ಕಲ್ಯಾಣ ಕ್ರಾಂತಿಯನ್ನು, ವೈದಿಕರ ಕರಾಮತ್ತುಗಳನ್ನು ತೋರಿಸುವ ದೃಷ್ಯಗಳು ಇಲ್ಲವೇ ಇಲ್ಲ. ವಚನ ದರ್ಶನ ತಂಡ ಕಲ್ಯಾಣದಲ್ಲಿ ನಡೆದ್ದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ, ಬರೀ ಭಕ್ತಿಯ ಪ್ರಕಟಣೆ ಎಂದು ಹೇಳುತ್ತಾ ಊರೂರು ತಿರುಗುತ್ತಿದೆ. ಶರಣರ ಶಕ್ತಿಯ ಸಂದೇಶವೂ ಇಷ್ಟೇ.
ಹುಬ್ಬಳ್ಳಿ
ಶರಣರ ಶಕ್ತಿ ಚಲನ ಚಿತ್ರ ವಾದವಿವಾದಗಳ ನಡುವೆ ನೆನ್ನೆ ಉತ್ತರ ಕರ್ನಾಟಕದ ಹಲವಾರು ನಗರಗಳ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ.
ಕಾಶ್ಮೀರದ ಅರಸು ಮಹದೇವ ಭೂಪಾಲ ಬಸವಣ್ಣನವರನ್ನು ಕೊಲೆ ಮಾಡಲು ಚೂರಿ ಚಿಕ್ಕಣ್ಣನನ್ನು ಕಳಿಸುತ್ತಾನೆ. ಇಲ್ಲಿಂದ ಆರಂಭವಾಗುವ ಚಿತ್ರ ಮುಂದುವರೆದು ಆತ ಕಲ್ಯಾಣಕ್ಕೆ ಬಂದು ಅನುಭವ ಮಂಟಪ ಸೇರಿಕೊಳ್ಳುವುದನ್ನು ತೋರಿಸುತ್ತದೆ. ಅಲ್ಲಿ ಕೆಲವು ಶರಣರ ಪರಿಚಯವನ್ನು ಬೇರೆ ಬೇರೆ ಶರಣರು ಮಾಡುತ್ತಾರೆ. ಇವೇ ಚಿತ್ರದ ಪ್ರಮುಖ ದೃಷ್ಯಗಳು.
ಬಸವಣ್ಣನವರ ಪಾತ್ರಧಾರಿ ಮಂಜುನಾಥಗೌಡ ಪಾತ್ರಕ್ಕೆ ಗೌರವ ಸಲ್ಲಿಸಿದ್ದಾರೆ, ಆದರೆ ಬಸವಣ್ಣನವರ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ. ಸೂಳೆ ಸಂಕವ್ವೆ ಶರಣೆಯಾಗುವ ದೃಷ್ಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇದು ಇಡೀ ಚಿತ್ರದ ಹೈಲೈಟ್.
ಈ ಚಿತ್ರದಲ್ಲಿರುವ ಸಮಸ್ಯೆಗಳು ಪಟ್ಟಿ ಮಾಡಿದಷ್ಟೂ ಬೆಳೆಯುತ್ತವೆ. ಇದು ಅತಿ ಕಡಿಮೆ ಬಜೆಟಿನ ಚಿತ್ರ ಎನ್ನುವುದು ತಟ್ಟನೆಯೇ ಎದ್ದು ಕಾಣುವ ಅಂಶ.

