ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ, 103, ಅವರಿಗೆ ಮುಂಡರಗಿ ಮಠದಲ್ಲಿ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಮುಂಡರಗಿ

103 ವರ್ಷದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆಯಾಟದ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಅವರನ್ನು ಸ್ಥಳೀಯ ತೋಂಟದಾರ್ಯ ಮಠದಲ್ಲಿ ನಡೆದ 59ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಭೀಮವ್ವ ಅವರು 103 ವರ್ಷದ ಹಿರಿಯ ಜೀವಿಯಾದರೂ ಜೀವನೋತ್ಸಾಹ ಇನ್ನೂ ಕಳೆದುಕೊಂಡಿಲ್ಲ. ಅವರ ಧ್ವನಿಯಲ್ಲಿ ಇಂದಿಗೂ ಸುಮಧುರತ್ವ ಇದೆ. ಕಲೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಹೃದಯವನ್ನದು ಅರಳಿಸುತ್ತದೆ ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ.

ಭೀಮವ್ವ ಶಿಳ್ಳೇಕ್ಯಾತರ ಹಣ, ಆಸ್ತಿ ಬೆನ್ನಟ್ಟಿ ಹೋಗದೇ ತೊಗಲು ಗೊಂಬೆ ಆಟದ ದೇಶಿ ಕಲೆಯನ್ನು ತನ್ನ ಬದುಕಿನಲ್ಲಿ ಅಳ‍ವಡಿಸಿಕೊಂಡಿರುವುದು, ಅದನ್ನು ಉಳಿಸಿ ಬೆಳೆಸಿರುವುದು ವಿಶೇಷವಾದದ್ದು. ಹೀಗಾಗಿ ಕೇಂದ್ರ ಸರ್ಕಾರ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನೆರೆಯ ಕೊಪ್ಪಳ ಹಾಗೂ ಗದಗ ಜಿಲ್ಲೆಗೆ ಹೆಮ್ಮೆ ತರುವಂತದ್ದು. ಹಿರಿಯ ವಯಸ್ಸಿನ ಈ ಕಲಾತಾಯಿಯನ್ನು ಖಾಳಜಿಯಿಂದ ನೋಡಿಕೊಳ್ಳಬೇಕು ಎಂದರು.

ಬನಹಟ್ಟಿಯ ಹಿರಿಯ ಸಾಹಿತಿ, ಕಲಾವಿದ ಪ್ರೊ. ಬಿ.ಆರ್. ಪೋಲೀಸಪಾಟೀಲ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿ, ಜನಪದ ಜ್ಞಾನಪದವಾಗಿದೆ. ವಚನ ಸಂಸ್ಕೃತಿ ನಮ್ಮಲ್ಲಿ ಉಳಿದು ಬೆಳೆದು ಬಂದಿರುವುದಕ್ಕೆ ಜನಪದವೂ ಸಹಕಾರಿಯಾಗಿದೆ. ವಚನ ಸಾಹಿತ್ಯ ಕಟ್ಟುಗಳನ್ನು ಸಂಗ್ರಹಿಸುವಲ್ಲಿ ಅವುಗಳನ್ನು ಉಳಿಸಿ ಬೆಳೆಸಿ ಇಂದು ಎಲ್ಲರಿಗೂ ಬಸವಾದಿ ಶರಣರ ವಚನಗಳು ದೊರೆಯುವಂತೆ ಮಾಡಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ, ಹಳಕಟ್ಟಿಯಂತವರನ್ನು ನಾವು ಸದಾಕಾಲ ನೆನೆಯಬೇಕು ಎಂದರು.

ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮೀಜಿ, ಧಾರವಾಡದ ವಿಜಯ ದೊಡ್ಡವಾಡ ಸಹ ಮಾತನಾಡಿದರು.

ವಿಜ್ಞಾನವಸ್ತು ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ರಕ್ಷಿತಾ ಚುರ್ಚಿಹಾಳ ಹಾಗೂ ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರನ್ನು ಗೌರವಿಸಲಾಯಿತು.

ಪೂಜ್ಯ ನಿಜಗುಣಪ್ರಭ ತೋಂಟದಾರ್ಯ ಸ್ವಾಮೀಜಿ ಅವರ 61ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಮಠದ ಭಕ್ತರು ಅವರನ್ನು ಸತ್ಕರಿಸಿದರು.

ಜಯಶ್ರೀ ಅಳವಂಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಕುಮಾರ ಕುಬಸದ ತಬಲಾ ಸಾಥ್ ನೀಡಿದರು. ಅಮೃತ ದಂಡಿನ ಧರ್ಮಗ್ರಂಥ ಪಠಣ ಮಾಡಿದರು. ಮೈನಾ ದಂಡಿನ ವಚನ ಚಿಂತನ ಮಾಡಿದರು.

ಕಾರ್ಯಕ್ರಮದಲ್ಲಿ ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಎಚ್. ವಿರೂಪಾಕ್ಷಗೌಡ, ಓಂಪ್ರಕಾಶ ಲಿಂಗಶೆಟ್ಟರ, ಪವನ ಚೋಪ್ರಾ, ಅಡಿವೆಪ್ಪ ಚಲವಾದಿ, ಶಿವಕುಮಾರ ಬೆಟಗೇರಿ, ವೀರೇಂದ್ರ ಅಂಗಡಿ, ಶಿವಯೋಗಿ ಕೊಪ್ಪಳ, ಗಿರೀಶಗೌಡ ಪಾಟೀಲ, ಬಸಯ್ಯ ಗಿಂಡಿಮಠ, ಸದಾಶಿವಯ್ಯ ಕಬ್ಬೂರಮಠ, ಪಾಲಾಕ್ಷಿ ಗಣದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿ, ನಾಗೇಶ ಹುಬ್ಬಳ್ಳಿ ಶರಣು ಸಮರ್ಪಣೆ ಮಾಡಿದರು.

Share This Article
Leave a comment

Leave a Reply

Your email address will not be published. Required fields are marked *