ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶರಣತತ್ವ ಮುಟ್ಟಿಸುವ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಬಸವಾದಿ ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಅವರ ನಡೆ-ನುಡಿ ಒಂದೇ ಆಗಿತ್ತು. ಅದರಂತೆ ನಮ್ಮ ನಡೆ-ನುಡಿಗಳು ಒಂದಾಗಿರಬೇಕು. ಶ್ರಮರಹಿತ ಧನವನ್ನು ತಿರಸ್ಕರಿಸಿ, ನಿಮ್ಮದೇ ಬೆವರಿನಿಂದ ಗಳಿಸಿದುದನ್ನು ಉಣ್ಣಬೇಕು. ಅದರಲ್ಲೇ ಶರಣರ ಕಾಯಕ ತತ್ವವಿದೆ ಎಂದು ನಿವೃತ್ತ ನ್ಯಾಯಮೂರ್ತಿ, ಜಾಗತಿಕ ಲಿಂಗಾಯತ ಮಹಾಸಭಾದ ಹಿರಿಯ ಉಪಾಧ್ಯಕ್ಷ ಅರಳಿ ನಾಗರಾಜ ನುಡಿದರು.

ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಗದಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ಶಾಲಾ-ಕಾಲೇಜಿಗೊಂದು ಶರಣತತ್ವ ಚಿಂತನೆ” ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಮಾನವ ಸಮಾಜದಿಂದ ಏನೆಲ್ಲಾ ಪಡೆದಿದ್ದಾನೆ, ಕೊನೆಯಲ್ಲಿ ಅದರ ಋಣ ತೀರಿಸಿದಾಗ ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವ್ಯಕ್ತಿ ಉದ್ಧಾರವಾದರೆ, ದೇಶ ಉದ್ಧಾರವಾಗುತ್ತದೆ. ವಿದ್ಯಾರ್ಥಿಗಳ ಗುರಿ ಕೇವಲ ಸಿಲಬಸ್ ಒಂದೇ ಓದುವುದಲ್ಲ ಅದರಾಚೆಗೆ ತುಂಬಾ ಸಂಗತಿಗಳಿವೆ ಸಾಧ್ಯವಾದುದನ್ನು ಓದಿ. ನೀನು ಗಳಿಸಿದ ಜ್ಞಾನವನ್ನು ದೇಶದ ಒಳಿತಿಗಾಗಿ ಬಳಸು ದೇಶಭಕ್ತನಾಗುತ್ತೀಯ ಎಂದು ನಾಗರಾಜ ಹೇಳಿದರು.

ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶರಣ ತತ್ವಗಳು ವಿದ್ಯಾರ್ಥಿಗಳಿಗೆ ತಲುಪಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು, ಮಕ್ಕಳು ಶರಣ ಮಾರ್ಗಿಗಳಾಗಬೇಕೆಂಬ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐ.ಬಿ. ಬೆನಕೊಪ್ಪ ವಿಶ್ರಾಂತ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ, ಇವರು ಮಾತನಾಡಿ ಬಸವ ತತ್ವ ಚಿಂತನೆ, ಸಮ-ಸಮಾಜದ ತತ್ವಗಳು ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಶರಣರ ತತ್ವಗಳು ಮಾನವರ ಬದುಕಿಗಾಗಿ ಇವೆ. ಅವುಗಳಲ್ಲಿ ಜೀವನ ದರ್ಶನವಿದೆ. ಅವುಗಳು ಮನಕುಲದ ದಾರಿ ದೀವಿಗೆಗಳಾಗಿದ್ದು, ಇವುಗಳ ನಿಜಾಚರಣೆಯಿಂದ ಮಾನವ ಜೀವನ ಪಾವನವಾಗುವುದು ಎಂದರು.

ಅಧ್ಯಕ್ಷೀಯ ನುಡಿಯಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ಗೌಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಎಂದಿಗೂ ಬತ್ತಬಾರದು. ಓದು ನಿತ್ಯದ ಕಾಯಕವಾಗಬೇಕು. ಓದಿನಿಂದ ನಮ್ಮ ಬಾಳಬುತ್ತಿಗೆ ದಾರಿಯಾದರೆ, ಶರಣ ತತ್ವಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ. ನಿಜವಾಗಲು ತಮ್ಮ ಜೀವನದಲ್ಲಿ ಶರಣ ತತ್ವಗಳನ್ನು ಅಳವಡಿಸಿಕೊಂಡು ಬಾಳುತ್ತಿರುವ ಅರಳಿ ನಾಗರಾಜು ಅವರ ಜೀವನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿದೆ ಎಂದರು. ಕಾಲೇಜಿಗೆ ಪುಸ್ತಕಗಳನ್ನು ದಾನ ಮಾಡಿದ್ದನ್ನು ಕೊಂಡಾಡಿದರು.

ವೇದಿಕೆಯ ಮೇಲೆ ಗದಗ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಕಾಶ ಅಸುಂಡಿ, ಕದಳಿ ವೇದಿಕೆಯ ಅಧ್ಯಕ್ಷೆ ಸುಲೋಚನ ಐಹೊಳಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಿ.ಎಸ್. ಬಾಪುರಿ, ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ, ಡಾ. ಪ್ರಕಾಶ ಹೊಸಮನಿ, ಪಾರ್ವತಿ ಬಳಿಗೇರ, ಗಿರಿಜಾ ಹಸಬಿ, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಮಹಾವಿದ್ಯಾಲಯದ ಬೋಧಕರು, ಪ್ರಶಿಕ್ಷಣಾರ್ಥಿಗಳು, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಕುಮಾರ ಪೃಥ್ವಿ ಸ್ವಾಗತಿಸಿದರು, ಕಾವೇರಿ ಹೊಂಬಳ ನಿರೂಪಿಸಿದರು, ಸುಧಾ ಹುಚ್ಚಣ್ಣವರ ವಂದಿಸಿದರು. ವಚನ ನಾಂದಿಯೊಂದಿಗೆ ಆರಂಭವಾದ ಕಾರ್ಯಕ್ರಮ, ವಚನ ಮಂಗಲದೊಂದಿಗೆ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *