ಬೆಳಗಾವಿ
ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ.ಗು ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆಧುನಿಕ ವಚನಗಳ ಕುರಿತು ಡಾ ಅನ್ನಪೂರ್ಣ ಹಿರೇಮಠ ಅವರಿಂದ ಉಪನ್ಯಾಸ ರವಿವಾರ ಜರುಗಿತು.
ಅವರು ಮಾತನಾಡುತ್ತ, ಸಮಾಜದ ಮತ್ತು ಮನುಕುಲದ ಉದ್ಧಾರಕ್ಕಾಗಿ ೧೨ನೇ ಶತಮಾನದಲ್ಲಿ ವಚನ ಕ್ರಾಂತಿಯೇ ಆಗಿದೆ. ನಮ್ಮ ಮನಸ್ಸಿಗೆ ತಾಳ್ಮೆ ಅತೀ ಮುಖ್ಯ, ಅಚಲತೆಯಿಂದ ಹಿಡಿದ ಕಾರ್ಯ ಮುಗಿಸುವ ಛಲಬೇಕು. ವಿಚಲಿತನಾಗಬಾರದು ಏನೇ ಬಂದರೂ ಮಾಡಿ ಮುಗಿಸುವೆನೆಂಬ ದೃಢ ಸಂಕಲ್ಪವಿದ್ದರೆ ಎಂತಹದನ್ನು ಸಾಧಿಸಬಹುದಾಗಿದೆ. ದೇವನಾಮಸ್ಮರಣೆ ನಿತ್ಯ ಸತ್ಯವಾಗಬೇಕು. ನುಡಿದಂತೆ ನಡೆ ಇದೇ ಜನ್ಮ ಕಡೆ ಎಂಬ ಶರಣರ ನುಡಿಯಂತೆ ನಡೆದು ತೋರುವ ಧೀರತೆ ಎಲ್ಲರಲ್ಲಿ ಬರಬೇಕು. ಶಾಲೆಗಳಲ್ಲಿ ಪ್ರಾರ್ಥನೆ ವಾರಕ್ಕೆ ಒಂದು ದಿನ ಒಂದು ಗಂಟೆಯಾದರೂ ವಚನಗಳಿಂದ ಜರುಗಬೇಕು ಎಂದು ಅಭಿಪ್ರಾಯಪಟ್ಟರು.

ನಮ್ಮ ಒಗ್ಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಯಾವ ಆಸೆ ದುರಾಸೆಗೆ ಬಲಿಯಾಗದೆ ಒಂದಾಗಿ ಕೆಲಸ ಮಾಡಿದರೆ ಸಫಲವಾಗುವುದರಲ್ಲಿ ಎರಡು ಮಾತಿಲ್ಲ.ಮತ್ತು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಸಂಸ್ಕಾರವಂತ ನಾಗರಿಕರ ನಿರ್ಮಾಣ ಸಂಸ್ಕಾರವಂತ ಮನಗಳಿಂದ ಮಾತ್ರ ಸಾಧ್ಯ. ಸಂಸ್ಕಾರವನ್ನು ಕಲಿಸಿದರೆ ಸಮಾಜ ಸುಸಂಸ್ಕೃತ ನಾಗರಿಕನನ್ನು ಹೊಂದಬಲ್ಲದು ಎಂದು ಅಭಿಪ್ರಾಯಪಟ್ಟರು.
ವಚನಗಳು ಆಧುನಿಕ ಪುರಾತನ ಎಂಬುದಿಲ್ಲ ಸಮಾಜದಲ್ಲಿಯ ಕಳೆಕೀಳಲು ಸಹಾಯಕವಾಗುವ ನುಡಿಮುತ್ತುಗಳೆಲ್ಲ ವಚನಗಳೇ ಆಗಿವೆ. ಹೀಗೆ ಇರಬೇಕು ಎಂದು ಉಪದೇಶ ಮಾಡುವುದಕ್ಕಿಂತ ನಾವು ಆದರ್ಶರಾಗಿ ಬಾಳಿ ತೋರಿದರೆ ತಾವಾಗಿಯೇ ಅನುಸರಿಸಿ ಬಾಳುತ್ತಾರೆ ಎಂದು ಹೇಳಿದರು.
ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಈರಣ್ಣ ದೇಯನ್ನವರ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ವಚನಗಳ ಅಧ್ಯಯನ ಎಲ್ಲರೂ ಮಾಡಬೇಕು ಪ್ರತಿಯೊಬ್ಬರಿಗೂ ಮನೆಮನೆಗೆ ಬಸವಣ್ಣನವರ ವಚನಗಳು ಮುಟ್ಟುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಂಗಲಾ ಜಿ. ಕಾಕತಿಕರ ದಾಸೋಹ ಸೇವೆ ನಡೆಸಿಕೊಟ್ಟರು. ಶಂಕರ ಗುಡಸ, ಸದಾಶಿವ ದೇವರಮನಿ, ಶರಣ ಕರ್ಲಿಂಗನವರ, ಅನೀಲ ರಘಶೆಟ್ಟಿ, ಮಹಾಂತೇಶ ಮೆಣಸಿನಕಾಯಿ, ಬಸವರಾಜ ಕರಡಿಮಠ, ಸಿದ್ಧಪ್ಪ ಸಾರಾಪುರಿ, ವಿ.ಕೆ.ಪಾಟೀಲ, ಕರಿಕಟ್ಟಿ, ಆನಂದ ಕಕಿ೯, ಬಿ.ಪಿ. ಜೇವಣಿ, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಶೇಖರ ವಾಲಿ ಇಟಗಿ, ಮಹದೇವ ಕೆಂಪಿಗೌಡರ, ವಿದ್ಯಾ ಕಕಿ೯, ಸುವರ್ಣ ತಿಗಡಿ, ಗುತ್ತಿಗೊಳಿ, ನೇತ್ರಾ ರಾಮಾಪೂರಿ, ಶಾಂತಾ ಕ೦ಬಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಶರಣೆಯರು ವಚನ ಗಾಯನ ನಡೆಸಿದರು.
