ನರಗುಂದ:
ಬಸವಾದಿ ಶರಣರ ವಚನಗಳಲ್ಲಿ ಮಾನವೀಯ ಮೌಲ್ಯಗಳು, ಶಾಂತಿ, ಸೌಹಾರ್ದತೆ, ಸಮಾನತೆ ಸಾರುವ ಸಂದೇಶಗಳಿವೆ ಎಂದು ಭೈರನಹಟ್ಟಿ- ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ, ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಹಾಗೂ ಗ್ರಾಮ ಘಟಕ, ಗುರುಬಸವ ಜನಕಲ್ಯಾಣ ಸಂಸ್ಥೆ ಸಂಘಟನೆಗಳ ಆಶ್ರಯದಲ್ಲಿ ವಚನ ಓದು, ಅರ್ಥ ವಿವರಣೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಮನ, ಮನೆಗಳು, ಮಕ್ಕಳಲ್ಲಿ ಬಸವಾದಿ ಶರಣರ ವಚನಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಕೃಷಿ, ಆರೋಗ್ಯ, ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಂಡು ಮಾದರಿಯಾಗಿದ್ದಾರೆ.
ವಚನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಜಾತ್ರೆಗೆ ಮತ್ತಷ್ಟು ಮೆರುಗು ಬಂದಿದೆ ಎಂದರು.

ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸಂಕೇತ ಅಂಬಲಿ ಮಾತನಾಡಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದವರು ವಚನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಸವಾದಿ ಶರಣರ ಬಗ್ಗೆ ಸಮಾಜ ಸರಿಯಾಗಿ ಅರಿತುಕೊಳ್ಳಬೇಕು ಎಂದರು.
ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮಾಜಿ ಅಧ್ಯಕ್ಷ ