ಸಿರಗುಪ್ಪ
ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ಶಾರದಾ ಚಂದ್ರಶೇಖರ ಅವರ ನೂತನ “ಬಸವ ದೀಪ್ತಿ ನಿಲಯ” ಗುರು ಪ್ರವೇಶವು ಲಿಂಗಾಯತ ಧರ್ಮದ ನಿಜಾಚರಣೆಯೊಂದಿಗೆ ಧರ್ಮ ಜಾಗೃತಿ ಕಾರ್ಯಕ್ರಮವು ರವಿವಾರ ಜರುಗಿತು.
ಬೆಳಿಗ್ಗೆ ಎಂಟು ಗಂಟೆಗೆ ಸಿರಿಗೇರಿ ವಿರಕ್ತ ಮಠದಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಅಂದರಾಳು, ಬಳ್ಳಾರಿ, ಸಿರುಗುಪ್ಪ ಹಾಗೂ ಸಿರಿಗೇರಿಯ ಬಸವ ಬಳಗಗಳಿಂದ ವಚನ ಸಾಹಿತ್ಯವನ್ನು ಹೊತ್ತು ಪಥ ಸಂಚಲನ ಜರುಗಿತು. ನಂತರ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಸಾನಿಧ್ಯ ವಹಿಸಿದ್ದ ಬಸವರಾಜಪ್ಪ ವೆಂಕಟಾಪುರ ಅವರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು 28 ಶರಣರಿಗೆ ಲಿಂಗಧಾರಣೆಯನ್ನು ಮಾಡಲಾಯಿತು.

ಅನುಭಾವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಸವರಾಜಪ್ಪನವರು, ಲಿಂಗಾಯತ ಧರ್ಮದ ಪ್ರಕಾರ ಮಾಡುವ ನಿಜಾಚರಣೆಯ ಗುರುಪ್ರವೇಶದ ಮಾಹಿತಿ ನೀಡಿದರು.
ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪಿ. ರುದ್ರಪ್ಪ ಅವರು ಲಿಂಗಾಯತ ಧರ್ಮವನ್ನು ಅಳವಡಿಸಿಕೊಳ್ಳುವುದರಿಂದ ನಾವು ಹೇಗೆ ಮೌಢ್ಯತೆಗಳನ್ನು ತೊಡೆದು ಹಾಕಬಹುದು ಎಂದು ತಿಳಿಸಿದರು.

ಸಿರುಗುಪ್ಪ ಅಕ್ಕನ ಬಳಗದ ಸದಸ್ಯೆ ಶರಣೆ ಸರ್ವಮಂಗಳ ವಿರುಪಾಕ್ಷಿಗೌಡ ಅವರು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಅನುಭಾವ ನೀಡಿದರು.
ಎಲ್ಲಾ ಸ್ಥಳೀಯ ಬಸವಪರ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಜಾಚರಣೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.