ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ರಾಜ್ಯದ್ಯಂತ ಮಠಾಧೀಶರ ಒಕ್ಕೂಟವು ಸಕಲ ಸಿದ್ಧತೆಯನ್ನು ನಡೆಸಿರುವುದು ಅತ್ಯಂತ ಅಭಿಮಾನದ ಮತ್ತು ಸಂತೋಷದ ಸಂಗತಿಯಾಗಿದೆ.
ಸೆಪ್ಟೆಂಬರ್ ೧ ರಿಂದ ಕರ್ನಾಟಕದಲ್ಲಿ ಲಿಂಗಾಯತದ ಪುನರುತ್ಥಾನ ಆರಂಭವಾಗುತ್ತಿದೆ. ಲಿಂಗಾಯತ ಸಮಾಜವು ಮಠಾಧೀಪತಿಗಳ ಒಕ್ಕೂಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡಬೇಕು. ಲಿಂಗಾಯತದ ಮೇಲೆ ಮತ್ತೆ ಮತ್ತೆ ದಾಳಿ ನಡೆಸುತ್ತಿರುವ “ಬ್ರಾಹ್ಮಣ್ಯ”ಕ್ಕೆ ಇದು ಶಕ್ತಿಯುತವಾದ ಉತ್ತರವಾಗುತ್ತದೆ.
ಈ ಪುನರುತ್ಥಾನದ ಮೂಲಕ ಯುವ ಜನತೆಯಲ್ಲಿ ಬಸವ ಪ್ರಜ್ಞೆ ಎಚ್ಚರಿಸುವ ಅಭಿಯಾನ ಇದಾಗಲಿದೆ. ಅನೇಕ ಬಗೆಯ ವೈದಿಕ ಮೌಢ್ಯಕ್ಕೆ ಬಲಿಯಾಗಿರುವ ಲಿಂಗಾಯತದ ಬಿಡುಗಡೆಗೆ, ಸಬಲೀಕರಣಕ್ಕೆ ಅಭಿಯಾನ ಮುನ್ನುಡಿಯಾಗುತ್ತದೆ. ಲಿಂಗಾಯತ ಎಲ್ಲ ಒಳಪಂಗಡಗಳು ಇದರಲ್ಲಿ ಭಾಗವಹಿಸುತ್ತಿರುವುದು ಪುನರುತ್ಥಾನದ ಹೆಗ್ಗುರುತಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಜನಗಣತಿ-ಜಾತಿಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೂ, ಜಾತಿಯ ಕಾಲಂನಲ್ಲಿ ಲಿಂಗಾಯತದ ಒಳಪಂಗಡದ ಹೆಸರನ್ನು ಬರೆಸುವ ಬಗ್ಗೆಯೂ ಅಭಿಯಾನವು ಜಾಗೃತಿ ಚಳುವಳಿಯೂ ಆಗಲಿದೆ. ಯಾವುದೇ ಕಾರಣಕ್ಕೂ ಲಿಂಗಾಯತರು ತಮ್ಮನ್ನು ಹಿಂದೂ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಎಂದು ಎಲ್ಲಿಯೂ ಬರೆಸಕೂಡದು.
ಬಸವಣ್ಣನವರು ಲಿಂಗಾಯತ ಸಮಾಜವನ್ನು “ವಿಪ್ರಕರ್ಮ”ದ ಸಂಕೋಲೆಯಿಂದ ಬಿಡಿಸಿ ಅಶುದ್ಧರಾಗಿದ್ದವರನ್ನು ಶುದ್ಧರನ್ನಾಗಿ ಮಾಡಿದ್ದಾರೆ. ಬಸವಣ್ಣನವರ ಈ ಆದೇಶವನ್ನು ಕಾರ್ಯಾನುಷ್ಠಾನ ಮಾಡುವುದಕ್ಕಾಗಿಯೇ ರಾಜ್ಯದಲ್ಲಿ ಲಿಂಗಾಯತ ಧರ್ಮ ಅಭಿಯಾನ ನಡೆಯುತ್ತದೆ.
ಈ ಅಭಿಯಾನವನ್ನು ಸಂಘಟಿಸುತ್ತಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಡಾ. ಎಸ್. ಎಂ. ಜಾಮದಾರ್ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಲಿಂಗಾಯತದ ಎಲ್ಲ ಒಳಪಂಗಡಗಳ ಒಟ್ಟು ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಅಗತ್ಯವಾಗಿದೆ. ವೈಯುಕ್ತಿಕ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಮರೆತು ನಾವೆಲ್ಲ ಒಟ್ಟಾಗಿ ಅಭಿಯಾನವನ್ನು ಯಶಸ್ವಿಗೊಳಿಸೋಣ.
ಖಂಡಿತವಾಗಿಯೂ ಇದು ಎಲ್ಲಾ ಲಿಂಗಾಯತ ಒಳಪಂಗಡಗಳು ಒಂದುಗೂಡಲು ಮತ್ತು ಈ ಬಾರಿ ಜನಗಣತಿಯಲ್ಲಿ ಹೇಗೆ ನೋಂದಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮಾಡಿಸಲು ಸುಸಂದರ್ಭವಾಗಿ ಬಂದಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಎಲ್ಲರೂ ತೊಡಗಿಸಿಕೊಂಡು ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆಯಬೇಕು.
ಒಳ್ಳೆಯ ಬೆಳವಣಿಗೆ ,
ಆದರೆ ಲಿಂಗಾಯತ ಧರ್ಮಕ್ಕೆ ತೊಂದರೆ ಕೊಡುವ,ಬ್ರಾಹ್ಮಣ್ಯ ಒಂದೇ ಅಲ್ಲ ಅದರ ಜೊತೆಗೆ ಇನ್ನೊಂದು ಮಗ್ಗುಲು ಮುಳ್ಳು ಇದೆ ಅದನ್ನು ಸರಿಸುವ ಕೆಲಸ ಮಠಾಧೀಶರು ಒಕ್ಕೂಟದಿಂದ ಆಗಬೇಕು.