ಬೀದರ
ನಗರದ ಯುವ ರಾಷ್ಟ್ರೀಯ ಬಸವದಳ ಹಾಗೂ ಡಾ. ಮಾತೆ ಮಹಾದೇವಿ ಬಸವ ಬಳಗದ ನೂತನ ಕಾರ್ಯಾಲಯವನ್ನು ಶನಿವಾರ ಪೂಜ್ಯ ಸದ್ಗುರು ಬಸವದೇವರು (ಅನುಭವ ಮಂಟಪ, ಬಸವಕಲ್ಯಾಣ) ಅವರ ದಿವ್ಯ ನೇತೃತ್ವದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಸಿದ್ರಾಮ ಶೆಟಕಾರ ಅವರು, ಯುವ ರಾಷ್ಟ್ರೀಯ ಬಸವದಳದ ಮುಂದಿನ ಒಂದು ವರ್ಷದ ಕಾರ್ಯಯೋಜನೆಗಳನ್ನು ವಿವರಿಸಿದರು. ಈ ಯೋಜನೆಗಳಲ್ಲಿ ರಕ್ತದಾನ ಶಿಬಿರಗಳು, ‘ಬಸವ ತತ್ವದ ನಡೆ ಹಳ್ಳಿಗಳ ಕಡೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಹಳ್ಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಬಸವ ತತ್ವ ಪ್ರಚಾರ ಸಭೆಗಳು, ನಗರದಲ್ಲಿ ಉದ್ಯೋಗ ಮೇಳಗಳು, ಧಾರ್ಮಿಕ ಆಧ್ಯಾತ್ಮಿಕ ಶಿಬಿರಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು, ಬಸವ ಪಂಚಮಿಯಂದು ಬಡವರಿಗೆ ಹಾಗೂ ಅನಾಥ ಮಕ್ಕಳಿಗೆ ಸಹಾಯ, ನಿರುದ್ಯೋಗಿ ಯುವಕರಿಗೆ ಸ್ವಯಂ ಅಥವಾ ಸರ್ಕಾರಿ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.

ಬೀದರ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶರಣ ಸೋಮಶೇಖರ ಪಾಟೀಲ ಗಾದಗಿ ಅವರು ಮಾತನಾಡಿ, ಯುವ ರಾಷ್ಟ್ರೀಯ ಬಸವದಳದ ಎಲ್ಲ ಕಾರ್ಯಗಳಿಗೂ ತಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿ, ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ್ದ ಪೂಜ್ಯ ಬಸವ ದೇವರು ಎಲ್ಲರ ಮನಮುಟ್ಟುವಂತೆ ಮಾತನಾಡುತ್ತ “ಎಲ್ಲರೂ ಬಸವ ಅಭಿಮಾನದ ಜೊತೆ ಜೊತೆಗೆ ಬಸವ ತತ್ವ ಪಾಲನೆ ಮಾಡಬೇಕು,” ಎಂದು ಕರೆ ನೀಡಿದರು. ಷಟ್ಸ್ಥಲದ ಪರಿಕಲ್ಪನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ನೆರೆದಿದ್ದ ಸಭಿಕರ ಗಮನ ಸೆಳೆದರು. ‘ಶರಣರ ಆದರ್ಶ ಇಟ್ಟುಕೊಂಡ ಬಸವ ಭಕ್ತರು ಯಾವತ್ತೂ ಮತ್ತೊಬ್ಬರ ತಪ್ಪನ್ನು ಕ್ಷಮಿಸುವಂತಹ ಹಾಗೂ ತಾವು ತಪ್ಪಿದಲ್ಲಿ ಮತ್ತೊಬ್ಬರಲ್ಲಿ ಕ್ಷಮೆ ಕೇಳುವ ಗುಣವನ್ನು ಬೆಳೆಸಿಕೊಳ್ಳಬೇಕು’ ಅಂದಾಗ ಮಾತ್ರ ನಾವು ನಿಜವಾದ ಬಸವಭಕ್ತರಾಗಲು ಸಾಧ್ಯ ಜೊತೆಗೆ ಉತ್ತಮ ಸಂಘಟಿತ ಸಮಾಜ ಕಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದರು.

