ಹುಬ್ಬಳ್ಳಿ
ಸಾಹಿತಿಗಳಾದ ಸಚ್ಚಿದಾನಂದ ಚಟ್ನಳ್ಳಿ ಮತ್ತು ಅವರ ಧರ್ಮ ಪತ್ನಿ ಬಸವಶ್ರೀ ಮಠದ ಅವರು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಟ್ಟಿಸಿದ ತಮ್ಮ ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮವನ್ನು ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯರ ನೇತೃತ್ವದಲ್ಲಿ ರವಿವಾರ ನೆರವೇರಿಸಿದರು.
ಕಾರ್ಯಕ್ರಮ ಸಂಪೂರ್ಣ ಗುರು ಬಸವಣ್ಣನವರ ತತ್ವದಂತೆ ನೆರವೇರಿತು. ಯಾವುದೇ ಆಡಂಬರ ಹೋಮ ಹವನಗಳಿಲ್ಲದೆ ಅನ್ಯ ದೈವಗಳ ಪೂಜೆಯಿಲ್ಲದೆ ಕೇವಲ ಗುರು ಬಸವ ಪೂಜೆ ಮಾಡುವುದರ ಮೂಲಕವಾಗಿ ಪೂಜ್ಯ ಲಿಂ. ಮಾತೆ ಮಹಾದೇವಿಯವರು ಬರೆದ ‘ಬಸವ ಧರ್ಮದ ಸಂಸ್ಕಾರಗಳುʼ ಎನ್ನುವ ಪುಸ್ತಕದಂತೆ ನೆರವೇರಿತು.
ಗೃಹಸ್ಥ ಜಂಗಮ ವೀರಣ್ಣ ಲಿಂಗಾಯತ ಕೊಪ್ಪಳ ಇವರ ನೇತೃತ್ವದಲ್ಲಿ ಶಿವಮೊಗ್ಗದ ಶರಣ ಬಂಧುಗಳಾದ ಬಾಳಪ್ಪ ವಿಕೆ, ಅನಸೂಯ ಮಹೇಶ, ಗಿರಿಜಾ ದೀಪ, ವೀಣಕ್ಕ, ಸರೋಜ, ಕಮಲಮ್ಮ ಚಿತ್ರದುರ್ಗದ ತಿಪ್ಪೇಸ್ವಾಮಿ, ಈರಮ್ಮ, ಬೆಂಗಳೂರಿನ ಶಶಿಕಲಾ ಹಾಗೂ ಇನ್ನಿತರರು ಗುರು ಬಸವಣ್ಣನವರ ಅಷ್ಟೋತ್ತರ ಸಹಸ್ರ ನಾಮಾವಳಿ(1008) ಮಂತ್ರಗಳನ್ನು ಹಿಂದಿನ ದಿವಸವೇ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೇ ನೀಡಿದರು. ಸಾಯಂಕಾಲ 7:00ಗಂಟೆಯ ನೆನಹು ಪ್ರಾರ್ಥನೆಯ ಮೂಲಕ ಆರಂಭಿಸಿ 1008 ಮಂತ್ರ ಪಠಣವನ್ನು ರಾತ್ರಿ 9:30 ಗಂಟೆಯವರೆಗ ನಡೆಸಲಾಯಿತು.

ರವಿವಾರ ಬೆಳಿಗ್ಗೆ 4:30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದೊಂದಿಗೆ ಆರಂಭಿಸಿ, ಗುರು ಬಸವೇಶ್ವರ ಪೂಜಾವ್ರತ ಮತ್ತು ವಚನ ಪಠಣ ಕಾರ್ಯಕ್ರಮವನ್ನು ವೀರಣ್ಣ ಲಿಂಗಾಯತ ಅವರು ನೆರವೇರಿಸಿದರು.
ನೂತನ ಮನೆಯ ಗೃಹ ಪ್ರವೇಶ ನಿಮಿತ್ತವಾಗಿ ತಮ್ಮ ಮಗ ಸರ್ವಜ್ಞ ಲಿಂಗಾಯತ ಇವರಿಗೆ 8ನೇ ವಯಸ್ಸಿಗೆ ಕೊಡುವ ಧರ್ಮ ಸಂಸ್ಕಾರವಾದ ಇಷ್ಟಲಿಂಗದೀಕ್ಷೆ ಕಾರ್ಯಕ್ರಮ ಮತ್ತು ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಗುರು ಬಸವಣ್ಣನವರಿಂದ ಪೂಜ್ಯ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯರ ಮೂಲಕವಾಗಿ ಇಷ್ಟಲಿಂಗ ದೀಕ್ಷೆಯನ್ನು ನೆರವೇರಿಸಲಾಯಿತು. ಐದು ಜನ ಮಕ್ಕಳು ಮತ್ತು ಶರಣರು ಸಾಮೂಹಿಕ ಇಷ್ಟಲಿಂಗ ದೀಕ್ಷೆಯಲ್ಲಿ ಭಾಗವಹಿಸಿ ಲಿಂಗಾಯತ ಧರ್ಮ ದೀಕ್ಷೆ ಪಡೆದು ಲಿಂಗಾಯತರಾರು.

ಪೂಜ್ಯ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯರು ಇಷ್ಟಲಿಂಗ ದೀಕ್ಷೆ ನೀಡಿ ಇಷ್ಟಲಿಂಗದ ಮಹತ್ವ ಪೂಜೆ ಏಕೆ ಮಾಡಬೇಕು ಎಂಬುದನ್ನು ವಿವರಿಸುತ್ತ ಪರಮಾತ್ಮ ಲಿಂಗದೇವರು ನಮಗೆ ಗಾಳಿ, ಬೆಳಕು, ನೀರು, ಆಹಾರ, ಜೀವನ ಎಲ್ಲವನ್ನೂ ಕೊಟ್ಟು ನಿರಂತರವಾಗಿ ನಮ್ಮನ್ನು ತಮ್ಮ ಕಾರುಣ್ಯದಲ್ಲಿ ಸಲಹುತ್ತಿದ್ದಾನೆ, ಅದಕ್ಕಾಗಿ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸುವುದಕ್ಕಾಗಿ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ತಿಳಿಸಿದರು.
ಗುರು ಬಸವಣ್ಣನವರು 14.01.1155ರಂದು ಇಷ್ಟಲಿಂಗವನ್ನು ಕಂಡುಹಿಡಿದು ಅದನ್ನು ಮೊದಲು ತಾವು ಧರಿಸಿ ದೇವರನ್ನು ಪೂಜೆ ಮಾಡುವ ಅವಕಾಶವನ್ನು ಎಲ್ಲರಿಗೂ ಇಷ್ಟಲಿಂಗ ದೀಕ್ಷೆಯ ಮೂಲಕ ಕರುಣಿಸಿದರು. ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೇ ಯಾರೂ ಬೇಕಾದರೂ ಇಷ್ಟಲಿಂಗವನ್ನು ಧರಿಸಿ ಲಿಂಗಾಯತರಾಗಬಹುದು ಎಂದು ಹೇಳಿದರು. ಎಲ್ಲಾ ಆರೂ ಮಕ್ಕಳಿಗೂ ಇಷ್ಟಲಿಂಗ ದೀಕ್ಷೆ ನೀಡಿದ ನಂತರ ಅವರಿಗೆ ಪುಷ್ಪ ವೃಷ್ಟಿ ಮಾಡಿ ಆರತಿ ಬೆಳಗಿ ಲಿಂಗಾಯತ ಧರ್ಮಮಾರ್ಗದಲ್ಲಿ ನಡೆಯಲು ಶುಭಹಾರೈಸಿದರು.

ಉಡುಪಿಯ ಅಲ್ಲಮಪ್ರಭು ಅನುಭಾವ ಪೀಠಧ ಗೃಹಸ್ಥ ಜಂಗಮ ಶರಣ ಜಗನ್ನಾಥಪ್ಪ ಪನಸಾಲೆಯವರು ಮಾತನಾಡುತ್ತ, ಬಸವ ಧರ್ಮವಾದ ಈ ಲಿಂಗಾಯತ ಧರ್ಮ ನಾಸ್ತಿಕವೂ ಅಲ್ಲ ಆಸ್ತಿಕವೂ ಅಲ್ಲ ಇದು ವಾಸ್ತವಿಕ ಧರ್ಮ ಎಂದು ಹೇಳಿದರು. ವೈದಿಕತೆ ಕರ್ಮಠ ಆಚರಣೆಗಳ ವಿರುದ್ದವಾಗಿ ಹುಟ್ಟಿದ ಈ ಧರ್ಮ ಸ್ತ್ರೀ ಪುರುಷರಿಗೆ ಸಮಾನವಾಗಿ ಧರ್ಮ ಸಂಸ್ಕಾರವನ್ನು ಕೊಡುತ್ತದೆ ಇಬ್ಬರಿಗೂ ಆತ್ಮೋದ್ಧಾರ ಮಾಡಿಕೊಳ್ಳಲು ಇಷ್ಟಲಿಂಗ ದೀಕ್ಷೆ ನೀಡುತ್ತದೆ.
