ಬೀದರ
ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಗುರುಬಸವಣ್ಣನವರ ಮೂರ್ತಿ ಅನಾವರಣಗೊಳಿಸಿ ಬಸವ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಜಯಘೋಷಣೆಯೊಂದಿಗೆ ಪೂಜ್ಯ ಡಾ.ಗಂಗಾಮಾತಾಜಿ ಹಾಗೂ ಒಂದು ವಾರದಿಂದ ಪ್ರವಚನ ನಡೆಸಿದ್ದ ಪೂಜ್ಯ ಬಸವಗೀತಾ ತಾಯಿಯವರ ನೇತ್ರತ್ವದಲ್ಲಿ ಬಸವ ಭಕ್ತರ ಮೆರವಣಿಗೆ ಸಂತಸದಿಂದ ಜರುಗಿತು. ನಂತರ ಗುರುಬಸವಣ್ಣನವರ ನೂತನ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಬಸವಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಅವರು ವಹಿಸಿಕೊಂಡಿದ್ದರು. ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಪುಟ್ಟ ಗ್ರಾಮದಲ್ಲಿ ತುಂಬಾ ಮಹತ್ತರವಾದ ಕಾರ್ಯ ಮಾಡಿದ್ದೀರಿ. ಬಸವಣ್ಣನವರ ಕಾರ್ಯಕ್ಕೆ ನಾನು ಸದಾ ಸಿದ್ಧ, ನಾನು ಕೂಡ ಬಸವಣ್ಣನವರಿಂದ ಪ್ರೇರಣೆ ಪಡೆದುಕೊಂಡಿದ್ದೇನೆ, ಎಂದರು.

ಸ್ಥಳೀಯ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬಸವ ತತ್ವದ ಕಾರ್ಯಗಳಿಗೆ ನಾನು ಸದಾ ಸಿದ್ಧನಿರುತ್ತೇನೆ. ನನ್ನಿಂದ ಆದ ಸಹಾಯವನ್ನು ಮಾಡುತ್ತ ಇಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೇನೆ, ಎಂದು ಹೇಳಿದರು.

ಪೂರ್ಣಚಂದ್ರ ಮೈನಾಳೆಯವರ ನೃತ್ಯಾಲಯ ತಂಡದಿಂದ ವಚನ ನೃತ್ಯ ನಡೆದವು. ಹಾಗೂ ಕನ್ನಡದ ಕೋಟ್ಯಾಧಿಪತಿ ಖ್ಯಾತಿಯ ಶರಣೆ ನಿವೇದಿತಾ ಹಾಗೂ ಚನ್ನಬಸವ ಅವರಿಂದ ಅನುಭವ ಮಂಟಪದಲ್ಲಿನ ಅಕ್ಕ-ಅಲ್ಲಮರ ಸಂವಾದವು ಪ್ರದರ್ಶಿಸಲ್ಪಟ್ಟಿತು. ವಚನ ವರ್ಷಿಣಿ ತಂಡದವರು ವಚನ ಪ್ರಾರ್ಥನೆಯನ್ನು ನೆರವೇರಿಸಿದರು.
ವೇದಿಕೆ ಮೇಲೆ ಬೈಲೂರಿನ ನಿಜಗುಣಾನಂದ ಶ್ರೀಗಳು, ಡಾ. ಅಕ್ಕ ಗಂಗಾಂಬಿಕೆ, ಪ್ರವಚನಕಾರರಾದ ಬಸವಗೀತಾ ತಾಯಿಯವರು, ಹುಲಸೂರಿನ ಶ್ರೀಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಬಸವರಾಜ ಧನ್ನೂರ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.