ಬಸವಕಲ್ಯಾಣ
ತಾಲ್ಲೂಕಿನ ಕೊಹಿನೂರ ಹೋಬಳಿಯಲ್ಲಿ ಇತ್ತೀಚೆಗೆ ನಡೆದ ಗುರುಬಸವೇಶ್ವರ ಲಿಂಗಾಯತ ಮಹಾಮಠದಿಂದ ನಡೆದ ವಚನ ರಥೋತ್ಸವದಲ್ಲಿ ಮಹಿಳೆಯರೇ ಹಗ್ಗ ಹಿಡಿದು ತೇರು ಎಳೆದರು.
ವಚನ ಗ್ರಂಥಗಳನ್ನು ಇಟ್ಟಿದ್ದ ತೇರನ್ನು ಹತ್ತರ್ಗಾ-ಕೊಹಿನೂರ ಮಹಾಮಠದ ಗೋಣಿರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಎಳೆಯಲಾಯಿತು. ಪುಷ್ಪಗಳಿಂದ ಸಿಂಗರಿಸಿದ್ದ ತೇರು ಎಳೆಯುವಾಗ ವಿವಿಧೆಡೆಯ ಮಠಾಧೀಶರು ಅದರ ಮುಂದೆ ಮುಂದೆ ಸಾಗಿದರು.
ಬಳಿಕ ವೇದಿಕೆಯ ಮೇಲೆ ’ಬಸವ ಭಾರತದ ಬೆಳಕು’ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಗೋಣಿರುದ್ರೇಶ್ವರ ಸ್ವಾಮೀಜಿ ಮಾತನಾಡಿ, `ಕೆಲ ವರ್ಷಗಳಿಂದ ಇಲ್ಲಿ ಮಹಾಮಠ ಸ್ಥಾಪಿಸಿದ್ದು ಇದೇ ಪ್ರಥಮ ಸಲ ತೇರು ಎಳೆಯಲಾಗುತ್ತಿದೆ. ವಚನಗಳು ಅರಿವಿನ ಮೂಲವಾಗಿದ್ದು ಅವುಗಳನ್ನು ಮತ್ತು ಬಸವಣ್ಣನವರ ಪ್ರತಿಮೆಯನ್ನಿಟ್ಟು ರಥೋತ್ಸವ ನಡೆಸಲಾಗಿದೆ. ಇಂಥ ವಿಶಿಷ್ಟ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ದೊರೆತ ಸಹಾಯ, ಸಹಕಾರ ಮರೆಯಲಾಗದು’ ಎಂದರು.
ಬೈಲೂರು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ’ಮೂಢನಂಬಿಕೆ ಎಂಬ ಕತ್ತಲು ತೊರೆದು ಬಸವತತ್ವ ಎಂಬ ಬೆಳಕಿನೆಡೆಗೆ ಸಾಗಬೇಕು. ಗುರು ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ತತ್ವ ಸಾರಿ ವೈಚಾರಿಕತೆ ಮತ್ತು ವೈಜ್ಞಾನಿಕ ತಳಹದಿಯ ಲಿಂಗಾಯತ ಧರ್ಮ ನೀಡಿದ್ದಾರೆ. ಅದರ ಪಾಲನೆ ಅಗತ್ಯವಾಗಿದೆ’ ಎಂದರು.
ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ, ಉಸ್ತೂರಿ ಕೋರಣೇಶ್ವರ ಸ್ವಾಮೀಜಿ, ಶರಣೆ ಪ್ರಭುಶ್ರೀ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಮುಖಂಡರಾದ ರತಿಕಾಂತ ಕೊಹಿನೂರ, ಶಿವಶರಣಪ್ಪ ಸಂತಾಜಿ ಪಾಟೀಲ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಮಲ್ಲಿನಾಥ ಹಿರೇಮಠ ಉಪಸ್ಥಿತರಿದ್ದರು.