ಬಸವ ಜಯಂತಿ ಪ್ರಯುಕ್ತ ಸರಕಾರ ‘ಸಮತಾ ಸಪ್ತಾಹ’ ಆಚರಿಸಲಿ: ಭಾಲ್ಕಿ ಶ್ರೀ ಪತ್ರ

ಬಸವ ಮೀಡಿಯಾ
ಬಸವ ಮೀಡಿಯಾ

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಆಚರಿಸುವ ಯುವ ಸಪ್ತಾಹದ ಮಾದರಿಯಲ್ಲಿ ‘ಸಮತಾ ಸಪ್ತಾಹ’ ಆಚರಿಸಲಿ ಎಂದು ಮುಖ್ಯಮಂತ್ರಿಗೆ ಪತ್ರ

ಭಾಲ್ಕಿ

ಬಸವ ಜಯಂತಿ ಅಂಗವಾಗಿ ಸರ್ಕಾರ “ಸಮತಾ ಸಪ್ತಾಹ” ಹಮ್ಮಿಕೊಳ್ಳಬೇಕೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ತಮ್ಮ ನೇತೃತ್ವದ ಕರ್ನಾಟಕ ಘನ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಅತ್ಯಂತ ಚಾರಿತ್ರಿಕ ಸಂಗತಿಯಾಗಿದೆ. ಈ ಘೋಷಣೆಯ ಅಂಗವಾಗಿ ಪ್ರಸಕ್ತ ಸಾಲಿನ ಬಸವ ಜಯಂತಿಯಂದು ಕೂಡಲಸಂಗಮದಲ್ಲಿ ತಮ್ಮ ಸರಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿರುವ ವಿಷಯ ತಿಳಿದು ನಮಗೆ ಅತ್ಯಂತ ಸಂತೋಷವಾಗಿದೆ.

ಬಸವಾದಿ ಶರಣರ ಚಿಂತನೆಗಳನ್ನು ಅಂತರ್ ಬಾಹ್ಯವಾಗಿ ನಂಬಿಕೊಂಡಿರುವ ತಾವು ಬಸವತ್ವದ ಕುರಿತು ವಿಶೇಷ ಅಭಿಮಾನ ಮತ್ತು ಅಭಿರುಚಿ ಹೊಂದಿದ್ದೀರಿ ಎಂಬುದಕ್ಕೆ ತಾವು ತೆಗೆದುಕೊಂಡ ಅನೇಕ ದೃಢ ನಿರ್ಧಾರಗಳೇ ಸಾಕ್ಷಿಯಾಗಿವೆ. ಬಸವತ್ವದ ಅನುಷ್ಠಾನವೇ ತಮ್ಮ ಸರ್ಕಾರದ ಉದ್ದೇಶವಾಗಿದೆ. ವಿಶ್ವಗುರು ಬಸವಣ್ಣನವರು ನೀಡಿರುವ ಜಾಗತಿಕ ಮೌಲ್ಯಗಳಲ್ಲಿ ಸಮಾನತೆಯ ಮೌಲ್ಯ ಅತ್ಯಂತ ಮಹತ್ತರ ಇಂದಿಗೂ ಪ್ರಸ್ತುತವಾಗಿದೆ. ಬಸವಕ್ರಾಂತಿಯೆಂದರೆ ಸಮಾನತೆಯ ಕ್ರಾಂತಿ. ಅಂದಿನ ಕಾಲದಲ್ಲಿ ಸರ್ವಕ್ಷೇತ್ರದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿ, ಬಸವಾದಿ ಶರಣರು ಸಮಾನತೆಯ ಕಲ್ಯಾಣ ರಾಜ್ಯ ಕಟ್ಟಿದ್ದರು.

ಆ ಮೌಲ್ಯಗಳನ್ನು ಜನಮನದಲ್ಲಿ ಬಿತ್ತುವುದಕ್ಕಾಗಿ ಸ್ವಾಮಿ ವಿವೇಕಾನಂದರ ಜಯಂತಿ ಯುವ ಸಪ್ತಾಹವನ್ನಾಗಿ ಆಚರಿಸುವ ಮಾದರಿಯಲ್ಲಿ ಬಸವ ಜಯಂತಿ ಅಂಗವಾಗಿ ‘ಸಮತಾ ಸಪ್ತಾಹ’ ಆಚರಿಸುವ ಮೂಲಕ ಸಾಂಸ್ಕೃತಿಕ ನಾಯಕನಿಗೆ ಕರ್ನಾಟಕ ಸರ್ಕಾರ ವಿಶೇಷ ಗೌರವ ಸಲ್ಲಿಸಬೇಕು.

ವಿಶ್ವಗುರು ಬಸವಣ್ಣನವರ ಜಯಂತಿ ದಿನದಿಂದ ಮುಂದಿನ ಏಳು ದಿನಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು, ಶಾಲಾ/ಕಾಲೇಜುಗಳು, ಸರ್ಕಾರಿ ಕಛೇರಿಗಳು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಮತಾ ಮಹೋತ್ಸವ, ಸಮತಾ ಸಮ್ಮೇಳನ, ಸಮತಾ ವಿಚಾರ ಸಂಕಿರಣ, ಚರ್ಚಾಗೋಷ್ಠಿಗಳನ್ನು ಹಮ್ಮಿಕೊಳ್ಳುವ ಮೂಲಕ ಬಸವಾದಿ ಶರಣರ ಸಮತಾವಾದವನ್ನು ಪ್ರತಿಪಾದಿಸಿ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬಹುದು.

ವಿಶೇಷವಾಗಿ ಯುವಕರಲ್ಲಿ ಸಮಾನತೆಯ ಮೌಲ್ಯ ಬಿತ್ತುವ ಅಗತ್ಯತೆ ಹಿಂದಿನಕ್ಕಿಂತಲೂ ಇಂದು ಅವಶ್ಯಕವಾಗಿದೆ. ಆ ದಿಶೆಯಲ್ಲಿ ಬಸವಾದಿ ಶರಣರ ಸಮತಾ ಮೌಲ್ಯಗಳಾಧಾರಿತ ರಾಜ್ಯಮಟ್ಟದ ಭಾಷಣ ಸ್ಪರ್ಧೆ, ನಿಬಂಧ ಸ್ಪರ್ಧೆ, ವಚನ-ನಿರ್ವಚನ ಸ್ಪರ್ಧೆ, ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ವಚನ ನೃತ್ಯ, ಶರಣರ ರೂಪಕ, ನಾಟಕ ಸ್ಪರ್ಧೆ, ಶರಣರ ಕುರಿತು ಕಿರು ಚಲನಚಿತ್ರ (Short Films) ಮಹೋತ್ಸವ ಮುಂತಾದ ರಚನಾತ್ಮಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಅವಕಾಶ ದೊರೆಯುತ್ತದೆ. ಈ ದಿಸೆಯಲ್ಲಿ ತಾವು ಸಕಾರಾತ್ಮಕವಾಗಿ ಈ ವಿಷಯಕ್ಕೆ ಸ್ಪಂದಿಸುವ ಮೂಲಕ ಬಸವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೀರಿ ಎಂದು ನಾವು ಬಲವಾಗಿ ನಂಬಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *