮದಿ ನಮ್ಮದಾಗುತ್ತದೆ. ಸ್ವಚ್ಛತೆ ನಮ್ಮ ದಿನನಿತ್ಯದ ಕಾಯಕವಾಗಬೇಕು.
ಪ್ರತಿಯೊಬ್ಬರೂ ಇಷ್ಟಲಿಂಗ ದೀಕ್ಷೆಯ ಮೂಲಕ ಶಿವಯೋಗ ಪಡೆದುಕೊಳ್ಳಬೇಕು. ಆದ್ದರಿಂದ ಪ್ರತಿತಿಂಗಳು ಒಂದನೆಯ ತಾರೀಖು ಇಷ್ಟಲಿಂಗ ದೀಕ್ಷಾ ಸಂಸ್ಕಾರ ಸಾಣೇಹಳ್ಳಿಯಲ್ಲಿ ನಡೆಯುವುದು. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಮನಸ್ಸು ಎಷ್ಟು ಚಂಚಲವಾದದ್ದೋ ಅಷ್ಟೇ ಏಕಾಗ್ರತೆ ಪಡೆಯುವ ಶಕ್ತಿ ಹೊಂದಿದೆ. ಮನಸ್ಸು ಹೇಳಿದ ಹಾಗೆ ನಾವು ಕೇಳದೇ ನಾವು ಹೇಳಿದ ಹಾಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಮನಸ್ಸಿನಿಂದಲೇ ಮನುಷ್ಯನ ವ್ಯಕ್ತಿತ್ವ ಬೆಳವಣಿಗೆಯಾಗುವಂಥದ್ದು, ಮನಸ್ಸಿನಿಂದಲೇ ವ್ಯಕ್ತಿತ್ವ ನಾಶವಾಗುವಂಥದ್ದು. ಹಾಗಾಗಿ ಮನಸ್ಸಿನಲ್ಲಿ ಮೇಲೆ ಹತೋಟಿಯನ್ನು ಯಾರು ಸಾಧಿಸುತ್ತಾರೋ ಅವರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡ್ತಾ ಹೋಗುವರು. ಯಾರು ಮನಸ್ಸಿನ ಮೇಲೆ ಹತೋಟಿಯನ್ನು ಕಳೆದುಕೊಳ್ತಾರೋ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಿದರೂ ಸೋಲುವರು. ಹಾಗಾಗಿ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಯೋಗ ಸಹಾಯವಾಗುವುದು
ಯಮ, ನಿಯಮ, ಯೋಗಾಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳ ಒಟ್ಟು ಮೊತ್ತವೇ ಯೋಗ. ಯೋಗ ಕೇವಲ ವ್ಯಾಯಾಮಗಳನ್ನು ಮಾಡುವುದಲ್ಲ; ಅದು ನೈತಿಕ ಬದುಕಿನ ಕ್ರಮವಾಗಬೇಕು. ಯೋಗ, ಧ್ಯಾನ, ಮೌನ, ಪ್ರಾರ್ಥನೆಗಳು ಒಂದು ದಿನದ ಆಚರಣೆಯಾಗಬಾರದು.
ಇದೇ ಸಂದರ್ಭದಲ್ಲಿ ‘ನನ್ನನ್ನು ನಾನು ಆರೋಗ್ಯವಂತ, ಶಾಂತಿಯುತ, ಸಂತೋಷಭರಿತ ಮತ್ತು ಪ್ರೀತಿಸುವ ಮಾನವನನ್ನಾಗಿಸಿಕೊಳ್ಳಲು ಪ್ರಯತ್ನಿಸುವೆ’ ಎನ್ನುವ ಸಂಕಲ್ಪವನ್ನು ಸಾಮೂಹಿಕವಾಗಿ ಮಾಡಲಾಯಿತು.
ಯಶಸ್ವಿನಿ ಯೋಗ ಸಂಸ್ಥೆಯ ಯೋಗಾಚಾರ್ಯ ದೇವೇಂದ್ರಪ್ಪ ಯೋಗ ತರಬೇತಿ ನೀಡಿದರು. ಅಧ್ಯಾಪಕ ವಿರುಪಾಕ್ಷಪ್ಪ ಅಣ್ಣಿಗೆರಿ ಧ್ಯಾನ, ಚಿಂತನೆಯನ್ನು ನೆರವೇರಿಸಿಕೊಟ್ಟರು. ಮುಖ್ಯೋಪಾಧ್ಯಾಯ ಬಸವರಾಜ್ ಕೆ.ಆರ್. ಮಾತನಾಡಿದರು. ದೈಹಿಕ ಶಿಕ್ಷಕಿ ಶೋಭ ಎಸ್.ಪಿ. ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ನಾಗರಾಜ್ ಹೆಚ್.ಎಸ್. ವಚನಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಯೋಗಾಚಾರ್ಯ ದೇವೇಂದ್ರಪ್ಪ ಮತ್ತು ಅಧ್ಯಾಪಕ ವಿರುಪಾಕ್ಷಪ್ಪನವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯಸ್ಥರು, ನೌಕರ ವರ್ಗದವರು ಉಪಸ್ಥಿತರಿದ್ದರು.