ಬಾಗಲಕೋಟೆ
ಶೋಷಣೆಗೆ ಒಳಗಾದ ಸಣ್ಣ, ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಜಾತಿ, ಮತಗಳ ಭೇದ ತೊರೆದು ಕ್ರಾಂತಿ ಮಾಡಿದ ಬಸವಾದಿ ಶರಣರ ತತ್ವ, ಆದರ್ಶಗಳು ಇಂದು ಅವಶ್ಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮದಿಂದ ನಡೆಯದೇ ಧರ್ಮ, ಧರ್ಮಗಳಲ್ಲಿ ಕದನ, ಮೇಲು–ಕೀಳು ಅಸ್ಪೃಶ್ಯತೆ ಹೋಗದಿದ್ದರೆ ಮುಂದೊಂದು ದಿನ ಮುಂದಿನ ಪೀಳಿಗೆ ಬೇರೆ ಧರ್ಮ ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುವುದಕ್ಕಿಂತ ಪೂರ್ವದಲ್ಲಿ ಮಠಾಧಿಪತಿಗಳು, ಬುದ್ಧಿಜೀವಿಗಳು, ಸಾಮಾಚಿಕ ಚಿಂತಕರು ಹಾಗೂ ರಾಜಕಾರಣಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಶರಣರ ತತ್ವ ಆಚರಣೆಗೆ ಬದ್ಧರಾಗಬೇಕಿದ್ದು, ಅಸ್ಪೃಶ್ಯತೆ ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಯುವ ಮಿತ್ರರು ಮುಂದಾಗಬೇಕು. ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗೂಡುವ ಅಗತ್ಯವಿದೆ. ಉದ್ಯೋಗದಿಂದ ವಂಚಿತರಾಗಿ ಎಲ್ಲ ಸಮಾಜಗಳು ಬೀದಿ ಪಾಲಾಗುತ್ತಿವೆ. ಮೂಲ ಕಸಬನ್ನು ಗೌರವಿಸಿ ಕಾಲಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ಕೊಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಶಿರೂರ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಅನುಭಾವ ನೀಡಿದರು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಸಮುದಾಯ ಮುಖಂಡರಾದ ಮಲ್ಲಣ್ಣ ಹಡಪದ, ಅಶೋಕ ನಾವಿ, ಲಕ್ಷ್ಮಣ ಹಡಪದ, ಎಚ್.ಪಿ. ವೈದ್ಯ ಮತ್ತಿತರರು ಇದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1