ನಿಜಾಚರಣೆ: ತಿ. ನರಸೀಪುರದಲ್ಲಿ ‘ಬಸವಚೈತನ್ಯ’ಳ ಸಂಭ್ರಮದ ತೊಟ್ಟಿಲು ಶಾಸ್ತ್ರ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮವೂ ನಡೆಯಿತು

ತಿ.ನರಸೀಪುರ

ತಿ. ನರಸೀಪುರ ತಾಲ್ಲೂಕಿನ ಹೆಳವರಹುಂಡಿ ಗ್ರಾಮದಲ್ಲಿ ಬಸವ ಸಂಭ್ರಮದ ತೊಟ್ಟಿಲು ಶಾಸ್ತ್ರ, ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ ಸಡಗರದಿಂದ ರವಿವಾರ ನಡೆಯಿತು.

ಶಿವಮ್ಮ ಮತ್ತು ಲಿಂಗೈಕ್ಯ ಮಹಾಲಿಂಗಸ್ವಾಮಿ ಅವರ ಮಗ ಮತ್ತು ಸೊಸೆ ಕೋಮಲ – ರಾಜಶೇಖರ ಶರಣ ದಂಪತಿಗಳ ಸುಪುತ್ರಿ “ಬಸವಚೈತನ್ಯ”ಳ ತೊಟ್ಟಿಲುಶಾಸ್ತ್ರ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮವು ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ, ಬಸವಾದಿ ಶರಣರ ತತ್ವಾಚರಣೆಯಂತೆ ಜರುಗಿತು.

“ನಾವೇ ದೇವರಾಗುವ ಲಿಂಗಾಯತ ಧರ್ಮದವರು, ನಾವೇ ದೇವರಾದ ಮೇಲೆ ಎಲ್ಲೂ ನೀರಲ್ಲಿ ಮುಳುಗುವ ಅವಶ್ಯಕತೆ ಇಲ್ಲ. ಅತಿಯಾಗಿ ಕುಂಕುಮಕ್ಕೆ ಬಾಗಿ ಬೀಳುವ ಅನಿವಾರ್ಯತೆಗಳು ನಮ್ಮ ಲಿಂಗಾಯತರಿಗೆ ಇಲ್ಲವೆಂದು,” ಬಸವತತ್ವ ಪ್ರಚಾರಕರಾದ ಚೌಹಳ್ಳಿ ಲಿಂಗರಾಜಪ್ಪ ಅವರು ಮಾತನಾಡುತ್ತ ಹೇಳಿದರು.

ದಾರಿತಪ್ಪಿಹೋಗುವ ಇವತ್ತಿನ ಯುವಕರಿಗೆ ಬಸವಾದಿ ಶರಣರ ಸತ್ಸಂಗ, ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿಯ ವಿಷಯಗಳು ಅವಶ್ಯಕವಾಗಿ ತಿಳಿಹೇಳಬೇಕು. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಧರ್ಮದ ಇಷ್ಟಲಿಂಗ ಸಂಸ್ಕಾರವನ್ನು ಮನೆಯಿಂದಲೇ ಕೊಡಬೇಕೇಂದು ಪೂಜ್ಯ ಶ್ರೀ ಬಸವಯೋಗಿಪ್ರಭು ಸ್ವಾಮೀಜಿ ಹೇಳಿದರು.

ಅವರು ಮಾತನ್ನು ಮುಂದುವರಿಸಿ, ಇವತ್ತಿನ ದಿನಮಾನಗಳಲ್ಲಿ ಮಹಿಳೆಯರಿಗೆ ಸೀರಿಯಲ್ ನೋಡೋ ಗರ ಬಡಿದಿದೆ, ಯುವಕರಿಗೆ ಐಪಿಎಲ್ ಕ್ರಿಕೆಟ್ ನೋಡೋ ಗರ ಬಡಿದಿದೆ. ಇವನ್ನು ನೋಡೋ ವ್ಯಸನ ಬಿಟ್ಟು ಲಿಂಗಾಯತ ಧರ್ಮದ ಅರಿವು ಮೂಡಿಸಿಕೊಳ್ಳಬೇಕೆಂದು ಹೇಳಿದರು.

ಜಾಗತಿಕ ಲಿಂಗಾಯತ ಧರ್ಮದ ಹೋರಾಟದ ಮಾಹಿತಿ ಪ್ರತಿಯನ್ನು ಕೀರ್ತಿಕುಮಾರ ನೆರೆದಿರುವ ಜನರಿಗೆ ಓದಿ ಹೇಳಿದರು.

ಈ ಮರ್ತ್ಯದ ಮಹಾಮನೆ ಹಾಳಾಗಬಾರದೆಂದು ಬಸವಾದಿ ಶರಣರು ವಚನಗಳನ್ನು ನಮ್ಮ ನಿಮ್ಮೆಲ್ಲರಿಗೆ ಕೊಟ್ಟಿದ್ದಾರೆಂದು ದೇವನೂರಿನ ಕೃಷಿಕ ಪ್ರಶಾಂತ ಅವರು ಪ್ರವಚನದಲ್ಲಿ ಹೇಳಿದರು.

ಷಟ್ ಸ್ಥಲ ಧ್ವಜಾರೋಹಣ, ಇಷ್ಟಲಿಂಗಪೂಜೆ, ಧಾರ್ಮಿಕ ಸಭೆ, ವಚನಗಾಯನ, ಧರ್ಮದ ಘೋಷಗಳು ಕಾರ್ಯಕ್ರಮದಲ್ಲಿ ಜರುಗಿದವು.

ಹಿರಿಯರಾದ ರಾಣಿ ಅಕ್ಕ ಅಕ್ಕನಬಳಗ ಹಾಲನಹಳ್ಳಿ, ರೂಪದೊಡ್ಡಹುಂಡಿ, ಕುಮಾರ ದೊಡ್ಡಹುಂಡಿ, ಚೌಹಳ್ಳಿ ಲಿಂಗರಾಜಣ್ಣ, ಬಸವಣ್ಣ ನಂಜೇಗೌಡನಹಳ್ಳಿ, ಶ್ರೀಕಂಠ ಕಲ್ಲಹಳ್ಳಿ ಇವರುಗಳು ವಚನಗಳನ್ನು ಹಾಡುತ್ತಾ, ಕುಣಿಯುತ್ತ ಸಂಭ್ರಮದಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Share This Article
2 Comments
  • ಓಂ ಶ್ರೀ ಗುರು ಬಸವ ಲಿಂಗಾಯತ ನಮಃ, ಬಸವ ಚೈತನ್ಯಳಿಗೆ ಶುಭವಾಗಲಿ. ಇದೇ‌‌ ಮಾದರಿಯನ್ನು ಎಲ್ಲರೂ‌ ಅನುಸರಿಸುವ ‌ಕುರಿತು ಮಠಾಧೀಶರು, ಶರಣರು ಸಮಾಲೋಚಿಸಿ ಸಮಾಜಕ್ಕೆ ತಿಳುವಳಿಕೆ ನೀಡಬೇಕು.
    ನಾನೂ ಸಹಾ ನನ್ನ ಮಗನಿಗೆ ವಚನ‌ಮಾಂಗಲ್ಯ ಮದುವೆ ಮಾಡಿರುತ್ತೇನೆ.

Leave a Reply

Your email address will not be published. Required fields are marked *