‘ನಾಡು-ನುಡಿ, ನೆಲ-ಜಲ ಹೋರಾಟದಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದು’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಕನ್ನಡ ನಾಡು-ನುಡಿ, ನೆಲ-ಜಲದ ಸಮಸ್ಯೆಗಳು ಎದುರಾದಾಗ ಅನೇಕ ಹೋರಾಟಗಳಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದಾದುದಾಗಿದೆ. ಮಠಗಳು ಕನ್ನಡ ಉಳಿವಿಗಾಗಿ, ಬೆಳವಣಿಗೆಗಾಗಿ ಪ್ರಯತ್ನಿಸಿದಾಗ ನಮ್ಮ ನಾಡು ನುಡಿ ಸಂಸ್ಕೃತಿ ಸಾಹಿತ್ಯ ಬೆಳೆಯಲು ಸಾಧ್ಯ ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೭೭೦ ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕರ್ನಾಟಕದ ಗಡಿಭಾಗ ಚಿಂಚಣಿಯಲ್ಲಿ ಹಾಗೂ ಬೈರನಟ್ಟಿಯಲ್ಲಿ ಭಾಷೆಯ ಉಳಿವಿಗಾಗಿ ಕನ್ನಡ ರಥವನ್ನು ಎಳೆಯುತ್ತಾರೆ. ಕರ್ನಾಟಕದಲ್ಲಿ ಕನ್ನಡ ಮಠವೆಂದರೆ ತೋಂಟದಾರ್ಯ ಮಠ. ಕನ್ನಡ ಜಗದ್ಗುರುಗಳೆಂದರೆ ಸಿದ್ಧಲಿಂಗ ಶ್ರೀಗಳು. ಆರುನೂರಕ್ಕೂ ಹೆಚ್ಚು ಕನ್ನಡ ಮೌಲಿಕ ಗ್ರಂಥಗಳನ್ನು ಮಠ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದೆ ಎಂದು ಶ್ರೀಗಳು ಮಾತನಾಡಿದರು.

ಧಾರವಾಡದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಮಾತನಾಡಿ, ಕನ್ನಡ ಮತ್ತು ಕರ್ನಾಟಕ ಎರಡು ಒಂದನ್ನೊಂದು ಬಿಟ್ಟಿರಲಾರವು. ಕರ್ನಾಟಕ್ಕೆ ಗಡಿ ಇದೆ. ಆದರೆ ಕನ್ನಡಕ್ಕೆ ಗಡಿಯ ಹಂಗಿಲ್ಲ. ಲಿಂಗಾಯತರಿಗೆ ಧರ್ಮ ಭಾಷೆ ಕನ್ನಡವೇ ಆಗಿದೆ. ಸಿದ್ದಲಿಂಗ ಶ್ರೀಗಳು ಪೀಠಾಧಿಪತಿಗಳಾಗಿ ಕನ್ನಡ ಕೈಂಕರ್ಯಕ್ಕೆ ಕೊನೆಯುಸಿರು ಇರುವವರೆಗೂ ಹೋರಾಡಿದರು. ಕನ್ನಡದ ಜಗದ್ಗುರುಗಳೇ ಆದರು. ಶ್ರೀಮಠದಿಂದ ೬೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂದು ಹೇಳುತ್ತಿದ್ದರು ಎಂದು ಮಾತನಾಡಿದರು.

ಹು.ಧಾ ಮಹಾನಗರಸಭೆ ನೀಡುವ ರಾಜ್ಯೋತ್ಸವ ಧೀಮಂತ ಪ್ರಶಸ್ತಿಗೆ ಭಾಜನರಾದ ಶಶಿಧರ ತೋಡಕರ ಅವರನ್ನು, ಕನ್ನಡ ಜಾನಪದ ಪರಿಷತ್‌ಗೆ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ನೇಮಕವಾದ ನಿವೃತ್ತ ಉಪನಿರ್ದೇಶಕರಾದ ಐ.ಬಿ. ಬೆನಕೊಪ್ಪರ ಅವರನ್ನು ಮತ್ತು ನೆಲ ಜಲ ಭಾಷೆಗಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಬ್ಬಿಗೇರಿ ಅವರುಗಳನ್ನು ಸನ್ಮಾನಿಸಲಾಯಿತು.

ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅನ್ವಿತಾ ಪೋತದಾರ ಹಾಗೂ ವಚನ ಚಿಂತನವನ್ನು ತುಳಸಿಪ್ರಿಯಾ ಶಿರಹಟ್ಟಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಸ್.ಎಸ್. ಹರ್ಲಾಪೂರ ಉಪಸ್ಥಿತರಿದ್ದರು. ದಾಸೋಹ ಸೇವೆಯನ್ನು ಅಣ್ಣಿಗೇರಿಯ ಬಸಪ್ಪ ಅಮೃತಪ್ಪ ಪಲ್ಲೇದ ವಹಿಸಿಕೊಂಡಿದ್ದರು.

ತೋಂಟದಾರ್ಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಕುರಿತು ಆಕರ್ಷಕವಾದ ನೃತ್ಯ ಮತ್ತು ರೂಪಕಗಳ ಪ್ರದರ್ಶನ ನಡೆಯಿತು. ನೃತ್ಯವನ್ನು ಶಿಕ್ಷಕರು ಆಯೋಜನೆ ಮಾಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಅಶೋಕ ಆದಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *