ದೇವಾಲಯ ಸಂಸ್ಕೃತಿಯನ್ನು ನಿರಾಕರಿಸಿದ ಶರಣರ ಸ್ಮಾರಕಗಳನ್ನು ವೈದಿಕಶಾಹಿ ಪಟ್ಟಭದ್ರ ಶಕ್ತಿಗಳು ಅತಿಕ್ರಮಿಸಿರುವುದು ಖೇದಕರ ಸಂಗತಿಯೇ ಆಗಿದೆ.
ಬೆಳಗಾವಿ
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ದಟ್ಟ ವಾದ ಸೈಹಾದ್ರಿ ಬೆಟ್ಟ ಸಾಲಿನ ಹಸಿರು ಕಾನನದ ಮಡಿಲಲ್ಲಿ ಪ್ರಶಾಂತ ವಾತಾವರಣದ ಶತಮಾನಗಳ ಇತಿಹಾಸವುಳ್ಳ ಪುಟ್ಟದಾದ ಹಳ್ಳಿ ಉಳವಿ. ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಬಹುತೇಕ ಶರಣರ ಕೊನೆಯ ನೆಲೆ ಎಂದು ಗುರುತಿಸಲ್ಪಡುವ ಈ ನೆಲವೇ ಅವಿರಳ ಜ್ಞಾನಿ ಷಟಸ್ಥಳ ಚಕ್ರವರ್ತಿ ಚೆನ್ನಬಸವಣ್ಣನವರ ಕ್ರಿಯಾಸಮಾಧಿ ಇರುವಂತಹ ಸುಕ್ಷೇತ್ರ ಉಳವಿ.

ಇಲ್ಲಿ ಹನ್ನೆರಡನೆ ಶತಮಾನದ ಕಲ್ಯಾಣಕ್ರಾಂತಿಯ ಕೇಂದ್ರ ರುವಾರಿ, ಬಿಜ್ಜಳ ರಾಜನ ಆಸ್ಥಾನದಲ್ಲಿನ ಅರ್ಥಮಂತ್ರಿ ದಣ್ಣಾಯಕರಾಗಿದ್ದ ಭಕ್ತಿ ಭಂಡಾರಿ ಅಪ್ಪ ಬಸವಣ್ಣವರ ಅಕ್ಕನಮಗ ಸೋದರಳಿಯ. (ಅಕ್ಕನಾಗಮ್ಮ ಶಿವದೇವರ ಮಗ) ಷಟಸ್ಥಳ ಚಕ್ರ ವರ್ತಿ ಅವಿರಳಜ್ಞಾನಿಯಂದು ಸಮಕಾಲೀನ ಶರಣರಿಂದ ಸಂಬೋಧಿಸಿ ಗೌರವಿಸಲ್ಪಟ್ಟಂತಹ ತರುಣ ಶರಣರಾದ ಚೆನ್ನಬಸವಣ್ಣವರ ಕ್ರಿಯಾ ಸಮಾಧಿಯ ದಿವ್ಯ ಸ್ಮಾರಕ(ದೇವಾಲಯ)ವಿದೆ. ಜನ ಇದನ್ನು ಶರಣರ ಸುಕ್ಷೇತ್ರ ಉಳವಿ ಎಂದೇ ಕರೆಯುತ್ತಾರೆ.
ವೈರುಧ್ಯವೆಂದರೆ, ಯಾವ ದೇವಾಲಯ ಸಂಸ್ಕೃತಿ ಯನ್ನು ಶರಣರು ನಿರಾಕರಿಸಿ ಮಾನವ ದೇಹವೇ ದೇವಾಲಯ ಎಂದು ದೇಹಾಲಯದ ಸಂಸ್ಕೃತಿ ಯನ್ನ ಬೆಳೆಸಿ ಬೆಳಗಿದರೋ ಅದಕ್ಕಾಗಿ ಅವರು ತಮ್ಮಗಳ ಬದುಕನ್ನು ಹಾಗೂ ಜೀವವನ್ನೂ ಬಲಿ ಕೊಟ್ಟವರೋ ಇಂತಹ ಪ್ರಖರ ವೈಚಾರಿಕ ಕ್ರಾಂತಿಕಾರಿ ಚಿಂತಕರ ತತ್ವ ಚಿಂತನೆಗಳ ಜೊತೆಗೆ ಪ್ರಗತಿಪರ ಮತ್ತು ಜೀವಪರವಾದ ದಯಾಮಯಿಗಳು ಮತ್ತು ಸತ್ಯುಳ್ಳ ಶರಣರ ಸತ್ಯಚರಿತ್ರೆಯನ್ನೇ ಈ ವೈದಿಕಶಾಹಿ ಪಟ್ಟಭದ್ರ ಶಕ್ತಿಗಳು ಕಲ್ಯಾಣ ಕ್ರಾಂತಿ ನಂತರ, ಶರಣರ ಸಮಾಧಿಗಳ ಸ್ಮಾರಕಗಳನ್ನು ಅತಿಕ್ರಮಿಸಿದ್ದಲ್ಲದೇ ಅವುಗಳ ಸತ್ಯ ಸ್ಥಿತಿಗತಿಗಳ ಅಸ್ತಿತ್ವವನ್ನು ಮರೆಮಾಚಿ, ಅಲ್ಲಿಯ ಶರಣರ ತತ್ವ ಸಿದ್ಧಾಂತಗಳ ಧ್ಯೇಯ ಧೋರಣೆಗಳನ್ನು ಧಿಕ್ಕರಿಸಿ ದೇವಾಲಯದ ಸಂಸ್ಕೃತಿಯನ್ನ ಬೆಳೆಸಿ ಪೋಷಿಸಿ
ಶರಣರ ಪ್ರಖರ ವೈಚಾರಿಕ ಚಿಂತನಗಳ ಕುರುಹುಗಳ ಮೇಲೆ ವೈದಿಕಾಚರಣೆಗಳ ಎಣ್ಣೆ ಬತ್ತಿ ಹಾಕಿ, ಜಿಡ್ಡುಗಟ್ಟಿಸಿ ನಿಜಶರಣರ ನಿಜಚರಿತ್ರೆಯ ಮರೆ ಮಾಚಿದ್ದು ಈಗಿರುವ ಸ್ಥಿತಿ ವಾಸ್ತವಿಕ ಸತ್ಯವಾಗಿ ಗೋಚರಿಸುತ್ತಿದೆ!? ನಿಜಕ್ಕೂ ಇದು ಅಪ್ಪ ಬಸವಾದಿ ಶರಣರ ತತ್ವಾದರ್ಶಗಳ ಸದಾಶಯಗ ಳನ್ನು ಜನಮಾನಸದ ಕಣ್ಮರೆಯ ಮಾಡಿದ್ದಂತೂ ಘನ ಘೋರ ಖೇದಕರ ಸಂಗತಿಯೇ ಆಗಿದೆ.
