೫೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸೊಲ್ಲಾಪುರ
ವಚನಗಳು ಕನ್ನಡ ಭಾಷೆಯ ಶ್ರೀಮಂತಿಕೆ, ಅದರ ತಾತ್ವಿಕ ಆಳವನ್ನೂ ಪ್ರತಿಬಿಂಬಿಸುತ್ತವೆ. ಇದರಲ್ಲಿ ಸಾಮಾಜಿಕ ಸಮಾನತೆ, ನೈತಿಕತೆಯಂತಹ ಜೀವನ ಮೌಲ್ಯಗಳ ಸಂದೇಶ ಇದೆ. ವಚನ ಸಾಹಿತ್ಯದಿಂದ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ ಎಂದು ಸಂಗಮೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಋತುರಾಜ ಬುವಾ ಹೇಳಿದರು.
ಶುಕ್ರವಾರ ಇಲ್ಲಿಯ ಸಂಗಮೇಶ್ವರ ಮಹಾವಿದ್ಯಾಲಯ ಕನ್ನಡ ವಿಭಾಗವು ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಚನಗಳಲ್ಲಿ ಜೀವನ ಮೌಲ್ಯಗಳಿದ್ದು ವಿದ್ಯಾರ್ಥಿದೆಸೆಯಿಂದಲೇ ಅವುಗಳ ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳ ಜೀವನ ಸುಂದರವಾಗುತ್ತದೆ. ಸ್ಪರ್ಧೆಯಿಂದ ಈ ಮೌಲ್ಯಗಳನ್ನು ಮಕ್ಕಳಿಗೆ, ಯುವಜನತೆಗೆ ಮುಟ್ಟಿಸಬಹುದು. ಸಂಗಮೇಶ್ವರ ಮಹಾವಿದ್ಯಾಲಯ ಕನ್ನಡ ಭಾಷೆ, ಸಂಸ್ಕೃತಿಗೆ ಸದಾ ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಶಿವಾನಂದ ತಡವಳ ಈ ವಚನ ಕಂಠಪಾಠ ಸ್ಪರ್ಧೆ ಶರಣರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಹಾಯ ಮಾಡುತ್ತದೆ. ವಚನಗಳ ಮೂಲಕ ವಿದ್ಯಾರ್ಥಿಗಳು ಸಮಾನತೆ, ಸೌಹಾರ್ದತೆ ಮತ್ತು ಸಾತ್ವಿಕ ಜೀವನಶೈಲಿಯ ಕಲಿಕೆ ಸಾಧ್ಯ. ವಚನಗಳು ಪ್ರೇರಣಾದಾಯಕವಾಗಿದ್ದು, ವೈಚಾರಿಕ ಚಿಂತನೆಗೆ ಅವಕಾಶ ಒದಗಿಸುತ್ತದೆ ಎಂದರು.

ವಚನಕಾರ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನಿಡಲಾಯಿತು.
ಮಲ್ಲಿನಾಥ ಪಾಟೀಲ, ಶಿವರಾಜ ದೇಸಾಯಿ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದರು.
ವಿದ್ಯಾರ್ಥಿನಿ ಅನುಷಾ ಬುಳ್ಳಾ ಪ್ರಾರ್ಥನಾ ಗೀತೆ, ವಿದ್ಯಾರ್ಥಿನಿ ಐಶ್ವರ್ಯ ಸುತಾರ ಸ್ವಾಗತ ಗೀತೆ ಹಾಡಿದರು. ಡಾ. ಸುಹಾಸ ಪೂಜಾರಿ, ಶಿಕ್ಷಕರಾದ ವಿಶ್ವನಾಥ ಕೌಲಗಿ, ಸುಧಾ ಹಸರಮನಿ, ಬಸವರಾಜ ಯಾದವಾಡ, ಮೀನಾಕ್ಷಿ ಸೋನಾರ, ಮಲ್ಲೇಶಪ್ಪ ಮಹೇಂದ್ರ ಇದ್ದರು.
ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷರಾದ ಡಾ. ರಾಮಚಂದ್ರ ಸಂಗಶೆಟ್ಟಿ ಕಾರ್ಯಕ್ರಮದ ಸಂಯೋಜಿಸಿದರು. ಒಟ್ಟು ೫೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.