ಗದಗ
ಶರಣರ ವಚನಗಳು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಪ್ರಸ್ತುತ ದಿನಮಾನಕ್ಕೆ ದಾರೀದಿಪವಾಗಿವೆ. ಬಸವಾದಿ ಶಿವಶರಣರ ಬದುಕು ಮತ್ತು ವಚನಗಳು ಆತ್ಮಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣನ್ನುಂಟು ಮಾಡುತ್ತವೆ. ಶಾಂತಿ, ಸೌಹಾರ್ದಯುತ ಬದುಕಿಗೆ ಶರಣರ ಆದರ್ಶಗಳು, ವಚನಗಳು ಬಹಳಷ್ಟು ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೩೧ನೇ ಶಿವಾನುಭವ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರತಿಯೊಂದು ವಚನದ ಸಾಲಿನಲ್ಲಿ, ಶಬ್ದದಲ್ಲಿಯೂ ಮೌಲ್ಯಯುತ ಸಂದೇಶವನ್ನು ಕಾಣಬಹುದು.
‘ನುಡಿದರೆ ಮುತ್ತಿನ ಹಾರದಂತಿರಬೇಕು’ ‘ನಡೆದಂತೆ ನುಡಿ. ನುಡಿದಂತೆ ನಡೆ’ ಇದು ಜೀವನದ ಮೌಲ್ಯವಾಗಬೇಕು ಎಂದು ವಚನಗಳ ಮೂಲಕ ತಿಳಿಸಿದರು. ‘ಮಾಣಿಕ್ಯದ ದೀಪ್ತಿಯಂತಿರಬೇಕು’ ದೀಪ್ತಿ ಅದ್ಬುತವಾದ ಬೆಳಕು. ನಮ್ಮ ನುಡಿಗಳು ಪಾರದರ್ಶಕವಾಗಿರಬೇಕು. ಮಾತು ಮತ್ತು ಕೃತಿಗಳು ಒಂದಾಗಿರಬೇಕು. ಹೇಳುವುದೊಂದು ಬರೆಯುವದೊಂದು ಆಗಬಾರದು. ಶರಣರು ಹೇಳಿದಂತೆ ನಡೆದರು. ಬದುಕಿಗೆ ಮೌಲ್ಯಗಳನ್ನು ಬಿತ್ತಿದರು. ಜಾತಿ, ಮತ, ಪಂಥ, ಸ್ತ್ರೀ, ಪುರುಷ ತಾರತಮ್ಯ ಬಿಟ್ಟು ಸಮಾನತೆಯಿಂದ ಎಲ್ಲರೂ ಬದುಕಬೇಕು ಎಂದು ಮಾತನಾಡಿದರು.

ಉಪಾನ್ಯಾಕರಾಗಿ ಆಗಮಿಸಿದ ಶಿರಹಟ್ಟಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಕೆ. ಲಮಾಣಿ ಮಾತನಾಡಿ, ವಚನಗಳಲ್ಲಿ ಅತ್ಯಮೂಲ್ಯವಾದ ಜೀವನದ ಆದರ್ಶಗಳನ್ನು ಕಾಣುತ್ತೇವೆ. ಮೋಸ ವಂಚನೆಗಳಿಂದ ದೂರಾದ ಬದುಕೆ ನಿಜವಾದ ಮೌಲ್ಯ. ಶರಣರ ಬದುಕಿನಲ್ಲಿ, ವಚನಗಳಲ್ಲಿ ಆದರ್ಶದ ಹೂವುಗಳೆ ಅರಳಿವೆ. ಸಿಹಿಯಾದ ಹಣ್ಣುಗಳೇ ಬಿಟ್ಟಿವೆ. ವಚನಗಳನ್ನು ಓದಿದಾಗ, ಹೂವುಗಳ ಸುವಾಸನೆ. ಹಣ್ಣುಗಳ ಸಿಹಿ, ಸಹಜವಾಗಿ ಲಭಿಸುತ್ತವೆ. ಅವರ ವಚನಗಳ ಸಾರವೆ ಜಗಕೆ ದಾರಿದೀಪ ಎಂದರು.
ಪಿ.ಪಿ.ಜಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಸುಮಿತ್ರಾ ಕಾಡದೇವರಮಠ ಸಂಗೀತ ಸೇವೆಯನ್ನು ನೀಡಿದರು. ಮೃತೃಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಭೂಮಿಕಾ ಕೆ. ತುಕ್ಕಪ್ಪನವರ ಮಾಡಿದರೆ, ವಚನ ಚಿಂತನೆಯನ್ನು ಬಸವರಾಜ ಕೆ. ತುಕ್ಕಪ್ಪನವರ ನಡೆಸಿದರು. ದಾಸೋಹ ಸೇವೆಯನ್ನು ಶ್ರೀಮತಿ ಇಂದ್ರಾಬಾಯಿ ಪಾಟೀಲ ಹಾಗೂ ಕುಟುಂಬ ವರ್ಗದವರು ಸಾ. ವಿಜಯಪುರ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಸಂಘಟನಾ ಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಹ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ.ಬೆನಕೊಪ್ಪ ಸ್ವಾಗತ ಕೋರಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.