ಅದು ಒತ್ತಟ್ಟಿಗಿರಲಿ, ಈಗ ಚೆನ್ನಬಸವಣ್ಣನವರು ಉಳವಿ ಕ್ಷೇತ್ರದ ಕಡೆಗೆ ಬರುವುದಕ್ಕೆ ಕಾರಣಗಳು ಏನು? ಅವರ ಬಾಲ್ಯದ ಬದುಕು ಮತ್ತು ಸಾಧನೆ ಬಸವಣ್ಣನವರ ಕ್ರಾಂತಿಕಾರಿ ಚಟುವಟಿಕೆಗಳನ್ನು ಹೇಗೆ ಪ್ರಭಾವಿಸಿ ಮುನ್ನಡೆಸಿದೆ ಎನ್ನುವ ಸಂಗತಿಗಳ ಕುರಿತು ಒಂದು ಸಂಕ್ಷಿಪ್ತವಾದ ಚಿಂತನೆಯನ್ನು ಇಲ್ಲಿ ಮಾಡೋಣ.

ಚೆನ್ನಬಸವಣ್ಣನವರ ಸೋದರ ಮಾವನಾದ ಭಕ್ತಿ ಭಂಡಾರಿ ಅಪ್ಪ ಬಸವಣ್ಣನವರು; ಹನ್ನೆರಡನೆಯ ಶತಮಾನದ ಅಂದಿನ ಆ ಶ್ರೇಣೀಕೃತವಾದ ವರ್ಣ ವ್ಯವಸ್ಥೆಯ ಅತ್ಯುನ್ನತ ನೆಲೆಯಲ್ಲಿದ್ದ ಬ್ರಾಹ್ಮಣರ ಕಮ್ಮೆ ಕುಲದಲ್ಲಿ ಹುಟ್ಟಿದರೂ ಅವರು ಆಗ ತಮ್ಮ ಬಾಲ್ಯದಲ್ಲಿಯೇ ಅಪಾರವಾದ ಅರಿವಿನ ಕಾರಣ ದಿಂದ ಚಿಕಿತ್ಸಕ ಮನೋಭಾವವವನ್ನು ಹೊಂದಿದ ಪರಿಣಾಮವಾಗಿ ತಮ್ಮ ಬದುಕಿನ ಸುತ್ತಲೂ ಆಗ ಜರುಗುತ್ತಿದ್ದ ವೈದಿಕ ಸಂಪ್ರದಾಯಗಳ ತರತಮ ಭಾವದ ಗೊಡ್ಡು ಆಚರಣೆಗಳನ್ನು, ಕುಲ ಮದದ ಅಹಂಕಾರದ ತಿರಸ್ಕಾರಯುಕ್ತ ಭಾವನೆಗಳನ್ನು, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದಂಥ ಮೌಢ್ಯದ ಕಂದಾಚಾರಗಳನ್ನು ಕಂಡು ಕನಲಿದವರು. ಹೆಣ್ಣು ಗಂಡಿನ ಬಗ್ಗೆ ಆ ವ್ಯವಸ್ಥೆ ಹೊಂದಿದ್ದ ಮೇಲರಿಮೆ ಮತ್ತು ಕೀಳರಿಮೆಯ ತಿರಸ್ಕಾರ ಭಾವನೆಗಳನ್ನು ತಿರಸ್ಕರಿಸಿ, ಈ ಎಲ್ಲಾ ಕಾರಣಗಳಿಂದಾಗಿ ಅವರು ತಮ್ಮ ಆಂತರ್ಯದಲ್ಲಿ ತಳಮಳಿಸಿ ಕುದಿಯುತ್ತಿದ್ದಂಥ ಸಂದರ್ಭದಲ್ಲಿಯೇ ತಮಗೆ ಇರುವಂತಹ ಧಾರ್ಮಿಕ ಆಚರಣೆ ಅಕ್ಕನಾಗಮ್ಮಗೆ ಇಲ್ಲವೆಂದು ತಿಳಿದಾಗ ಬಂಡಾಯವೆದ್ದು ಅಕ್ಕನ ಜೊತೆ, ತಮ್ಮ ಬಾಲ್ಯದಲ್ಲಿಯೇ ಮನೆ ತೊರೆದು ಹೊರಬಂದಂಥ ಧೀಮಂತ ಬಂಡಾಯಗಾರ ಅಪ್ಪ ಬಸವಣ್ಣವರು.
ಇಂತಹ ಹುಟ್ಟಾ ಹೋರಾಟಗಾರ ಮನೋಭಾವ ಹೊಂದಿದ್ದ ಸೋದರ ಮಾವನವರ ಆಶ್ರಯದಲ್ಲಿ ಬೆಳೆದ ಬಾಲಕ ಚೆನ್ನಬಸವಣ್ಣವರು; ಸಹಜವಾಗಿ ಲಭ್ಯವಾದ ಇಂತಹ ಪರಿಸರದ ಪರಿಣಾಮದಿಂದ ಚಿಕ್ಕ ವಯಸ್ಸಿಗೇ ಅಪಾರವಾದ ಜ್ಞಾನ ಸಿಸ್ತುಗಳ ಗಳಿಸಿ ಬೆಳೆದು ಅವಿರಳ ಜ್ಞಾನಿಯಾದವರು.