ದುಡ್ಡು ಉಳಿಸಲು ಅನುಭವ ಮಂಟಪ ಹಾಗೂ ಬಿಜ್ಜಳನ ಆಸ್ಥಾನ ಚಿತ್ರಿಸಲು ಒಂದೇ ಸೆಟ್ ಬಳಸಿದ್ದಾರೆ. ಅಂದರೆ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳು ಕೂರುವ ಶೂನ್ಯ ಸಿಂಹಾಸನ ಮತ್ತು ಬಿಜ್ಜಳ ತನ್ನ ಆಸ್ಥಾನದಲ್ಲಿ ಕೂರುವ ಸಿಂಹಾಸನ ಒಂದೇ! ಬಿಜ್ಜಳನ ಸಿಂಹಾಸನದ ಮೆಟ್ಟಲುಗಳಲ್ಲಿ ಷಟ್ಸ್ಥಲದ ಹಂತಗಳನ್ನು ಬರೆದಿರುವ ವಿಚಿತ್ರ ಕಾಣುವುದು ಇದೇ ಕಾರಣಕ್ಕಾಗಿ. ಶರಣರ ವಾಸದ ಗುಡಿಸಲುಗಳು ತೀರಾ ಕಳಪೆಯಾಗಿವೆ. ಅನುಭವ ಮಂಟಪದ ಸೆಟ್ಟಿನಲ್ಲಿಯೇ ಅರ್ಧ ಚಿತ್ರ ಮುಗಿದುಹೋಗುತ್ತದೆ.
ಚಿತ್ರ ಕಥೆ, ನಿರ್ದೇಶನ, ಸಂಕಲನ, ಸಂಭಾಷಣೆ ಎಲ್ಲದರಲ್ಲಿಯೂ ಚಿತ್ರ ಅರ್ಧ ಬೆಂದ ಅನುಭವ ನೀಡುತ್ತದೆ. ಚಿತ್ರ ಕಥೆ ಎಲ್ಲೊ ಹೋಗಿ ಎಲ್ಲೋ ಸೇರುತ್ತದೆ. ನೀಲಾಂಬಿಕಾ ಹಾಗೂ ಗಂಗಾಂಬಿಕಾ ಪಾತ್ರಗಳ ಪರಿಚಯವೆ ಇಲ್ಲ. ಹುಬ್ಬಳ್ಳಿ ಮೂರುಸಾವಿರ ಮಠದ ದೃಷ್ಯದ ಸಂದರ್ಭ ಸರಿಯಾಗಿ ತೋರಿಸಿಲ್ಲ.

ಕಲ್ಯಾಣ ಕ್ರಾಂತಿಯನ್ನು ಹೋಗಲಿ ಶರಣರ ಯಾವುದೇ ಕ್ರಾಂತಿಕಾರಕ ಹೆಜ್ಜೆಗಳನ್ನು ತೋರಿಸುವ ಯಾವುದೇ ಆಸಕ್ತಿ ಚಿತ್ರಕ್ಕಿಲ್ಲ. ವೈದಿಕರು ವಚನಗಳನ್ನು ಸುಡುವುದು, ಎಳೆ ಹೂಟೆ ಶಿಕ್ಷೆ, ಬಸವಣ್ಣನವರು ಲಿಂಗೈಕ್ಯರಾಗುವ ದೃಷ್ಯಗಳು ಇಲ್ಲ. ಹರಳಯ್ಯನವರ ಶರಣು ಶರಣಾರ್ಥಿ ಪ್ರಸಂಗವನ್ನೂ ಕೈಬಿಟ್ಟಿದ್ದಾರೆ. ಮಧುವರಸರ ಮಗಳಾದ ಲಾವಣ್ಯಳ ಕೊರಳಲ್ಲಿ ಇಷ್ಟಲಿಂಗ ಇದೆ. ಶೀಲವಂತ ಲಾವಣ್ಯ ಮೊದಲೆ ಪ್ರೇಮಿಸಿರುವಂತೆ ತೋರಿಸಿದ್ದಾರೆ. ಮದುವೆಯಾದ ನಂತರ ಅವರಿಬ್ಬರ ಹತ್ಯೆಯಾಗುತ್ತದೆ.
