ಬೆಂಗಳೂರು
ಬಸವಕಲ್ಯಾಣದಲ್ಲಿ ಖಾಸಗಿ ವಿಶ್ವವಿದ್ಯಾಲಯ ಪ್ರಾರಂಭಿಸಲು 25 ಎಕರೆ ಜಮೀನು ನೀಡಲಾಗುವುದು, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು.
ಇತ್ತೀಚೆಗೆ ಲಿಂಗಾಯತ ಮಠಾಧೀಶರ ಮತ್ತು ಮಂತ್ರಿಗಳ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು 100 ಎಕರೆ ಜಾಗ ಮತ್ತು ನೂರು ಕೋಟಿ ಅನುದಾನಕ್ಕೆ ಮನವಿ ಮಾಡಿದ್ದರು.
2026-7 ಸಾಲಿನ ಆಯವ್ಯಯವನ್ನು ಮಂಡಿಸುತ್ತಾ ಸಿದ್ದರಾಮಯ್ಯ ತಮ್ಮ ಸರಕಾರ ಬುದ್ಧನ ಕರುಣೆ, ಬಸವಣ್ಣನವರ ಕಾಯಕ ನಿಷ್ಠೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಈ ಹಣಕಾಸು ವರ್ಷದಲ್ಲಿ ‘ಅನುಭವ ಮಂಟಪ’ ಹಾಗೂ ಬಸವಣ್ಣ ಜೈವಿಕ ನಿರ್ಮಿಸಲಾಗುವುದು ಎಂದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ‘ಅನುಭವ ಮಂಟಪ’ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು, ಎಂದು ಆಶ್ವಾಸನೆ ನೀಡಿದರು.
ಬೆಂಗಳೂರಿನಲ್ಲಿ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನವನ್ನು
ನಿರ್ಮಿಸಲಾಗುವುದು, ಎಂದು ಹೇಳಿದರು.
ಜೊತೆಗೆ ಮಕ್ಕಳಿಗಾಗಿ ಪಂಪ, ರನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ, ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು, ಎಂದು ಹೇಳಿದರು.