ಕಲ್ಯಾಣದಲ್ಲಿ ಅಪ್ಪ ಬಸವಣ್ಣವರು ರಾಜಪ್ರಭುತ್ವ ವ್ಯವಸ್ಥೆಯ ಭಾಗವಾಗಿ ಇದ್ದುಕೊಂಡು ಬಿಜ್ಜಳನ ಆಸ್ಥಾನದಲ್ಲಿ ಅರ್ಥಮಂತ್ರಿಯಾಗಿ ಕಾರ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ; ತಮ್ಮಲ್ಲಿ ಇದ್ದಂಥ ವೈಚಾರಿಕ ಪ್ರಗತಿಪರ ಮನೋಭಾವದ ಚಿಂತನೆಗಳ ಜನಪರ ಕಾಳಜಿಗಳನ್ನು ಸಾಮಾಜಿಕ ನೆಲೆಯಲ್ಲಿ ಬಿತ್ತಿಬೆಳೆಯಲು ಸಕಾಲವೆಂದು ಅರಿತು ತಮ್ಮ ಮಂತ್ರಿಸ್ಥಾನ ಹಾಗೂ ಬಿಜ್ಜಳನ ಜೊತೆಗಿನ ಸ್ನೇಹ ಸಾಂಗತ್ಯದ ಸಹಯೋಗದ ಸದುಪಯೋಗವನ್ನ ಮಾಡಿಕೊಂಡು, ದುಡಿಯುವ ಶ್ರಮಜೀವಿಗಳನ್ನು ತಮ್ಮೊಳಗಿನ ಅಪಾರವಾದ ಗೌರವಾದರಗಳಿಂದ ಆದರಿಸುತ್ತ ಅತ್ಯಂತ ಪ್ರಾಮಾಣಿಕ ಪ್ರೀತಿಯಿಂದ ಇಂಬಿಟ್ಟುಕೊಂಡು, ಅವರಲ್ಲಿ ತಮ್ಮ ಹೊಸದಾದ ಪರಿಕಲ್ಪನೆಯ ವ್ಯಕ್ತಿಗತ ಹಾಗೂ ಸಮಷ್ಟಿಗತವಾದ ಸರ್ವಸಮಾನತೆಯ ಸಮಸಮಾಜದ ಕನಸಿನ ಚಿಂತನೆಗಳನ್ನು; ತಮ್ಮ ನಡೆ ನುಡಿಗಳ ಮೂಲಕ ಬಿತ್ತಿ ಬೆಳೆಯಲು, ಕಾಯಕ ಮತ್ತು ದಾಸೋಹದ ಅಸ್ತ್ರಗಳನ್ನು ಪ್ರಯೋಗಿಸಿ, ಕಾಯಕ ಮಾಡುವ ಕೈಗಳಲ್ಲಿ ಇಷ್ಟಲಿಂಗವನ್ನಿಟ್ಟು, ಬಹುದೇವೋಪಾಸನೆಯ ಬಿಡಿಸಿ, ಏಕದೇವೋಪಾಸನೆಯ ಶೂನ್ಯ ಬಯಲು ಶಿವತತ್ವವನ್ನು ಅವರ ವ್ಯಕ್ತಿತ್ವದ ಒಳಗೆ ಮತ್ತು ಹೊರಗೆ ಬಿತ್ತಿ ಬೆಳೆಯುವ ಅನುಕೂಲಕ್ಕೆ ತಮ್ಮ ಮನೆಯನ್ನೇ ಮಹಾಮನೆಯನ್ನಾಗಿ ಮಾಡಿ ಅವರೊಳಗೆ ಅರಿವಿನ ಜಾಗೃತಿ ಮೂಡಿಸಿದವರು.
ಅಕ್ಕನಾಗಮ್ಮ ಗಂಗಾಂಬಿಕೆ ನೀಲಾಂಬಿಕೆ ಜೊತೆಗೆ ಚೆನ್ನಬಸವಣ್ಣನವರು ತತ್ವ ಸಿದ್ಧಾಂತಗಳ ಅರಿವು ಮೂಡಿಸಿದ ತತ್ಫಲವಾಗಿ ಕಾಯಕ ಜೀವಿಗಳಲ್ಲಿ ಮನೆಮಾಡಿದ್ದ ಕಾಲಾಂತರದ ಹಿಂಜರಿಕೆ ಕಳೆದು ಅವರೊಳಗೆ ಮೂಡಿದಂಥಾ ಅಚ್ಚ ಹೊಸ ಭಾವ ಬೆಳದಿಂಗಳ ಅಭಿವ್ಯಕ್ತಿಗೆ ಮತ್ತು ಇಷ್ಟಲಿಂಗದ ಅನುಷ್ಠಾನದ ಅನನ್ಯವಾದಂಥ ಅನುಭೂತಿಯ ವಿಶೇಷ ಅನುಭವಗಳನ್ನು ಮುಕ್ತ ಮನಸ್ಸಿನಿಂದ ಪರಸ್ಪರರು ಹಂಚಿಕೊಳ್ಳಲು ಅನುಕೂಲವಾಗಲಿ ಎಂದು ಅನುಭವ ಮಂಟಪದಂಥ ಅದ್ವಿತೀಯ ವೇದಿಕೆಯನ್ನು ಅಪ್ಪ ಬಸವಣ್ಣ ಆ ವೇಳೆಯಲ್ಲಿ ನಿರ್ಮಾಣ ಮಾಡಿ, ಅಲ್ಲಿ ಅಲ್ಲಮಪ್ರಭುಗಳಂಥ ದಿವ್ಯ ಜ್ಞಾನಿಗಳ ಅಧ್ಯಕ್ಷತೆಯಲ್ಲಿ ತಾತ್ವಿಕ ಚರ್ಚೆ ಸಂವಾದಗಳನ್ನು ಮಾಡುವ ಮೂಲಕ ೭೭೦ ಅಮರ ಗಣಂಗಳನ್ನಲ್ಲದೇ ಅನೇಕ ವಚನಕಾರ ಶರಣ ಶರಣೆಯರನ್ನು ರೂಪಿಸಿ ಅವರುಗಳಿಂದ ಅನುಭಾವಿಕ ವಚನ ರಚನೆಗೆ ಅವಕಾಶ ಒದಗಿಸಿ ಅತ್ಯಮೂಲ್ಯವಾದ ವಚನದ ಭಂಡಾರವನ್ನ ಹೆಚ್ಚಿ ಸಿದ್ದರಲ್ಲಿ ಷಟಸ್ಥಳ ಚಕ್ರವರ್ತಿ ಚೆನ್ನಬಸವಣ್ಣನರ ಕೊಡುಗೆಯು ಅನುಪಮದ್ದಾಗಿದೆ.