ವೈದಿಕರ ಕರಾಮತ್ತುಗಳನ್ನು ತೋರಿಸುವ ದೃಷ್ಯಗಳು ಇಲ್ಲವೇ ಇಲ್ಲ. ನಾರಾಯಣ ಕ್ರಮಿತ, ಗೋವಿಂದ ಭಟ್ಟ, ಮುಕುಂದ ಭಟ್ಟ, ವಿಷ್ಣು ಭಟ್ಟ, ಕೃಷ್ಣ ಪೆದ್ದಿ, ಮುರಾರಿ ಕ್ರಮಿತ, ಕೇಶವ ಭಟ್ಟ ಪಾತ್ರಗಳೂ ಇಲ್ಲ. ವಚನ ದರ್ಶನ ತಂಡ ಕಲ್ಯಾಣದಲ್ಲಿ ನಡೆದ್ದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ, ಬರೀ ಭಕ್ತಿಯ ಪ್ರಕಟಣೆ ಎಂದು ಹೇಳುತ್ತಾ ಊರೂರು ತಿರುಗುತ್ತಿದೆ. ಶರಣರ ಶಕ್ತಿಯ ಸಂದೇಶವೂ ಇಷ್ಟೇ.
ಎರಡು ಹಾಡು ಚನ್ನಾಗಿವೆ. ಒಟ್ಟಾರೆ ಸಂಗೀತ ಸಾಮಾನ್ಯವಾಗಿದೆ. ಅಭಿನಯದಲ್ಲಿ ಶೀಲವಂತ, ಸಂಕವ್ವೆ, ಚನ್ನಬಸವಣ್ಣನ ಪಾತ್ರಗಳು ಉತ್ತಮವಾಗಿವೆ.

ನಿರ್ದೇಶಕ ದಿಲೀಪ್ ಶರ್ಮಾ ಅವರು ಈ ಚಿತ್ರ ಮಾಡುವ ಮೊದಲು ಒಮ್ಮೆ ಶರಣರ ಇತಿಹಾಸವನ್ನು ಓದಬೇಕಾಗಿತ್ತು.
ಇಷ್ಟು ಕಡಿಮೆ ಬಜೆಟಿನ, ಸಮಸ್ಯೆಗಳ ಆಗರವಾಗಿರುವ ಚಿತ್ರವನ್ನು ಮಾಡುವ ಅವಶ್ಯಕತೆ ಏನಿತ್ತು? ಒಂದು ಒಳ್ಳೆ ಚಿತ್ರ ಮಾಡುವುದಕ್ಕಿಂತಲೂ ಬೇರೆ ಏನೋ ಉದ್ದೇಶ ಇಟ್ಟುಕೊಂಡು ಈ ಚಿತ್ರ ತೆಗೆದಿರುವ ಹಾಗೆ ಕಾಣಿಸುತ್ತದೆ.
ಇದರ ಗುಣಮಟ್ಟವನ್ನು ಮತ್ತು ಉದ್ದೇಶ ನೋಡಿದರೆ ಬಸವ ಸಂಘಟನೆಗಳು ಮರು ಸೆನ್ಸಾರ್ ಮಾಡಿಸಿಯೇ ಚಿತ್ರದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕಿತ್ತು ಅನಿಸುತ್ತದೆ. ಈಗಲಾದರೂ ಟ್ರೇಲರ್ ನಲ್ಲಿ ಮತ್ತು ಮೊದಲ ಆವೃತ್ತಿಯಲ್ಲಿ ಇದ್ದ ಶರಣರನ್ನು ಅವಹೇಳನ ಮಾಡುವ ದೃಶ್ಯ ಮತ್ತು ಸಂಭಾಷಣೆಗಳು ಎಲ್ಲೂ ಆಚೆ ಬರದಿರುವ ಹಾಗೆ ಎಚ್ಚರದಿಂದ ಇರಬೇಕು.