5 – ʼಭʼ ಗಳು, ಭಯ, ಭೀತಿ, ಭ್ರಮೆ, ಭ್ರಾಂತಿ, ಭೇದ ಇವುಗಳು ಇರುವುದು ಧರ್ಮವೇ ಅಲ್ಲ, ಯಾವುದೇ ಒಂದು ಆಚರಣೆ ಅಥವಾ ಪಂಥದಲ್ಲಿ ಈ ಐದು ʼಭʼ ಗಳು ಇದ್ದರೆ ಅದು ಧರ್ಮವೇ ಅಲ್ಲ ಅದು, ಮತವಾಗುತ್ತದೆ, ಪಂಥವಾಗುತ್ತದೆ, ಅಥವಾ ರೂಢಿ, ಪರಂಪರೆ, ಸಂಪ್ರದಾಯವಾಗುತ್ತದೆ. ಯಾವುದರಲ್ಲಿ ಈ ಐದು ʼಭʼ ಗಳು ಇಲ್ಲವೋ ಅದು ಮಾತ್ರ ಧರ್ಮವಾಗುತ್ತದೆ. ಆದ್ದರಿಂದ ಅಪ್ಪ ಗುರು ಬಸವಣ್ಣನವರು ಈ ಲೋಕಕ್ಕೆ ಕೊಟ್ಟಿದ್ದು ಧರ್ಮವೇ ಹೊರತು ಮತ ಪಂಥವಲ್ಲ ಅವರು ನೀಡಿದ ಬಸವ ಧರ್ಮ ಅಥವ ಲಿಂಗಧರ್ಮ ಅಥವಾ ಲಿಂಗಾಯತ ಧರ್ಮವು ಧರ್ಮವೆನಿಸುತ್ತದೆ.

ಏಕೆಂದರೆ ಅವರು ಕೊಟ್ಟ ಈ ವಚನ ಸಿದ್ಧಾಂತದಲ್ಲಿ ಭಯವಿಲ್ಲ, ಭೀತಿಯಿಲ್ಲ, ಭ್ರಮೆಯಿಲ್ಲ, ಭ್ರಾಂತಿಯಿಲ್ಲ ಮತ್ತು ಭೇದವೂ ಇಲ್ಲವೇ ಇಲ್ಲ. ಈ ಧರ್ಮವು ಪ್ರಾಯೋಗಿಕ ಮತ್ತು ಅನ್ವಯಿಕ ವೈಜ್ಞಾನಿಕ ಧರ್ಮವಾಗಿದೆ ಇಲ್ಲಿ ಯಾವುದೇ ಮೂಢನಂಬಿಕೆಗೆ ಅವಕಾಶವೇ ಇಲ್ಲ. ಮಾನವ ನಿರ್ಮಿತ ಎಲ್ಲಾ ತಾರತಮ್ಯಗಳನ್ನು ಹೋಗಲಾಡಿಸಿ ಮಾನವನನ್ನು ಮಹಾದೇವನನ್ನಾಗಿಸುತ್ತದೆ. ಎಲ್ಲರೂ ಕರಸ್ಥಲದ ಲಿಂಗದ ನಿರೀಕ್ಷೆ ಮಾಡುತ್ತ ಇಷ್ಟ ಪ್ರಾಣ ಭಾವದಲ್ಲಿ ಮಹಾಲಿಂಗವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಪ್ಪಳದ ಗೃಹಸ್ಥ ಜಂಗಮ ಶರಣ ವೀರಣ್ಣನವರು ಮಾತನಾಡಿ, ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು ಎನ್ನುವ ಗುರು ಬಸವಣ್ಣನವರ ವಚನ ವ್ಯಾಖ್ಯಾನಿಸಿ ತನ್ನೊಡನೆ ಮಲಗಿರ್ದ ಸತಿಯನ್ನೆಬ್ಬಿಸದೆ ಇಷ್ಟಲಿಂಗಕ್ಕೆರೆವ ಸದ್ಭಕ್ತನ ಪಾದವ ತೋರಿ ಬದುಕಿಸಯ್ಯಾ ಎನ್ನುವ ಗುರು