ಗದಗ
ಮನುಷ್ಯನು ವಿಶೇಷವಾದ ಜ್ಞಾನ ಪಡೆದು, ಕ್ರಿಯಾಶೀಲವಾಗಿರಬೇಕು. ಮೌಢ್ಯದಿಂದ ಹೊರಗೆ ಬರಬೇಕು. ಶರಣರ ವಚನಗಳು ಬದುಕಿಗೆ ದಿಕ್ಸೂಚಿ, ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳುಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ 2755 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಚಾರ ವಿಚಾರಗಳನ್ನು ರೂಢಿಸಿಕೊಂಡು ಬದುಕು ಸವೆಸಬೇಕು. ಆಚಾರ ವಿಚಾರ ಒಂದೇ ಆದಾಗ ಬದುಕು ಬೆಲೆಯುಳ್ಳದ್ದು ಆಗುತ್ತದೆ. ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು. ಶರಣರ ಬದುಕು ಆ ರೀತಿ ಇತ್ತು. ನಾವು ಅವರ ಹಾಗೆ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ವಚನಗಳನ್ನು ಅರ್ಥೈಸಿಕೊಂಡು, ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಆ ಜ್ಞಾನ ಎಂಬ ಸಂಪತ್ತನ್ನು ಹಂಚುವ ಮೂಲಕ, ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜ್ಞಾನ ಹಂಚಿದಷ್ಟು, ಹೆಚ್ಚಾಗುತ್ತದೆ. ಆದರೆ ದುಡ್ಡು ಹಂಚಿದಷ್ಟು ಕಡಿಮೆಯಾಗುತ್ತದೆ ಎಂದು ಶ್ರೀಗಳು ನುಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಎನ್. ಎಂ. ಪವಾಡಿಗೌಡ್ರ ‘ಆಚರಣೆಗೆ ಪ್ರೇರಣೆಯಾದ ಶರಣರ ವಚನಗಳು’ ವಿಷಯವಾಗಿ ಮಾತನಾಡುತ್ತಾ, ನೀರು ಕಂಡಲ್ಲಿ ಮುಳುಗುವರಯ್ಯಾ, ಮರವ ಕಂಡಲ್ಲಿ ಸುತ್ತುವುರಯ್ಯಾ, ಎಂಬ ವಚನದ ಬಗ್ಗೆ ವಿಶ್ಲೇಷಣೆ ಮಾಡುತ್ತ, ಆಚರಣೆಗೆ ಹೇಗೆ ಪ್ರೇರಣೆಯಾಗಿವೆ, ಎಂಬ ಕುರಿತು ಅವಲೋಕನ ಮಾಡಿದರು. ದೇಹವೇ ದೇಗುಲ ಇದು ಉತ್ಕೃಷ್ಟ ನಿಜಾಚರಣೆ. ಶರಣರು ಸಮಾಜಕ್ಕೆ ತಿಳಿಯುವ ಹಾಗೆ ವಚನಗಳನ್ನು ಬರೆದರು. ಶರಣರು ವಚನ ಅನುಯಾಯಿಗಳ ಬೀಡು ಮಾಡಿದರು. ಗೊಡ್ಡು ಆಚರಣೆ ಬಿಡಿಸಿ ನಿಜ ಆಚರಣೆಗೆ ಪ್ರೇರಣೆಯಾದರು ಎಂದು, ಅನೇಕ ವಿಷಯಗಳ ಮೂಲಕ ಬೆಳಕು ಚೆಲ್ಲಿದರು.
ಶರಣರಾದ ವಿ.ಎ. ಪಾಟೀಲ, ಶಿವಕುಮಾರಗೌಡ ಪಾಟೀಲ, ಹಾಗೂ ಶಿವಣ್ಣ ಯರಾಶಿ ಅವರು ಮಾತನಾಡಿದರು.
ನೂರರಂಚಿನಲ್ಲಿರುವ ನಿವೃತ್ತ ಶಿಕ್ಷಕ ಶರಣ ಇಬ್ರಾಹಿಂಸಾಬ ನಬೀಸಾಬ ತಳ್ಳಿಹಾಳ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣಪ್ರೇಮಿ ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ 95 ನೇ ಜಯಂತ್ಯೋತ್ಸವ ಹಾಗೂ 11 ನೇ ವರ್ಷದ ಪ್ರತಿಭಾ ಪುರಸ್ಕಾರವು ಆಶ್ರಮದ 25 ಟಾಪರ್ ವಿದ್ಯಾರ್ಥಿಗಳಿಗೆ ಕಲಿಯಲು ಪ್ರೇರಣೋಪಾದಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಗಂಗಾಧರ ಮುನವಳ್ಳಿ ಅವರು ಉಪಸ್ಥಿತರಿದ್ದರು.

ವಚನ ಸಂಗೀತವನ್ನು ರತ್ನಮ್ಮ ಮಂಟೂರಮಠ ಹಾಗೂ ಶಿವಶಂಕರ ದೊಡ್ಡಮನಿ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಸವಿತಾ ಪಾಟೀಲ, ವಚನ ಚಿಂತನವನ್ನು ಸುಮಾ ಪಾಟೀಲ ಮಾಡಿದರು.
ದಾಸೋಹ ಸೇವೆಯನ್ನು ಶರಣರಾದ ಎಸ್.ಎ. ಪಾಟೀಲ, ವಿ. ಎ. ಪಾಟೀಲ ಹಾಗೂ ಜಿ.ಎ. ಪಾಟೀಲ ಸಹೋದರರು ಮತ್ತು ಶರಣ ಶಿವಕುಮಾರಗೌಡ ಪಾಟೀಲ ಅಧ್ಯಕ್ಷರು ಬಿ ಜಿ ಅಣ್ಣಿಗೇರಿ ಪ್ರತಿಭಾ ಪುರಸ್ಕಾರ ಸಮಿತಿ ಗದಗ, ಹಾಗೂ ಮಾತೋಶ್ರೀ ಬಸವಲಿಂಗಯ್ಯ ಮಲ್ಲನಗೌಡ ದೇಸಾಯಿ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.