ಸಾಣೇಹಳ್ಳಿಯಲ್ಲಿ ರಾಜಕೀಯ ಸುಧಾರಣೆ ತರಲು ಚಿಂತನ ಗೋಷ್ಠಿ

ಸಾಣೇಹಳ್ಳಿ

ಸರ್ವೋದಯ ಸಂಘಟನೆಯಿಂದ ಇತ್ತೀಚಿಗೆ ‘ನಮ್ಮ ನಡೆ ಸರ್ವೋದಯದೆಡೆಗೆ’ ಎನ್ನುವ ಪಾದಯಾತ್ರೆ ನಡೆದದ್ದು ಸಾರ್ವಜನಿಕರಿಗೆ ಗೊತ್ತು. ಆ ಸಂದರ್ಭದಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ, ಈ ಐದು ಕ್ಷೇತ್ರಗಳಲ್ಲಿ ಸುಧಾರಣೆ ಆಗಬೇಕು ಎನ್ನುವಂಥದ್ದು ಎಲ್ಲ ಸರ್ವೋದಯ ಸಂಘಟಕರ ಆಶಯವಾಗಿತ್ತು. ಈ ನೆಲೆಯಲ್ಲಿ ಇದೇ ತಿಂಗಳು ೩ ಮತ್ತು ೪ ರಂದು ಆಡಳಿತದಲ್ಲಿ ಸುಧಾರಣೆಯನ್ನು ತರುವ ಹಿನ್ನಲೆಯಲ್ಲಿ ಅಪರೂಪದ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಇದ್ದುದ್ದರಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡು ಅದರಂತೆ ಬಾಳಬೇಕೆನ್ನುವ ಸಂಕಲ್ಪ ಇರುವ ಕೆಲವರನ್ನು ಬರಮಾಡಿಕೊಳ್ಳುವಂಥ ಯೋಚನೆ ನಮ್ಮ ಸಂಘಟನೆಯದು. ಮುಖ್ಯವಾಗಿ ಡಿ.ಆರ್. ಪಾಟೀಲ, ಬಿ.ಆರ್. ಪಾಟೀಲ, ಮುಖ್ಯಮಂತ್ರಿ ಚಂದ್ರು, ಬಸವರಾಜ ಹೊರಟ್ಟಿ, ಬಿ.ಎಲ್. ಶಂಕರ್, ಎ.ಟಿ. ರಾಮಸ್ವಾಮಿ, ಎಂ. ಪಿ. ನಾಡಗೌಡ, ರವಿಕೃಷ್ಣಾರೆಡ್ಡಿ,

ವಿ. ಆರ್. ಸುದರ್ಶನ್, ಡಾ. ಗೋಪಾಲ ದಾಬಡೆ, ರವೀಂದ್ರಭಟ್ ಐನಕೈ, ಮಹಿಮಾ ಜೆ. ಪಟೇಲ್, ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಅಬ್ದುಲ್ ರೆಹಮಾನ ಪಾಷಾ, ಕೃಷ್ಣ ಭೈರೇಗೌಡ, ರಾಜಾರಾಮ ತೋಳ್ಪಾಡಿ, ದಿಲೀಪ್ ಕಾಮತ್ ಮತ್ತಿತರರನ್ನು ಆಹ್ವಾನಿಸಿದ್ದೇವೆ.

ಇವರೆಲ್ಲರೂ ೩ ಮತ್ತು ೪ ನೆಯ ತಾರೀಖಿನಂದು ಸಾಣೇಹಳ್ಳಿಯಲ್ಲಿ ವಿವಿಧ ವಿಚಾರಗಳ ಬಗ್ಗೆ ಮುಕ್ತವಾಗಿ ತಮ್ಮ ಚಿಂತನೆಯನ್ನು ಹಂಚಿಕೊಳ್ಳಲಿದ್ದಾರೆ.

ರಾಜಕೀಯ ಪರಿವರ್ತನೆ, ಬಸವಣ್ಣ ಕಂಡ ರಾಜಕಾರಣ, ಲೋಕನೀತಿ ಮತ್ತು ರಾಜನೀತಿ, ಯುವಕರ ಹೊಣೆಗಾರಿಕೆ, ರಾಜಕೀಯ ಸುಧಾರಣೆ, ಚುನಾವಣಾ ಸುಧಾರಣೆ ಇಂತಹ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರವಾದ ಚಿಂತನೆ ನಡೆಯಲಿದೆ. ಇದು ಮುಂದೆ ಬರುವಂಥ ಚುನಾವಣೆಗೆ ಒಂದು ಬದಲಾವಣೆಗೆ ಪ್ರೇರಣೆಯನ್ನು ನೀಡಬೇಕು ಎನ್ನುವಂಥದ್ದೇ ಸರ್ವೋದಯ ಸಂಘಟಕರ ಮೂಲ ಆಶಯವಾಗಿದೆ. ಈ ಮೂಲ ಆಶಯಕ್ಕೆ ತಳಹದಿ ಈ ಸಭೆ ಎನ್ನುವಂಥದ್ದು ಎಲ್ಲರ ಭಾವನೆ.

ನಂತರ ಬೇರೆ ಬೇರೆ ರೀತಿಯ ಸಭೆಗಳನ್ನು ಹಲವು ಕಡೆ ಮಾಡಿ ಕೇವಲ ರಾಜಕಾರಣಿಗಳನ್ನು ಎಚ್ಚರಿಸುವುದಷ್ಟೇ ಅಲ್ಲ; ಮತದಾರರನ್ನು ಪರಿವರ್ತಿಸುವುದೂ ಇದರ ಮೂಲ ಉದ್ದೇಶ. ಮತದಾರರು ರಾಜಕಾರಣಿಗಳನ್ನು ದೂರುವುದು, ರಾಜಕಾರಣಿಗಳು ಮತದಾರರನ್ನು ದೂರುವುದಾದರೆ ಸಮಾಜ ಇನ್ನಷ್ಟು ಹದಗೆಟ್ಟು ಹೋಗುತ್ತದೆ. ಇಬ್ಬರಲ್ಲೂ ಸುಧಾರಣೆ ಬರಬೇಕು. ಇಬ್ಬರಲ್ಲೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಈ ಸಂಘಟನೆಯ ಮೂಲ ಉದ್ದೇಶವಾಗಿದೆ. ಇಲ್ಲಿ ಜಾತಿ, ಧರ್ಮ, ಪಕ್ಷ ಮುಖ್ಯವಾಗದೇ ಆದರ್ಶಗಳು ಮುಖ್ಯವಾಗಬೇಕು ಎನ್ನುವ ಆಶಯ ಇದೆ. ಇಂತಹ ಅಪರೂಪದ ಸಭೆ ಎರಡು ದಿನಗಳ ಕಾಲ ಸಾಣೇಹಳ್ಳಿಯಲ್ಲಿ ನಡೆಯಲಿದೆ ಎಂದು ಸರ್ವೋದಯ ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Leave a comment

Leave a Reply

Your email address will not be published. Required fields are marked *