ಹೀಗೆ ಕಲ್ಯಾಣ ಪಟ್ಟಣದಿ ಅಪ್ಪಬಸವಣ್ಣನವರು ಕೈಕೊಂಡ ಇಂತಹ ಅಭೂತಪೂರ್ವವಾದ ವ್ಯಕ್ತಿ ನೆಲೆಯಲ್ಲಿನ ಮತ್ತು ಸಮಾಜೋಧಾರ್ಮಿಕ ನೆಲೆ ಯಲ್ಲಿನ ಕ್ರಾಂತಿಕಾರಿ ಬೆಳವಣಿಗೆಯ ಕೀರ್ತಿಯು ದೇಶವಿದೇಶಗಳಲ್ಲಿ ಪಸರಿಸಿ ಪ್ರಖ್ಯಾತಿಯನ್ನ ಗಳಿಸುವಲ್ಲಿ; ತರುಣರು ಮತ್ತು ಅವಿರಳ ಜ್ಞಾನಿಗಳೂ ಆದ ಚೆನ್ನಬಸವಣ್ಣರ ಅಪಾರವಾದ ಆಧ್ಯಾತ್ಮಿಕ ಅರಿವಿನ ಜ್ಞಾನದಾಸೋಹದ ಕೊಡುಗೆಯಂತೂ ಲಿಂಗಾಯತ ಶರಣ ತತ್ವ ಸಿದ್ಧಾಂತಗಳ ಬುನಾದಿ ಆಗಿದೆ. ಲಿಂಗಾಯತ ಧರ್ಮದ ಶುದ್ಧೀಕರಣದ ಜೊತೆಗೆ ಶರಣ ತತ್ವ ಸಿದ್ಧಾಂತಗಳ ಅನುಷ್ಠಾನದ ಸಲುವಾಗಿ ಷಟಸ್ಥಳ ಸಿದ್ಧಾಂತದ ಕುರಿತು ಸ್ವತಃ ತಾವು ಅದರಲ್ಲಿ ಪಾರಂಗತರಾಗುವ ಮೂಲಕ ಷಟಸ್ಥಳ ಚಕ್ರವರ್ತಿ ಎನಿಸುವರಲ್ಲದೇ ಅದನ್ನು ಲಿಂಗಾಯತ ಭಕ್ತರಲ್ಲಿ ಬಿತ್ತಿ ಬೆಳೆಯಲು ಮಾರ್ಗ ದರ್ಶನ ಮಾಡುವರು.
ಸಾವಿರಾರು ವಚನಗಳನ್ನ ರಚಿಸಿದ್ದಲ್ಲದೇ ಶರೀರ ರಚನಾಶಾಸ್ತ್ರದ ಕುರಿತಾದ ಕರಣಹಸಿಗೆ ಎನ್ನುವ ಅತ್ಯಮೂಲ್ಯ ಕೃತಿಯನ್ನು ಹಾಗೂ ಅನೇಕ ಸ್ವರ ವಚನಗಳ ರಚಿಸಿದ್ದಲ್ಲದೇ ಪದಮಂತ್ರಗೋಪ್ಯ, ಘಟಚಕ್ರ ಈ ಮುಂತಾದ ಹಲವು ಮೌಲ್ಯಯುತ ಕೃತಿಗಳನ್ನು ಚೆನ್ನಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ತನ್ಮೂಲಕ ಲಿಂಗಾಯತ ಧರ್ಮದ ಸಂವಿಧಾನ ಶಿಲ್ಪಿಯಂತೆ ಬೆಳಗಿರುವರು. ವಯಸ್ಸಿನಲ್ಲಿವರು ಕಿರಿಯರಾದರೂ ಸಹಿತ ತಮಗಿಂತ ಹಿರಿಯರಾದ ಸೊನ್ನಲಿಗೆಯ ಶಿವಯೋಗಿ ಸಿದ್ದರಾಮೇಶ್ವರರಿಗೆ ಮೊದಲುಗೊಂಡು ಅನೇಕ ಹಿರಿ ಕಿರಿಯ ಲಿಂಗಾಯತ ಭಕ್ತರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದ್ದು ನಿಜಕ್ಕೂ ಚೆನ್ನಬಸವಣ್ಣನವರ ಅವಿರಳ ಜ್ಞಾನದ ಹಿರಿಮೆ ಗರಿಮೆಯನ್ನು ಎತ್ತಿ ತೋರುತ್ತದೆ. ಇವರ ಬಗ್ಗೆ ಅನೇಕ ಸಮಕಾಲೀನ ವಚನಕಾರ ಶರಣರು ವಚನಗಳ ರಚಿಸಿ ಕೊಂಡಾಡಿರುವುದನ್ನು ನೋಡ ಬಹುದು.