“ಎನಗೆ ಆಯುಷ್ಯ ಭವಿಷ್ಯ, ಎನ್ನ ಭಕ್ತರು. ಎನಗೆ ಆಯುಷ್ಯ ಭವಿಷ್ಯ, ಎನ್ನ ಪ್ರಮಥರು ಕಂಡಯ್ಯಾ” ಎಂದು ಹನ್ನೆರಡನೆ ಶತಮಾನದಲ್ಲಿಯೇ ಧರ್ಮ ಗುರು ಬಸವಣ್ಣನವರು ತಮ್ಮ ಆಶಯವನ್ನು ಹೇಳಿದ್ದಾರೆ. ಅದರಂತೆ ಇಂದು ಲಿಂಗಾಯತ ಧರ್ಮದ ಆಯುಷ್ಯ ಭವಿಷ್ಯ ಸರ್ವ ಸಮರ್ಪಿತ ಬಸವ ಭಕ್ತರ ಮೇಲಿದೆ, ವಚನಗಳ ಅಧ್ಯಯನ, ಅನುಷ್ಠಾನ ಮತ್ತು ಪ್ರಸಾರ ಇಂದು ತ್ವರಿತವಾಗಿ ನಡೆಯಬೇಕಿದೆ. ಅದಕ್ಕಾಗಿ ನಾವೆಲ್ಲಾ ವಿಚಾರ ಭೇದ, ಸಂಘಟನಾ ಭೇದ ಮರೆತು ಕೇವಲ ಧರ್ಮಕ್ಕಾಗಿ ಒಂದಾಗಿ ಶ್ರಮಿಸಬೇಕಿದೆ. ಈ ಕಾರ್ಯ ಉತ್ಸಾಹಿ ಯುವ ಕಾರ್ಯಕರ್ತರಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಾತೆ ಮಹಾದೇವಿ ಬಸವ ಬಳಗದ ಅಧ್ಯಕ್ಷರಾದ ಶರಣ ಗುರುಪಾದಪ್ಪ ಸಿರ್ಸೆ ಅವರು ವಹಿಸಿದ್ದರು. ತಮ್ಮ ಸಂಘವು ಯಾವತ್ತೂ ಬಸವ ತತ್ವ ಪರವಾಗಿ ಕೆಲಸ ಮಾಡುತ್ತದೆ ಎಂದವರು ನುಡಿದರು. ಈ ಸಂದರ್ಭದಲ್ಲಿ ಶರಣ ನಂದಕುಮಾರ ಪಾಟೀಲ ಅವರು ಗಾಯನ ಪ್ರಸ್ತುತಪಡಿಸಿದರು.

ಶರಣ ಡಾ. ಸಂಗಶೆಟ್ಟಿ ಶೆಟಕಾರ ಸ್ವಾಗತಿಸಿದರು. ಗುರು ಬಸವ ಪೂಜೆಯನ್ನು ಸುನಿತಾ ಮತ್ತು ಅಶೋಕ ಶೀಲವಂತ ಶರಣು ದಂಪತಿ ನೆರವೇರಿಸಿದರು. ನೆನಹು ಪ್ರಾರ್ಥನೆಯನ್ನು ಶರಣ ಜೆ. ಕೆ. ಸ್ವಾಮಿ ಹಾಗೂ ನಂದಕುಮಾರ ಪಾಟೀಲ ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಶರಣ ಶ್ರೀ ಪ್ರವೀಣಕುಮಾರ ಏಕಲಾರೆ ನಡೆಸಿಕೊಟ್ಟರು. ಆಗಮಿಸಿದ್ದ ಎಲ್ಲ ಬಸವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.