ಕನ್ನೇರಿ ಸ್ವಾಮಿಯನ್ನು ಬಂಧಿಸಿ, ಜೈಲಿಗೆ ಹಾಕಲು ಆಗ್ರಹ
ಸಂಡೂರು:
ರಾಷ್ಟ್ರೀಯ ಬಸವದಳ ಮತ್ತು ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸಮಿತಿ ಹಾಗೂ ಸ್ಥಳೀಯ ಘಟಕಗಳ ಸಂಯುಕ್ತಾಶ್ರಯದಲ್ಲಿ ರವಿವಾರ ‘ಶರಣ ಸಂಗಮ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಸಂಡೂರಿನ ಪ್ರಭುದೇವರು ಸಂಸ್ಥಾನ ಮಠದ ಅಲ್ಲಮಪ್ರಭು ದೇವರ ವನದಲ್ಲಿ, ಪೂಜ್ಯ ಪ್ರಭುಮಹಾಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.

ಆರಂಭದಲ್ಲಿ ಬಸವ ಧ್ವಜಾರೋಹಣ, ಧರ್ಮಗುರು ಬಸವಣ್ಣನವರ ಪೂಜೆ, ಪ್ರಾರ್ಥನೆ ಮತ್ತು ವಚನ ಪಠಣ ನೆರವೇರಿದವು.
ವಚನ ಚಿಂತನೆ
ಕೊಪ್ಪಳದ ರಾಜಶೇಖರ ಪಾಟೀಲ, ಗಂಗಾವತಿಯ ಓಂಕಾರಪ್ಪ ಬಳ್ಳೊಳ್ಳಿ ಸೇರಿದಂತೆ ಹಲವಾರು ಶರಣರು ಬಸವಾದಿ ಶರಣರ ವಚನ ಚಿಂತನೆ ನಡೆಸಿದರು.

ಬಸವ ಸಂಸ್ಕೃತಿ ಅಭಿಯಾನದ ಉದ್ದೇಶ ಬಸವಭಕ್ತರಲ್ಲಿ ಜಾಗೃತಿ, ಸಂಘಟನೆ, ಇಷ್ಟಲಿಂಗ ನಿಷ್ಠೆ, ಧರ್ಮ ಗುರುವಿನ ಬಗ್ಗೆ ಅಭಿಮಾನ ಹಾಗೂ ವಚನ ಸಾಹಿತ್ಯದ ಅನುಷ್ಠಾನದ ನಿಟ್ಟಿನಲ್ಲಿ ನಿರಂತರವಾಗಿ ಅಭಿಯಾನವನ್ನು ಮುಂದುವರಿಸಲು ಕರೆ ನೀಡಲಾಯಿತು.
ಕನ್ನೇರಿ ಶ್ರೀಗಳ ಹೇಳಿಕೆಗೆ ತೀವ್ರ ವಿರೋಧ
ಸಭೆಯಲ್ಲಿ ಮಾತನಾಡಿದ ಸಂಡೂರಿನ ನರಿ ಬಸವರಾಜ, ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಕಂಗೆಟ್ಟಿರುವ ಸನಾತನವಾದಿಗಳು ಕನ್ನೇರಿ ಶ್ರೀಗಳ ಮೂಲಕ ಕೆಟ್ಟ ಶಬ್ದಗಳೊಂದಿಗೆ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸಭೆಯು ಕನ್ನೇರಿ ಶ್ರೀಗಳ ‘ಬಸವ ತಾಲಿಬಾನಿಗಳು’ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿತು.
ಪ್ರಮುಖ ಆಗ್ರಹ:

ಗೌರವ ಸತ್ಕಾರ ಮತ್ತು ಪ್ರಮುಖ ನಿರ್ಣಯಗಳು
ಬಸವ ಸಂಸ್ಕೃತಿ ಅಭಿಯಾನದ ಬಳ್ಳಾರಿ ಜಿಲ್ಲಾ ಘಟಕದ ನೇತೃತ್ವ ವಹಿಸಿದ್ದ ಪೂಜ್ಯ ಪ್ರಭುಸ್ವಾಮಿಗಳಿಗೆ ಗೌರವ ಸತ್ಕಾರ ಮಾಡಲಾಯಿತು. ಸಂಡೂರಿನ ವಿವಿಧ ಶರಣ ಬಂಧುಗಳಿಗೆ ಬಸವರಕ್ಷೆ ನೀಡಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು ಈ ಕೆಳಗಿನಂತಿವೆ:
1. ಕನ್ನೆರಿ ಶ್ರೀಗಳ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ಕಾನೂನಾತ್ಮಕ ಕ್ರಮಕ್ಕೆ ಮನವಿ.
ರಾಜ್ಯ ಸರ್ಕಾರವು ಇತ್ತೀಚೆಗೆ ರೂಪಿಸುತ್ತಿರುವ ‘ಪ್ರಚೋದನಾಕಾರಿ ಭಾಷಣ ನಿಷೇಧ ಕಾನೂನು’ ಅಡಿಯಲ್ಲಿ ಕನ್ನೇರಿ ಶ್ರೀಗಳನ್ನು ಬಂಧಿಸಿ, ಜೈಲುಶಿಕ್ಷೆ ನೀಡಬೇಕೆಂದು ಶರಣ ಸಂಗಮ ಸಭೆಯಲ್ಲಿ ಒತ್ತಾಯಿಸಲಾಯಿತು.
2. ಸಂಡೂರಿನ ಅಲ್ಲಮಪ್ರಭು ದೇವರ ತಪೋವನದ ಅಭಿವೃದ್ಧಿ, ಬಸವ ಮಂಟಪ ನಿರ್ಮಾಣ ಹಾಗೂ ವಿಶ್ವಗುರು ಬಸವಣ್ಣ ಮತ್ತು ಅಲ್ಲಮಪ್ರಭು ದೇವರ ಮೂರ್ತಿ ಸ್ಥಾಪನೆಗೆ ಸಂಕಲ್ಪ.
3. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಪ್ರಾರಂಭಿಸಲು ಮನವಿ.
4. ಸಂಡೂರಿನ ವಿವಿಧ ಗ್ರಾಮಗಳಲ್ಲಿ ಶರಣ ಸಂಗಮ ಕಾರ್ಯಕ್ರಮಗಳ ಆಯೋಜನೆಗೆ ಸಂಕಲ್ಪ.
5. ಕೂಡಲಸಂಗಮದ 39ನೇ ಶರಣ ಮೇಳದಲ್ಲಿ (ಜ. 12-14, 2026) ಸಂಡೂರಿನಿಂದ ನೂರಾರು ಕಾರ್ಯಕರ್ತರು ಭಾಗವಹಿಸಲು ಕರೆ.
ವಂದನಾರ್ಪಣೆ ಮತ್ತು ಮಹಾಮಂಗಳದ ನಂತರ, 300ಕ್ಕೂ ಹೆಚ್ಚು ಬಸವ ಭಕ್ತರು ದಾಸೋಹದಲ್ಲಿ ಭಾಗವಹಿಸುವ ಮೂಲಕ ಶರಣ ಸಂಗಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