ಭಕ್ತಿಭಂಡಾರಿ ಬಸವಣ್ಣಾದಿ ಶರಣರು ಕಲ್ಯಾಣದಲ್ಲಿ ಕೈಗೊಂಡ; ಕಾಯ ಮತ್ತು ಕಾಯಕ, ಅರಿವು ಮತ್ತು ಆಚರಣೆ, ಕಾಯಕ ಮತ್ತು ದಾಸೋಹ, ಇಷ್ಟಲಿಂಗ ಮತ್ತು ಅನುಷ್ಠಾನ, ಅನುಭವ ಮತ್ತು ಅನುಭಾವ, ಅಧ್ಯಾತ್ಮ ಮತ್ತು ಅಭಿವ್ಯಕ್ತಿ, ಆತ್ಮ ಮತ್ತು ಪರಮಾತ್ಮ , ಜೀವನು ಮತ್ತು ದೇವನು, ಭವಿ ಮತ್ತು ಭಕ್ತ, ಸ್ಥಾವರ ಮತ್ತು ಜಂಗಮ, ಹೀಗೆ ಮನುಷ್ಯನ ಮುಂದಿನ ದ್ವಿತ್ವದ ಪದ ಪಾದದಲ್ಲಿರುವ ನಿಜವಾದ ಅರ್ಥದ ಆಳವಾದ ಜ್ಞಾನ ಸುಧೆಯನ್ನು ಚೆನ್ನಬಸವಣ್ಣವರು ತಮ್ಮ ಅನನ್ಯ ವೈಚಾರಿಕ, ವೈಜ್ಞಾನಿಕ, ಸಾಂಸ್ಕೃತಿಕ, ನೈತಿಕ ಆಧ್ಯಾತ್ಮಿಕ, ನೈಸರ್ಗಿಕ ನೆಲೆ ನಿಲುವುಗಳ ಕುರಿತು ಅನುಭವ ಮಂಟಪದ ಶರಣರ ಜೊತೆಗೆ ಚರ್ಚೆ ಸಂವಾದದಲ್ಲಿ ಬೇರಿಲ್ಲದಂತೆ ಬೆರೆಸುತ್ತಲೇ ಅಲ್ಲಿ ರಚನೆಯಾದ ವಚನ ರಚನೆಗಳಿಗೊಂದು ಸ್ಪಷ್ಟ ನಿರ್ದಿಷ್ಟ ಸುವ್ಯವಸ್ಥಿತ ಸ್ವರೂಪವನ್ನ ಒದಗಿಸುವ ಕಾಯಕವನ್ನು ಅಲ್ಲಮಪ್ರಭು, ಅಪ್ಪ ಬಸವಣ್ಣ, ಅಕ್ಕ ನಾಗಮ್ಮತಾಯಿ, ಅಕ್ಕಮಹಾದೇವಿಗಳಾದಿ ಹಿರಿಯ ಶರಣರೆಲ್ಲರ ಸಮ್ಮುಖದಲ್ಲಿ ಸುವ್ಯವಸ್ಥೆ ಗೊಳಿಸುವ ಮಣಿಹವನ್ನು ಕಾರ್ಯಗತಗೊಳಿಸಿ ವಚನ ಸಾಹಿತ್ಯ ಸಂಪತ್ತನ್ನು ಸಮೃದ್ಧಿಯನ್ನಲ್ಲದೇ ಸಂರಕ್ಷಣೆ ಮಾಡಿದ ಹಿರಿಮೆಯು ಚಿಕ್ಕ ವಯಸ್ಸಿನ ಅವಿರಳ ಜ್ಞಾನಿ ಚೆನ್ನಬಸವಣ್ಣನವರಿಗೆ ಖಂಡಿತಾ ಸಲ್ಲುತ್ತದೆ.
ಆದರೆ, ಬಸವಾದಿ ಶರಣರು; ಸಕಲ ಜೀವರಾಶಿಗ ಳಿಗೆ ಲೇಸನ್ನು ಬಯಸಿ ನಿರ್ಮಿಸಿದ ದಯೆ ಕರುಣೆ ಮಾನವೀಯ ಮೌಲ್ಯಗಳ ಸರ್ವಸಮಾನತೆಯ ಅರಿವು ಆಚರಣೆಯ ಲಿಂಗಾಯತ ಸಮಾಜದ ಏಳಿಗೆಯ ಸಹಿಸಲಾರದೆ ಪಟ್ಟಭದ್ರ ಶ್ರೇಣೀಕೃತ ಸಮಾಜ ವ್ಯವಸ್ಥೆಯ ವೈದಿಕ ಸಂಪ್ರದಾಯವಾದಿಗಳು ಶರಣರ ಈ ಅರಿವಿನ ಬೆಳವಣಿಗೆಗೆ ದ್ವೇಷ ಮತ್ಸರದಿಂದ ತಳಮಳಿಸಿ ಕತಕತ ಕುದಿಯುತ್ತಲೇ ಒಂದು ಸಂದರ್ಭಕ್ಕೆ ಕಾದಿದ್ದರು. ಬಸವ ಬಿಜ್ಜಳರ ನಡುವೆ ಇರುವ ಸ್ನೇಹವನ್ನು ಮುರಿಯಲು ಸದಾ ಒಂದಿಲ್ಲೊಂದು ಕಾರಣಗಳಿಂದ ಬಿಜ್ಜಳ ರಾಜನಿಗೆ ಚಾಡಿಯನ್ನು ದೂರು ದುಮ್ಮಾನಗಳನ್ನು ಒಯ್ದು ಯಶಸ್ವಿಯಾಗದೇ ನಿರಾಶೆಯಿಂದ ಬುಸುಗುಡು ತ್ತಿದ್ದರು. ಬಿಜ್ಜಳನ ಮಹತ್ವಾಕಾಂಕ್ಷಿಯಾದ ಮಗ ಸೋಮಿದೇವನನ್ನು ಪುಸಲಾಯಿಸಿ, ಆತನ ತಂದೆ ಬಿಜ್ಜಳನ ಮತ್ತು ಅಪ್ಪಬಸವಾದಿ ಶರಣರ ವಿರುದ್ಧ ಎತ್ತಿಕಟ್ಟಿ ತಕ್ಕ ಸೂಕ್ತ ಸಮಯಕ್ಕಾಗಿ ಕಾಯತೊಡಗಿದರು.