ಬಸವಣ್ಣನವರ ನುಡಿಗಳಿಗೆ ವ್ಯಾಖ್ಯಾನ ನೀಡಿ ಇಲ್ಲಿ ಸತಿಯೆಂದರೆ ಸಂಸಾರ, ಸೂರ್ಯೋದಯವಾಗುತ್ತಿದ್ದಂತೆ ಸಂಸಾರದ ಆಗು ಹೋಗುಗಳ ಚಿಂತನೆ ಆರಂಭವಾಗುತ್ತದೆ ಅದಕ್ಕಾಗಿ ಸೂರ್ಯೋದಯಕ್ಕಿಂತ ಮುಂಚೆ ಬ್ರಾಹ್ಮೀ ಮುಹೂರ್ತದಲ್ಲಿ ಇಷ್ಟಲಿಂಗ ಪೂಜೆ ಮಾಡಬೇಕು. ಇದಕ್ಕಾಗಿ ಬೇಗನೆ ಮಲಗಿ ಬೇಗನೇ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಧಾರವಾಹಿಗಳನ್ನು ನೋಡುತ್ತ ಜೀವನದ ಸಮಯ ವ್ಯರ್ಥವಾಗಿ ಕಳೆಯಬಾರದು ಎಂದು ಹೇಳಿದರು.

ಸಚ್ಚಿದಾನಂದ ಚಟ್ನಳ್ಳಿಯವರ ಜನ್ಮ ನಾಮ ಬೇರೆಯಾಗಿತ್ತು. ಪೂಜ್ಯ ಮಾತೆ ಮಹಾದೇವಿಯವರು ಸಚ್ಚಿದಾನಂದರವರ ಕಾಲೇಜು ದಿನಗಳಲ್ಲಿ ಅವರಿಗ ತಮ್ಮ ವಚನಾಂಕಿತದಿಂದ ನಾಮಕರಣ ಮಾಡಿದರು. ನಂತರ ಲಿಂಗೈಕ್ಯರಾಗುವುದಕ್ಕೆ ಮುನ್ನ ಅವರಿಗೆ ತಮ್ಮ ಲೇಖನಿಯನ್ನು ಕೊಟ್ಟು ಲಿಂಗಾಯತ ಧರ್ಮದ ಪುನರುತ್ಥಾನದ ಕಾರ್ಯ ಮುಂದುವರೆಸಬೇಕೆಂದು ಹಾರೈಸಿದ್ದಾರೆ ಮೊದಲು ಪೆನ್ ನೇಮ್ ನೀಡಿದ ಮಾತಾಜಿ ಸಚ್ಚಿದಾನಂದನವರ ಸಾಹಿತ್ಯ ವೈಖರಿ ನೋಡಿ ಪೆನ್ನನ್ನು ಕೂಡ ನೀಡಿದರು.
ಸಚ್ಚಿದಾನಂದರವರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ ಎಂದು ನುಡಿದರು. ವಚನ ಸಾಹಿತ್ಯದ ಬಗ್ಗೆ ಏನೇ ಅರ್ಥವಾಗದಿದ್ದಾಗ ನಾನು ಮೊದಲು ಮಾತಾಜಿಯವರಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುತ್ತಿದ್ದೆ ಎಂದು ಮಾತಾಜಿಯವರನ್ನು ನೆನೆದು ಶರಣ ವೀರಣ್ಣನವರು ಗದ್ಗಗದಿತರಾದರು. ಮಾತಾಜಿಯವರ ನಂತರ ನನ್ನ ಯಾವುದೇ ಸಂದೇಹಗಳಿಗೆ ಪರಿಹಾರ ನೀಡುವವರು ಸಚ್ಚಿದಾನಂದನವರು ಎಂದು ಅಭಿಮಾನ ವ್ಯಕ್ತಪಡಿಸಿದರು.
