ಶಹಾಪುರ
ಬುದ್ಧ, ಬಸವ, ಡಾ.ಅಂಬೇಡ್ಕರ್ ಹಾಗೂ ೧೨ನೇ ಶತಮಾನದ ಶರಣರು ಕಂಡ ಸಮ ಸಮಾಜ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸರಕಾರ ಮುನ್ನಡೆದಿದ್ದು, ಸಾಮಾಜಿಕ ನ್ಯಾಯ ಮತ್ತು ಸ್ತ್ರೀ ಸ್ವಾತಂತ್ರವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ಆಯೋಜಿಸಿದ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧ, ಬಸವಾದಿ ಶರಣರು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಸಮುದಾಯಗಳಲ್ಲಿ ಮಹಾತ್ಮರು ಇದ್ದು ಸರ್ವ ಸಮುದಾಯಗಳು ಸೇರಿ ಒಗ್ಗಟ್ಟಿನಿಂದ ಮಹಾತ್ಮರ ಜಯಂತ್ಯುತ್ಸವಗಳು ಆಚರಿಸಿದಲ್ಲಿ ಜಯಂತಿಗಳಿಗೆ ಅರ್ಥ ಕಲ್ಪಿಸಲು ಸಾಧ್ಯವೆಂದು ತಿಳಿಸಿದರು.
ಪತ್ರಕರ್ತ, ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ಹೆಸರು ಕಾಮಧೇನು, ಕಲ್ಪವೃಕ್ಷ. ಬಸವ ಎಂಬ ಮೂರಕ್ಷರ ನೆಲೆಗೊಂಡರೆ ಅಸಾಧ್ಯವೂ ಸಾಧ್ಯವಾಗುತ್ತದೆ. ಬಸವ ಕೇವಲ ಹೆಸರಲ್ಲ. ಅದೊಂದು ಸಿದ್ಧಾಂತ. ದೇವರಾಗಬಹುದು ಬಸವಣ್ಣನಾಗುವುದು ತುಂಬಾ ಕಷ್ಟ. ಬಸವ ಪ್ರಜ್ಞೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ಮನುಷ್ಯ ಮನುಷ್ಯನಂತೆ ಬದುಕುವ ಹಕ್ಕು ಮತ್ತು ಭರವಸೆ ಕಳೆದುಕೊಂಡಾಗ ಬಸವ ನಮಗೆ ಪ್ರಜ್ಞೆಯಾಗಿ ನೆನಪಾಗುತ್ತಾರೆ. ಬಸವಣ್ಣನವರ ಇವನಾರವ, ಇವನಾರವ ಎನ್ನುವ ವಚನದಲ್ಲಿ ಭಯೋತ್ಪಾದನೆಯ ಮೂಲೋತ್ಪಾಟನೆಯೂ ಇದೆ. ಸ್ವಾತಂತ್ರ್ಯ, ಸಮಾನತೆ, ಜ್ಞಾನ, ತಿಳಿವಳಿಕೆ ಎನ್ನುವುದು ಕೇವಲ ಕೆಲವರ ಸ್ವತ್ತಾಗಿರುವುದನ್ನು ಒಡೆದು ಹಾಕಿ ಧರ್ಮ, ದೇವರು, ನಂಬಿಕೆ ಆಚರಣೆಗಳ ಬಗೆಗೆ ನಿಜವಾದ ಅರಿವು ಮೂಡಿಸಿದವರು ಬಸವಣ್ಣ. ಜಾತಿ, ಭೇದ, ವರ್ಣಭೇದ, ಲಿಂಗಭೇದ, ಮೇಲ್ವರ್ಗ, ಕೆಳವರ್ಗವನ್ನು ಅಳಿಸಿ ಹಾಕಿ ಸಮಾನತೆಯನ್ನು ತಂದುಕೊಟ್ಟವರು ಬಸವಣ್ಣನವರು ಎಂದು ಹೇಳಿದರು.
ತಾಲೂಕು ದಂಡಾಧಿಕಾರಿ ಉಮಾಕಾಂತ ಹಳ್ಳೆ ಜಯಂತ್ಯುತ್ಸವ ಕುರಿತು ಮಾತನಾಡಿದರು.
ನಗರದ ಸಿ.ಬಿ. ಕಮಾನ್ನಿಂದ ಬಸವೇಶ್ವರರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ನಗರಸಭೆ ಆವರಣದವರೆಗೆ ಜರುಗಿತು. ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಮೂರ್ತಿಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಹಲವಾರು ಗಣ್ಯರು ಮಾಲಾರ್ಪಣೆ ಮಾಡಿದರು.
ವೇದಿಕೆಯಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ, ಯುವ ಘಟಕದ ಅಧ್ಯಕ್ಷ ರಾಜಶೇಖರ ಪಾಟೀಲ ಮಡ್ನಾಳ, ನಗರಸಭೆ ಅಧ್ಯಕ್ಷೆ ಮಹೆರುನ್ನಿಸಾ ಬೇಗಂ, ಪೌರಾಯುಕ್ತ ರಮೇಶ ಬಡಿಗೇರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಸಮುದಾಯಗಳ ಮುಖಂಡರುಗಳಾದ ಚಂದ್ರಶೇಖರ ಸಾಹು ಆರಬೋಳ, ಸಿದ್ದಲಿಂಗಣ್ಣ ಆನೆಗುಂದಿ, ಶರಣಪ್ಪ ಮುಂಡಾಸ, ಸಾಹಿತಿ ಸಿದ್ದರಾಮ ಹೊನ್ಕಲ್, ಲಿಂಗಣ್ಣ ಪಡಶೆಟ್ಟಿ ಸಗರ, ಬಸವರಾಜ ಹೇರುಂಡಿ, ರೇವಣಸಿದ್ದಪ್ಪ ಕಲಬುರಗಿ, ಬಸವರಾಜ ಅರುಣಿ, ಸಣ್ಣ ನಿಂಗಣ್ಣ ನಾಯ್ಕೋಡಿ, ನೀಲಕಂಠ ಬಡಿಗೇರ್, ಯಲ್ಲಪ್ಪ ದೊಡ್ಮನಿ, ಶಿವಮಹಾಂತಪ್ಪ ಸಾಹು ಚಂದಾಪುರ, ಸೈಯದ್ ಮುಸ್ತಫಾ ದರ್ಬಾನ್, ಲಿಯಾಖತ್ ಪಾಶಾ, ಎಸ್ಡಿಪಿಐ ಸೈಯದ್ ಇಸಾಖ್ ಹುಸೇನ್, ಸೈಯದ್ ಎಸ್.ಎಂ. ಖಾದ್ರಿ, ಡಾ.ರವೀಂದ್ರನಾಥ ಹೊಸ್ಮನಿ, ನಾಗಪ್ಪ ತಹಸೀಲ್ದಾರ್, ರಾಮಣ್ಣ ಸಾದ್ಯಾಪುರ, ರುದ್ರಪ್ಪ ಹುಲಿಮನಿ, ರುದ್ರಪ್ಪ ಚಟ್ರಕಿ, ಸುರೇಶ ಅರುಣಿ ಸೇರಿದಂತೆ ನಗರಸಭೆ ಸರ್ವ ಸದಸ್ಯರುಗಳು ಹಾಗೂ ಇನ್ನಿತರ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.