ಬಸವಣ್ಣನವರ ವಿಚಾರಗಳನ್ನು ಅವರ ವ್ಯಕ್ತಿತ್ವದ ಧೀಮಂತಿಕೆಯನ್ನು ಒಪ್ಪಿಕೊಂಡು ಮೇಲ್ವರ್ಗದ ಅನೇಕ ಪ್ರಮುಖರು ಇಷ್ಟಲಿಂಗವನ್ನು ಧರಿಸುವ ಮೂಲಕ ಲಿಂಗಾಯತ ಧರ್ಮವನ್ನ ಸೇರುವರು. ಅಂಥವರಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಮಧುವಯ್ಯನವರೂ ಒಬ್ಬರು. ಶರಣರಾದ ಹರಳಯ್ಯ ದಂಪತಿಗಳು ಬಸವಣ್ಣವರಿಗೆ ತಮ್ಮ ತೊಡೆ ಚರ್ಮದಿಂದ ಮಾಡಿದ್ದ ಚಮ್ಮಾವಿಗೆಗಳನ್ನ
ಬಲಾತ್ಕಾರದಿಂದ ಕಿತ್ತುಕೊಂಡು ಮೆಟ್ಟಿದ ಕಾರಣ ತೊಂದರೆ ಅನುಭವಿಸುವರು. ಕೊನೆಗೆ ಅಪ್ಪ ಬಸವಣ್ಣವರ ಸೂಚನೆಯ ಪಾಲಿಸಿದ್ದರಿಂದ ಗುಣವ ಹೊಂದುವರು. ನಂತರ ಮನ ಪರಿವರ್ತನೆಯಾಗಿ ಲಿಂಗಾಯತ ಧರ್ಮ ಸೇರಿದ್ದಲ್ಲದೇ ತಮ್ಮ ಮಗಳನ್ನ ಶರಣ ಹರಳಯ್ಯನವರ ಮಗನಿಗೆ ಲಗ್ನಮಾಡಿ ಕೊಡಲು ನಿಶ್ಚಯಿಸಿ ಅಪ್ಪ ಬಸವಾದಿ ಶರಣರುಗಳ ಒಪ್ಪಿಗೆ ಕೇಳಿದಾಗ, ಈರ್ವರೂ ಶ್ರೇಣೀಕೃತ ವರ್ಣವ್ಯವಸ್ಥೆಯ ತಂತಮ್ಮ ಉಚ್ಚ ನೀಚ ಕುಲದ ನೆಲೆಗಳನ್ನು ತೊರೆದು ಈಗ ಸರ್ವಸಮಾನತೆಯ ಸಾರುವ ಲಿಂಗಾಯತ ಧರ್ಮದವರೇ ಆಗಿರುವ ಕಾರಣದಿಂದ ಶರಣ್ರು ತಮ್ಮ ಪೂರ್ಣಪ್ರಮಾಣದ ಒಪ್ಪಿಗೆಯ ನೀಡುವ ಮೂಲಕ ಈ ಕ್ರಾಂತಿಕಾರಿ ಮದುವೆಯೂ ನಡೆದು ಹೋಯಿತು.
ಕಲ್ಯಾಣದ ಶರಣ ಸಂಕುಲದ ಶಾಂತಿ ನೆಮ್ಮದಿಯ ಬದುಕಿಗೆ ಬೆಂಕಿ ಹಚ್ಚಲು; ಸಮಯ ಸಾಧಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಮದುವೆಯು ಒಂದು ಕುಂಟು ನೆಪವಾಯಿತು. ತಮ್ಮ ಕಾರಸ್ಥಾನದಿಂದ ರಾಜಪ್ರಭುತ್ವವನ್ನೇ ಶರಣರ ವಿರುದ್ಧಕ್ಕೆ ಎತ್ತಿಕಟ್ಟಿ, ಅಪ್ಪ ಬಸವಣ್ಣನವರನ್ನು ಗಡಿಪಾರು ಮಾಡಿಸಿದ್ದು ಸಾಲದೇ ಮಧುವಯ್ಯ ಹರಳಯ್ಯರುಗಳನ್ನ ಆನೆ ಕಾಲಿಗೆ ಕಟ್ಟಿಸಿ ಎಳಹೊಟ್ಟೆ ಶಿಕ್ಷೆಗೆ ಗುರಿಪಡಿಸಿದ್ದು ಸಹಿತ ಸಾಲದೇ ಅನುಭವ ಮಂಟಪದಲ್ಲಿದ್ದಂಥ ವಚನ ಸಾಹಿತ್ಯ ಸಂಪತ್ತಿನ ಕಟ್ಟುಗಳ ನಿಟ್ಟನ್ನೂ ಲೂಟಿ ಮಾಡಿ ಸುಟ್ಟು ಹಾಕಲು ಬಿಜ್ಜಳನ ಸೈನ್ಯಕ್ಕೆ ರಾಜಾಜ್ಞೆ ಆಗುವಂತೆ ನೋಡಿಕೊಂಡರು. ಅದೂ ಸಾಲದೇ ಶರಣರ ಹಿತೈಷಿಯಾಗಿದ್ದ ಬಿಜ್ಜಳನನ್ನೂ ಮುಗಿಸಿ ಹಾಕುವ ಮೂಲಕ ಅವನ ಮಗನನ್ನೇ ರಾಜಗದ್ದುಗೆ ಮೇಲೆ ಕೂಡ್ರಿಸಿ ಅವನ ಮೂಲಕ ಶರಣರ ಮೇಲೆ ಸೈನ್ಯವನ್ನು ಛೂಬಿಡಿಸಿ, ಕಲ್ಯಾಣ ಪಟ್ಟಣ ಭೂಕೈಲಾಸವೆನ್ನಿಸುವಂತೆ ಮಾಡಿದ್ದಅಪ್ಪ ಬಸವಾದಿ ಶರಣರ ಸತ್ಯ ಶಾಂತಿಯ ಬದುಕನ್ನು ಮೂರಾಬಟ್ಟೆ ಮಾಡಿದರು! (ಅಷ್ಟೊತ್ತಿಗೆ ಆಗಲೇ ಅಲ್ಲಮಪ್ರಭುಗಳು ಮುಂದಾಗಲಿದ್ದ ಈ ದುರಂತ ಸಂಭವಿಸುವ ಸೂಚನೆ ನೀಡಿದ್ದು ಅವರ ವಚನ ಸಾಕ್ಷಿ ಹೇಳುತ್ತದೆ.
ಅನುಭವ ಮಂಟಪದ ಅಧ್ಯಕ್ಷ ಪಟ್ಟವನ್ನ ಚೆನ್ನಬಸವಣ್ಣನವರಿಗೆ ಕೊಟ್ಟ ಅವರು ಅಕ್ಕಮಹಾದೇವಿ ಅದಿ ಶರಣರೊಂದಿಗೆ ಶ್ರೀಶೈಲಕ್ಕೆ ಹೋಗಿದ್ದರು. ಚೆನ್ನಬಸವಣ್ಣನವರಾದಿಯಾಗಿ ಶರಣರು ಉಳವಿಯ ಕಡೆಗೆ ಹೋಗುವಂತೆ ಸೂಚಿಸಿದ್ದರು.)
