ಸೊಲ್ಲಾಪುರ
ಬಸವ ಜಯಂತಿ ಮತ್ತು ಇಂಡಿ ತಾಲೂಕಿನ ರೋಡಗಿ ಗ್ರಾಮ ದೇವರು ಶ್ರೀ ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಗಳು ಆಯೋಜಿಸಲಾಗಿದೆ.
ಶನಿವಾರ ಮೇ.೩ ರಂದು ಬೆಳಿಗ್ಗೆ ೧೦ ರಿಂದ ರೋಡಗಿ ಶಿವಲಿಂಗೇಶ್ವರ ಮಠದ ಪರಿಸರದಲ್ಲಿ ವಿಜೃಂಭಣೆಯಿಂದ ಈ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ.

ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ, ನಗದು, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವದು.
ಗ್ರಾಮದೇವತೆ ಜಾತ್ರೆ ನಿಮಿತ್ತ ಧರ್ಮ ಸಭೆ, ಸಾಮೂಹಿಕ ಮದುವೆ ಸಮಾರಂಭ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಲ್ಲಿಯ ಸರಕಾರಿ ಪ್ರಥಮದರ್ಜೆ ಗುತ್ತಿಗೆದಾರ ಬಸವಾಭಿಮಾನಿ ಪರಮಾನಂದ ಅಲಗೊಂಡಾ ಪಾಟೀಲರು ತಿಳಿಸಿದ್ದಾರೆ.
ಬಸವ ಜಯಂತಿ ನಿಮಿತ್ತ ಈ ಹಿಂದೆ ರಾಜ್ಯಮಟ್ಟದ ಮುಕ್ತವಾದ ಯಾವುದೇ ವಯಸ್ಸಿನ ಮಿತಿಯಿಲ್ಲದೆ ‘ಆಯ್ದ 150 ವಚನಗಳು ಹಾಗೂ ಅವುಗಳ ಭಾವಾರ್ಥ ಲೇಖನ’ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಂಥ ವಚನ ಸ್ಪರ್ಧೆ ನಡೆದದ್ದು ರಾಜ್ಯದಲ್ಲಿಯೇ ಮೊದಲು. ೧.೧೦ ಲಕ್ಷ ರೂಗಳ ಬಹುಮಾನ ಸ್ಪರ್ಧೆಗಾಗಿ ಇಟ್ಟಿದ್ದು ಇದು ಮೊದಲ ಬಾರಿ. ೧೪೦ ಸ್ಪರ್ದಾಳುಗಳು ೧೨ ಸಾವಿರ ಪುಟದಷ್ಟು ೧೫೦ ಆಯ್ದ ವಚನಗಳಿಗೆ ಭಾವಾರ್ಥ ಬರೆದು ಕಳಿಸಿದ್ದು ಇದೇ ಮೊದಲು.
ಸರ್ಕಾರಿ ಪ್ರಥಮ ದರ್ಜೆಯ ಗುತ್ತಿಗೆದಾರ ಬಸವ ಅಭಿಮಾನಿ ಪರಮಾನಂದ ಆಲಗೊಂಡ ಪಾಟೀಲರು ತಮ್ಮ ಸ್ವಂತ ಖರ್ಚಿನಲ್ಲಿ ಇಂಥ ಸ್ಪರ್ಧೆ ಪ್ರಾಯೋಜಿಸಿ, ವಚನ ಪ್ರಚಾರಕ್ಕೆ ಪ್ರೇರಣೆ ನೀಡುವ ಮಹತ್ವದ ಕಾರ್ಯ ಮಾಡಿದ್ದೂ ಇನ್ನೂ ವಿಶೇಷ.
ಈ ಸ್ಪರ್ಧೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಹೆಚ್ಚಿನ ಬೆಂಬಲ ದೊರಕಿತ್ತು. ಫೆ.೧ ರಿಂದ ಮಾರ್ಚ ೨೫ ರ ವರಗೆ ನಡೆದ ಈ ಸ್ಪರ್ಧೆಯಲ್ಲಿ ಹಿರಿಯರು, ಕಿರಿಯರು, ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕರು ಸೇರಿ ಒಟ್ಟು ೧೪೦ ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಪ್ರಥಮ ೫೦ ಸಾವಿರ ರೂ, ದ್ವಿತೀಯ ೨೫ ಸಾವಿರ ರೂ, ತೃತೀಯ ೧೦ ಸಾವಿರ ರೂ ಮತ್ತು ೫ ಸಾವಿರ ರೂ.ಗಳ ೫ ಮೆಚ್ಚುಗೆ ಬಹುಮಾನ ಹೀಗೆ ಒಟ್ಟು ೧.೧೦ ಲಕ್ಷ ರೂಗಳ ಎಂಟು ನಗದು ಬಹುಮಾನ ಪ್ರಕಟಿಸಲಾಗಿತ್ತು. ಈ ಸ್ಪರ್ಧೆ ಕಾರ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರ, ರೋಡಗಿಯ ಅಭಿನವ ಶಿವಲಿಂಗೇಶ್ವರ ಶ್ರೀಗಳು ಮತ್ತು ವಿಜಯಪುರದ ಪರಮಾನಂದ ಮಹಾರಾಜರ ಸಾನಿಧ್ಯದಲ್ಲಿ, ಭಾರಿ ಕೈಗಾರಿಕೆ ಸಚಿವ ಎಮ್.ಬಿ. ಪಾಟೀಲ, ಸಚಿವರಾದ ಶಿವಾನಂದ ಪಾಟೀಲ, ಸಚಿವ ಶರಣಬಸಪ್ಪ ದರ್ಶನಾಪೂರ, ಅಫಜಲಪುರ ಶಾಸಕ ಎಮ್.ವಾಯ್. ಪಾಟೀಲ, ಇಂಡಿ ಶಾಸಕ ಯಶ್ವಂತಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಈ ಸ್ಪರ್ಧೆಯ ಯಶಸ್ಸಿಗಾಗಿ ಇಂಡಿಯ ಬಸವ ಸಮಿತಿ, ಬರೂರದ ಆನಂದ ಶಾಸ್ತ್ರೀ, ಅನಿಲಗೌಡ ಬಿರಾದಾರ, ನಿವೃತ್ತ ಶಿಕ್ಷಕ ಚನ್ನಬಸಪ್ಪ ತಾವರಖೇಡ, ಸೊಲ್ಲಾಪುರದ ಪ್ರಾಂಶುಪಾಲ ರವಿಕಾಂತ ಪಾಟೀಲ, ಯಶ್ವಂತ ಬಿರಾದಾರ, ರಾಜಶೇಖರ ಬಂಡಿ, ಸಿದ್ದು ಅಲಗೊಂಡ, ಸಂಗಣ್ಣ ಈರಾಬಟ್ಟಿ, ಶಂಕರಗೌಡ ಬಂಡಿ, ಚನ್ನುಗೌಡ ಪಾಟೀಲ, ಪ್ರಶಾಂತ ಅಲಗೊಂಡ, ಪ್ರಭು ಬಬಲೇಶ್ವರ ಸೇರಿದಂತೆ ಹಲವರು ಶ್ರಮಿಸಿದ್ದರು. ಹೆಚ್ಚಿನ ಬಸವಾಭಿಮಾನಿಗಳು, ಸ್ಪರ್ಧಾಳುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪರಮಾನಂದ ಅಲಗೊಂಡಾ ಪಾಟೀಲರು ಕೋರಿದ್ದಾರೆ.