ಮನುಗುಂಡಿಯ ಪೂಜ್ಯ ಬಸವಾನಂದ ಸ್ವಾಮೀಜಿ ವೀರಣ್ಣನವರು ನಡೆಸುವ ಬಸವ ಚಿಂತನ ಪ್ರಭೆಯ ಕಾರ್ಯಕ್ರಮದ ಬಗ್ಗೆ ಕೊಂಡಾಡಿ ಸಚ್ಚಿದಾನಂದನವರು ಈ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವಿರಿಸಿಕೊಂಡಿರುವುದು ತುಂಬಾ ಶ್ಲಾಘನೀಯವಾದ ಕಾರ್ಯ ಲಿಂಗಾಯತ ಧರ್ಮ ಸೇವೆಯನ್ನು ಅವರು ಮುಂದುವರೆಸಿಕೊಂಡು ಹೋಗಬೇಕೆಂದು ಆಶೀರ್ವಚನ ನೀಡಿದರು.
ಚಿಕ್ಕಮಗಳೂರಿನ ಪೂಜ್ಯ ಜಯಬಸವಾನಂದ ಸ್ವಾಮೀಜಿಯವರು ಮಾತನಾಡಿ, ಸಚ್ಚಿದಾನಂದರವರು ದೊಡ್ಡ ಹುದ್ದೆಯಲ್ಲಿದ್ದರೂ ನಿರ್ಗರ್ವಿಯಾಗಿ ವಿನಯಶೀಲರಾಗಿ ಸರಳಜೀವಿಯಾಗಿದ್ದಾರೆ. ಲಿಂಗಾಯತ ಧರ್ಮದ ಬಗ್ಗೆ ವಚನ ಸಾಹಿತ್ಯದ ಬಗ್ಗೆ 14 ಪುಸ್ತಕಗಳನ್ನು ಬರೆದು ಪ್ರಕಟಿಸಿರುವ ಸಚ್ಚಿದಾನಂದರವರಿಂದ ಇನ್ನು ಹೆಚ್ಚಿನ ಸೇವೆ ಸಲ್ಲಲಿ ಎಂದು ಹಾರೈಸಿದರು.
ವಚನ ಸಾಹಿತ್ಯದಲ್ಲಿ ಪಿ.ಹೆಚ್.ಡಿ ಮಾಡಿರುವ ಬಸವ ಕಲ್ಯಾಣದ ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ ಮತ್ತು ಮಳವಳ್ಳಿಯ ಪೂಜ್ಯ ಶ್ರೀ ಓಂಕಾರೇಶ್ವರ ಸ್ವಾಮೀಜಿ ಬೆಂಗಳೂರಿನ ಬಸವ ಧ್ಯಾನ ಕೇಂದ್ರದ ಪೂಜ್ಯ ಓಂಕಾರೇಶ್ವರಿ ಮಾತೆಯವರು ಮತ್ತು ಕಲಘಟಗಿಯ ಪೂಜ್ಯ ಶ್ರೀ ಮಾತೆ ಶಾಂತಾದೇವಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಚ್ಚಿದಾನಂದ ಚಟ್ನಳ್ಳಿಯವರು ಸ್ವಾಗತ ಮಾಡುತ್ತ ಮಾತನಾಡಿ,
“ನರಜನ್ಮಕ್ಕೊಮ್ಮೆ ಬಂದ ಬಳಿಕ,
ಗುರುವಿನ ಕುರುಹ ಕಾಣಬೇಕು.
ಗುರುವಿನ ಕುರುಹ ತಾ ಕಂಡ ಬಳಿಕ,
ಶಿಷ್ಯನಾಗಿ ಗುರುಕರಜಾತನಾಗಬೇಕು.
ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ,
ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು, ಘಟ್ಟಿವಾಳಯ್ಯಾ” ಎನ್ನುವ ಗುರು ಸಿದ್ಧರಾಮೇಶ್ವರರ ವಚನ ವಿವರಿಸುತ್ತ ಲಿಂಗಾಯತ ಧರ್ಮದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಯಾವುದೇ ಜಾತಿ ಮತ ಪಂಥದಲ್ಲಿ ಹುಟ್ಟಿದ ವ್ಯಕ್ತಿ ಲಿಂಗಾಯತನಾಗಲಿಕ್ಕೆ ಇರುವ ಏಕೈಕ ಸಾಧನ ಇಷ್ಟಲಿಂಗ ದೀಕ್ಷೆ. ಇಷ್ಟಲಿಂಗ ದೀಕ್ಷೆಯಲ್ಲಿ ಸ್ವತಃ ವ್ಯಕ್ತಿಯೇ ಗುರುವಿನಿಂದ ಇಷ್ಟಲಿಂಗವನ್ನು ಪಡೆದು ಗುರುವಿನ ಹಸ್ತದಲ್ಲಿ ಹುಟ್ಟನ್ನು ಪಡೆದು, ಪುನರ್ಜನ್ಮ ತಾಳಬೇಕು ಎಂದರು.
ಬೇರೆ ಬೇರೆ ಧರ್ಮಗಳಲ್ಲಿ ದೀಕ್ಷಾ ಸಂಸ್ಕಾರ ವಿಧಿ ವಿಧಾನಗಳಿವೆ. ಅದೇ ರೀತಿ ಲಿಂಗಾಯತ ಧರ್ಮದ ದೀಕ್ಷಾ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆ. ವೈದಿಕ ಧರ್ಮದಲ್ಲಿ 8ನೇ ವಯಸ್ಸಿಗೆ ಗಂಡು ಮಕ್ಕಳಿಗೆ ಉಪನಯನ ಸಂಸ್ಕಾರಕ್ಕೆ ಬಹಳ ಮಹತ್ವ ನೀಡುತ್ತಾರೆ. ಆಹ್ವಾನ ಪತ್ರಿಕೆ ಮುದ್ರಿಸಿ ಬಂಧು ಬಳಗದವರನ್ನೆಲ್ಲಾ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವರು. ಇದರಿಂದ ಅವರ ಸಹಧರ್ಮೀಯರೂ ಉಪನಯನದ ಮಹತ್ವ ಅರಿತು, ಅವರೂ ಆಚರಿಸುತ್ತಾರೆ. ಪೂಜ್ಯ ಶ್ರೀ ಲಿಂಗೈಕ್ಯ ಮಾತೆ ಮಹಾದೇವಿಯವರು ಉಳ್ಳವರು ತಮ್ಮ ಮಕ್ಕಳ ಇಷ್ಟಲಿಂಗದೀಕ್ಷೆ ಕಾರ್ಯಕ್ರಮವನ್ನು ಸಂಭ್ರಮದಿಂದ ಮಾಡಬೇಕು ಆಹ್ವಾನ ಪತ್ರಿಕೆ ಮುದ್ರಿಸಿ, ಇನ್ನಿತರರಿಗೂ ದೀಕ್ಷೆ ಕೊಡಿಸಲು ಏರ್ಪಡಿಸಬೇಕು ಎಂದು ಹೇಳಿದ್ದಾರೆ ಅದಕ್ಕಾಗಿಯೇ ಮನೆಯ ಗುರು ಪ್ರವೇಶ ನೆಪಮಾತ್ರಕ್ಕೆ ಮಾಡಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದು ಹೇಳಿದರು.
ಇಷ್ಟ ಲಿಂಗ ದೀಕ್ಷೆ ಪಡೆದವರಿಗೆ ಇಷ್ಟಲಿಂಗ ವಿಭೂತಿ ಲಿಂಗವಸ್ತ್ರ, ರುದ್ರಾಕ್ಷಿ ಮಾಲೆ ಮತ್ತು ಪೂಜ್ಯ ಶ್ರೀ ಲಿಂ. ಲಿಂಗಾನಂದ ಸ್ವಾಮೀಜಿಯವರು ಬರೆದ ದೇವ ಪೂಜಾ ವಿಧಾನ ಎನ್ನುವ ಪುಸ್ತಕವನ್ನು ಕೊಡಮಾಡಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಬೆಳಗಾವಿ ತಾಲೂಕಿನ ಲಾವಣ್ಯ ಅಂಗಡಿ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಸುಮಾರು 250 ಶರಣರಿಗೆ ಬಸವಶ್ರೀ, ಸಚ್ಚಿದಾನಂದ ಅವರು ಬರೆದ ಹರನೆಡೆಯಿಂದ ಪರಮನೆಡೆಗೆ ಎನ್ನುವ ಗ್ರಂಥವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.