ಬಸವಕಲ್ಯಾಣ
ಯೋಗ ಕೇವಲ ಆಸನಗಳಷ್ಟೇ ಅಲ್ಲ ಬುದ್ಧಿ ಮತ್ತು ಮನಸ್ಸು, ದೇಹವನ್ನು ಸುಸ್ಥಿತಿಯಲ್ಲಿಡುವುದು. ಶರಣರು ಇಷ್ಟಲಿಂಗದ ಮೂಲಕ ಶಿವಯೋಗ ಪರಿಚಯಿಸಿದ್ದಾರೆ, ನಿತ್ಯ ಪೂಜೆ ಮಾಡಿಕೊಳ್ಳುವದರ ಮೂಲಕ ಅಂತರಂಗ ಬಹಿರಂಗ ಶುದ್ಧ ಮಾಡೊಕೊಳ್ಳಬಹದು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅಂರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆದ ಶರಣು ಶರಣಾರ್ಥಿ ಸಮಾವೇಶ ಹಾಗೂ ಅಂರ್ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಷ್ಟಲಿಂಗ ಪೂಜಾಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಇಷ್ಟಲಿಂಗ ಅರಿವಿನ ಕುರುಹಾಗಿದೆ. ಸದಾಚಾರಕ್ಕೆ ಮೂಲ ಲಿಂಗಾಧಾರಣೆ. ಆಚರಣೆಯ ಮೊದಲ ಮೆಟ್ಟಿಲೇ ಲಿಂಗಾಧಾರಣೆ. ಯೋಗ ಬಾಹ್ಯ ಪ್ರದರ್ಶನವಲ್ಲ ಅಂತರದರ್ಶನಕ್ಕೆ ಸ್ಪೂರ್ತಿಯಾಗಬೇಕು. ಧ್ಯಾನ ಪ್ರಾಣಾಯಾಮದ ಜೊತೆಗೆ ವಚನಗಳನ್ನು ಹೇಳುವ ಮೂಲಕ ಯೋಗದ ಕಡೆ ಸಾಗಬೇಕು.
ಮಹಾರಾಷ್ಟ್ರ ಜಾಲನಾ ಮೇಡಿಕಲ್ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಅಮರನಾಥ ಸೋಲಪುರೆ ಅನುಭಾವ ನೀಡಿ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಎಂದು ಮೂರು ಪ್ರಕಾರ ತನು-ಮನ-ಭಾವಕ್ಕೆ ಸಂಬಂಧಿಸಿ ಪೂಜೆ ಮಾಡುವ ವಿಧಾನವಾಗಿದೆ. ಬಸವಣ್ಣನವರು ಇಷ್ಟಲಿಂಗದ ಜನಕರಾಗಿದ್ದಾರೆ ಎಂದು ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ಹೇಳಿದ್ದಾರೆ. ಇಷ್ಟಲಿಂಗ ಪೂಜೆಯಿಂದ ಆಯುಷ್ಯ, ಆರೋಗ್ಯ, ಏಕಗ್ರಾತೆ ವೃದ್ಧಿಸುತ್ತದೆ. ಲಿಂಗಾಯತ ಸಿದ್ಧಾಂತ ಅರಿಯುವುದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ. ಲಿಂಗಧಾರಣೆ ಮಾಡಿದ ಮೇಲೆ ದುರ್ಗುಣ ತ್ಯಜಿಸಿ ಸದ್ಗುಣ ಅಳವಡಿಸಿಕೊಳ್ಳಬೇಕು. ಇಷ್ಟಲಿಂಗ ನಿಷ್ಠೆ ಹೊಂದಲು ವಚನ ಸಾಹಿತ್ಯ ಮತ್ತು ಶರಣರ ಬದುಕು ಅರಿಯುವುದು ಅವಶ್ಯಕವಾಗಿದೆ ಎಂದರು.
ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ಹಡಪದ ಅಪ್ಪಣ್ಣ ಸಮಾಜದ ಮುಖಂಡ ದತ್ತಾತ್ರೆ ಮೂಗೆ ಉಪಸ್ಥಿತರಿದ್ದರು. ಅಕ್ಕನ ಬಳಗದ ಸುಲೋಚನಾ ಮಾಮಾ ವಚನ ಪಠಣ ಮಾಡಿಸಿದರು, ಹರಳಯ್ಯ ಸಮಾಜದ ಮೀನಾ ಜಾಧವ ಧ್ವಜಾರೋಹಣಗೈದರು. ಸಂಗೀತ ಶಿಕ್ಷಕರಾದ ಅನಿಲ ಕಾಂಬಳೆ ಹಾಗೂ ಅವಿನಾಶ ಬೋಸಗಾ ವಚನ ಸಂಗೀತ ನಡೆಸಿಕೊಟ್ಟರು. ಜಗದೇವಿ ಸುಭಾಷ ಹೊಳಕುಂದೆ ಭಕ್ತಿ ದಾಸೋಹಗೈದರೆ ಅಕ್ಕನ ಬಳಗದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಂಗಮೇಶ ತೊಗರಖೆಡೆ ನಿರೂಪಿಸಿದರು.
ಇದಕ್ಕೂ ಮೊದಲು ಶರಣ ಬಂಧುಗಳಿಂದ ಸಾಮೂಹಿಕ ಇಷ್ಟಲಿಂಗ ಪೂಜಾಯೋಗ ನಡೆಯಿತು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಇಷ್ಟಲಿಂಗ ಪೂಜಾಯೋಗದ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.