ಈಗ ಕಲ್ಯಾಣ ಪಟ್ಟಣ ಕೆಟ್ಟು ಅಮಾಯಕರಾದ ಶಾಂತಿ ಧೂತ ಶರಣರ ಕೆನ್ನೆತ್ತರು ಹರಿಯತೊಡಗಿ ಆಹಾಕಾರವೇ ಎದ್ದಿತ್ತು. ಆಗ ದಿಕ್ಕೆಟ್ಟುಹೋದಂಥ ಶರಣರು ಗುಂಪು ಗುಂಪಾಗಿ ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿ ಕೊಂಡು ತೋಚಿದ ಕಡೆಗೆ ಹೊರಟು ಹೋದರು. ಚೆನ್ನಬಸವಣ್ಣನವರ ನೇತೃತ್ವದಲ್ಲಿನ ಶರಣರ ದೊಡ್ಡ ತಂಡ ಮಡಿವಾಳ ಮಾಚಯ್ಯ, ಅಕ್ಕನಾಗಮ್ಮ, ಗಂಗಾಂಬಿಕೆತಾಯಿ , ಡೋಹರ ಕಕ್ಕಯ್ಯ ಬಿಷ್ಟಾದೇವಿ ದಂಪತಿಗಳು, ಕಿನ್ನರಿ ಬೊಮ್ಮಣ್ಣ, ಹಡಪದ ರೇಚಣ್ಣ, ಬಳ್ಳೇಶಮಲ್ಲಯ್ಯ ಕೂಗಿನ ಮಾರಿತಂದೆ ಹೀಗೆ ಅನೇಕ ಶರಣರು ವಚನ ಕಟ್ಟುಗಳನ್ನ ಬೆನ್ನಿಗೆ ಕಟ್ಟಿಕೊಂಡು ಉಳವಿ ದಿಕ್ಕಿಗೆ ಹೊರಟರು. ಬಿಜ್ಜಳನ ಸೈನ್ಯವು ಇವರನ್ನು ಬೆನ್ನಟ್ಟಿ ಬಂದಾಗ ಶರಣರು ವಚನಗಳ ರಕ್ಷಿಸುವ ಸಲುವಾಗಿ ವೀರತನದಿಂದ ಕಾದಾಡುವರು. ಸೈನ್ಯ ಕಗ್ಗೊಲೆ ಮಾಡುತ್ತಾ ವಚನ ಕಟ್ಟುಗಳನ್ನು ಸುಟ್ಟು ಹಾಕುತ್ತಾ ತನ್ನ ಕ್ರೌರ್ಯವನ್ನು ಮೆರೆಯುವುದು. ಚಿಕ್ಕ ವಯಸ್ಸಿನ ಚೆನ್ನಬಸವಣ್ಣನವರಾದಿ ಶರಣರ ರಕ್ಷಣೆಗೆ ವೀರ ಶರಣ ಮಡಿವಾಳ ಮಾಚಯ್ಯರು ಕಲಿತನದಿಂದ ಹೋರಾಟ ಮಾಡುತ್ತಾ ಶರಣರ ತಂಡವನ್ನು ಗೊಡಚಿ ತನಕ ಮುನ್ನಡೆಸುವರು.

ಗೋವಾದಿಂದ ಕದಂಬರ ಸೈನ್ಯ ಬರುವುದು ತಡವಾಗಿ, ಅಲ್ಲೇ ಕಾರಿಮನೆ ಎಂಬಲ್ಲಿ ಬಿಜ್ಜಳನ ಸೈನ್ಯವನ್ನು ಮಡಿವಾಳ ಮಾಚಯ್ಯನವರು ಹೋರಾಡಿ ಎದುರಿಸುವರು. ಕಾದರವಳ್ಳಿಯ ಘನಘೋರ ಕದನದಲ್ಲಿ ಹುತಾತ್ಮರಾಗುವರು. ಆಗ ಶರಣರ ತಂಡವನ್ನ ಡೋಹರ ಕಕ್ಕಯ್ಯನವರು ಮುನ್ನಡೆಸುವರು.
ಗಂಗಾಂಬಿಕೆತಾಯಿ ವೀರಗಚ್ಚೆ ಹಾಕಿ ವಚನಕಟ್ಟುಗಳ ಬೆನ್ನಿಗೆ ಕಟ್ಟಿಕೊಂಡು ಹೋರಾಟ ಮಾಡಿ ಎಂಕೆ ಹುಬ್ಬಳ್ಳಿ ಹತ್ತಿರ ಹುತಾತ್ಮರಾದಾಗ ಅವರನ್ನಲ್ಲಿ ಸಮಾಧಿ ಮಾಡಿ ಮುಂದೆ ಸಾಗುವ ಶರಣರು ಅವಿರಳ ಜ್ಞಾನಿ ಚೆನ್ನಬಸವಣ್ಣನವರನ್ನ ಕಾಪಾಡುವ ಸಲುವಾಗಿ ಎರಡು ತಂಡಗಳಾಗಿ ಒಂದು ತಂಡ ಕಕ್ಕೇರಿ ಲಿಂಗನಮಠ ಜಗಳಬೆಟ್ಪ ಮಾರ್ಗ ಸಾಗಿದಾಗ ಕಕ್ಕೇರಿಯಲ್ಲಿ ಕಕ್ಕಯ್ಯನವರು ಹುತಾತ್ಮರಾಗುವರು.
ಮತ್ತೊಂದು ತಂಡವು ಚೆನ್ನಬಸವಣ್ಣನವರಾದಿ ಶರಣರ ಜೊತೆ ಸೇರಿ ಸೊಗಲ ಮುರಗೋಡ ಉಣಕಲ್ಲು ಹುಬ್ಬಳ್ಳಿ ಮಾರ್ಗಹಿಡಿದು ಹಳಿಯಾಳ ಹತ್ತಿರ ಸಾಂಬ್ರಾಣಿ ಊರಿಗೆ ತಲುಪಲು, ಅಲ್ಲಿಗೆ ಜಗಳಬೆಟ್ಪದ ಕಡೆಯಿಂದ ಬಂದ ತಂಡವೂ ಸೇರಿಕೊಂಡು ಉಳವಿ ತಲುಪುತ್ತದೆ. ಆಗೆಲ್ಲಾ ಬಿಜ್ಜಳನ ಸೈನ್ಯವು ಬಹಳಷ್ಟು ಶರಣರನ್ನು ಹತ್ಯೆಗೈಯಿತು ಎನ್ನುವುದನ್ನು ಆ ಭಾಗದ ಊರಿನ ಹೆಸರುಗಳೇ ಈ ದಾರುಣವಾದ ಶರಣರ ಹತ್ಯಾಕಾಂಡದ ಘಟನೆಯ ಕಥೆಯನ್ನು ಹೇಳುತ್ತಲಿವೆ ಎನ್ನುವುದೇ ಶರಣರ ಚರಿತ್ರೆಯ ಕುರುಹುಗಳ ಉಲುಹಾಗಿದೆ.
ಉಳವಿ ತಲುಪಿದ ಚೆನ್ನಬಸವಣ್ಣನವರು ಅಕ್ಕನಾಗಮ್ಮ ನುಲಿಯ ಚಂದಯ್ಯ ಹಡಪದ ರೇಚಣ್ಣರಾದಿ ಶರಣರೆಲ್ಲರು ದೈಹಿಕವಾಗಿ ಗಾಯಗೊಂಡಿದ್ದರೂ ಕೂಡ ಅದನ್ನ ಅವರೆಲ್ಲ ಸಹಿಸಿಕೊಂಡು ಧೈರ್ಯದಿಂದಲೇ ಎದ್ದು ಸುಧಾರಿಸಿಕೊಂಡು ಉಳವಿಯಲ್ಲಿ ಮತ್ತೇ ಅನುಭವ ಮಂಟಪದ ಚಟುವಟಿಕೆಗಳನ್ನ ಅಲ್ಲಿ ಚೆನ್ನಬಸವಣ್ಣನವರ ಅಧ್ಯಕ್ಷತೆಯಲ್ಲಿ ನಡೆಸಿದರು ಎನ್ನುವುದು ತಿಳಿದು ಬರುತ್ತದೆ. ಮುಂದೆ ಅಲ್ಲೇ ಚೆನ್ನಬಸವಣ್ಣನವರು ದೇಹತ್ಯಾಗ ಮಾಡಿ ಕ್ರಿಯಾ ಸಮಾಧಿ ಆಗುವರು. ಅಲ್ಲಿಯೇ ಈಗಿನ ಉಳವಿ ಚೆನ್ನಬಸವಣ್ಣನವರ ದೇವಾಲಯವನ್ನು ಆಗಿನ ಲಿಂಗಾಯತ ಅರಸರು ನಿರ್ಮಾಣ ಮಾಡಿದರು. ಅಕ್ಕನಾಗಮ್ಮ ನುಲಿಯ ಚೆಂದಯ್ಯರಾದಿ ಶರಣ ತಂಡವು ಚಿಕ್ಕಮಂಗಳೂರಿನ ಎಣ್ಣೆ ಹೊಳೆ ದಾಟಿ
ತರೀಕೆರೆಯಲ್ಲಿ ಉಳಿದು ಅಲ್ಲೇ ಐಕ್ಯ ಆಗುವರು. ಚಂದಯ್ಯ ಶರಣ ನುಲೇನೂರಲ್ಲಿ ಕೆಲವು ಕಾಲ ಉಳಿದುಕೊಂಡು ವಚನ ಪ್ರಸಾರ ಮಾಡಿ ಅಲ್ಲೇ ಐಕ್ಯವಾಗುವರು. ಆ ಮೂಲಕ ಶರಣರ ಕಲ್ಯಾಣ ಕ್ರಾಂತಿಯ ಕೊನೆಯ ದೀಪ ಶಾಂತಿಯಾಗುತ್ತದೆ.
om shree guru basava lingaya namah.
sharanu sharanartigalu….
ಶರಣರ ಜೀವನ ಪ್ರಯಾಣ, ವಚನಗಳ ರಕ್ಷಣೆ, ಶೈನಿಕರ ಜೊತೆ ಹೋರಾಟ ಇತ್ಯಾದಿ, ವಿಷಯಗಳನ್ನು ತಿಳಿದು ಬಹಳ ಖೇದವಾಗುತ್ತದೆ. ವೈಧಿಕಾಶಾಹಿಗಳು,ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ ಹುನ್ನಾರಕ್ಕೆ ಸಾವಿರಾರು ಶರಣರು ಬಲಿಯಾಗಿದ್ದನ್ನು ಕೇಳೀ ಬಹಳ ದುಃಖವಾಗುತ್ತದೆ. ಅಮಾಯಕ ಶರಣರು ಯಾವ ಕೆಟ್ಟ ಅಭ್ಯಾಸಗಳನ್ನು ಇಲ್ಲದಿದ್ದರೂ ಸಾವಿರಾರು ಜನರ ಹತ್ಯೆಯಾಯಿತು. ಅದಕ್ಕಾಗಿ ಈ ಗ ಮತ್ತೆ ಶರಣರ ತತ್ವಗಳನ್ನು ಉದಯವಾಗಲಿದ್ದು ಪುನಃ ಶರಣರಾಜ್ಯ ಕಟ್ಟಲು ಬರುತ್ತಿದ್ದಾರೆ. ಮಹಾದೇವನ ಆಣತಿಯಂತೆ ಎಲ್ಲವೂ ಸುರಳಿತವಾಗಿ ಆಗಲೆಂದು ಭಗವಂತನಲ್ಲಿ ಪ್ರಾರ್ಥಿಸುವಣ..
ಅನುಪಮ ಲೇಖನ.
ಶರಣರ ಮತ್ತು ವಚನ ರಕ್ಕ್ಷಣೆಯ ಕ್ರಾಂತಿಯ ಕೊನೆಯ ದಿನಗಳ ಸಮಗ್ರವಾದ ವಿವರಗಳು.