ನಾವು ಹೋಗಿದ್ದ ಚಿಕ್ಕ ಚಿತ್ರಮಂದಿರ ಪಾತ್ರ ಮಾಡಿದ್ದವರ ಕುಟುಂಬದವರಿಂದಲೇ ತುಂಬಿತ್ತು. ಇವತ್ತಿನಿಂದ ಸಾಮಾನ್ಯ ಪ್ರೇಕ್ಷಕರು ಚಿತ್ರದ ಭವಿಷ್ಯ ಬರೆಯುತ್ತಾರೆ. ಆದರೆ ಇದು ಜನ ಹೋಗಿ ನೋಡುವ ಚಿತ್ರಕ್ಕಿಂತಲೂ ಜನರನ್ನು ಕರೆದುಕೊಂಡು ಹೋಗಿ ತೋರಿಸುವ ಚಿತ್ರದ ಹಾಗೆ ಕಾಣಿಸುತ್ತದೆ.
ಬಸವಾದಿಶರಣರ ನಿಜ ಇತಿಹಾಸವನ್ನ ಮತ್ತು ಬಸವಣ್ಣನವರ ಸಾಮಾಜಿಕ ಚಿಂತನೆಯನ್ನ ಹಾಗು ಬಸವ ತತ್ವಸಿದ್ದಾಂತಗಳನ್ನ ಮಾದ್ಯಮ ಮುಖಾಂತರ ನೈಜವಾಗಿಯೇ ತೋರಿಸಿದ್ದರೆ ಒಳ್ಳೆಯದಿತ್ತು ಯಾಕಂದ್ರೆ ನಿಜ ಸ್ಥಿತಿಯನ್ನು ಎಲ್ಲರೂ ಅರಿತು ಜಗತ್ತಿಗೆ ಮತ್ತು ನಮ್ಮ ರಾಷ್ಟ್ರಕ್ಕೆ ಶರಣರು ಕೊಟ್ಟ ಕೊಡುಗೆ ತಿಳಿಯುತಿತ್ತು. ಮತ್ತು ಭಾರತವು ವೈಜ್ಞಾನಿಕ,ಆಧ್ಯಾತ್ಮಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತಿತ್ತು
ಈ ಚಿತ್ರವೂ “ವಚನ ದರ್ಶನ” ಪುಸ್ತಕದಂತೆ ಸಂಚಿನ ಭಾಗ.
ಹೆಚ್ಚಿನ ನಿರಿಕ್ಷೆ ಇಲ್ಲದಿದ್ದರೂ ಅಲ್ಪ ಉತ್ತಮ ನಿರೀಕ್ಷೆ ಇತ್ತು. ಈ ವಿವರವಾದ ನೋಡುಗರ ಅಭಿಪ್ರಾಯ ಬಸವ ಭಕ್ತರಿಗೆ ನಿರಾಸೆ ಗೊಳಿಸಿರ ಬಹುದು. ವಿವರ್ಷಕರು ವಿಶ್ಲೇಷಿಸಿರುವಂತೆ ಅಂದಿನ ಸಮಾಜದ ನೈಜ ಪರಿಸ್ಥಿತಿ,ವೈದಿಕರ ಶೋಷಣೆ,ಕಲ್ಯಾಣದಲ್ಲಾದ ಅಹಿತಕರ ಘಟನೆಗಳ ಪ್ರಧರ್ಶನ ಇಲ್ಲದಮೇಲೆ ಇದು ಇತಿಹಾಸ ತಿರಿಚುವ ಪ್ರಯತ್ನ ಎಂದು ನಂಬಲೇ ಬೇಕಾಗುತ್ತದೆ.
ವಿಶ್ವ ಗುರು ಬಸವಣ್ಣ ಮತ್ತು ಶರಣರ ಕುರಿತೂ ಪೂರ್ಣ ಪ್ರಮಾಣದ ಅಧ್ಯಯನ ಮಾಡದೇ ಅಪೂರ್ಣ ಚಿತ್ರ ನಿರ್ಮಾಣದ ಉದ್ದೇಶವಾದರೂ ಏನು? ಕ್ರಾಂತಿಕಾರಿ ಬಸವಣ್ಣನವರು ಶರಣರ ಚಳುವಳಿ ಇಲ್ಲದ ಚಿತ್ರ. ಅಪೂರ್ಣ.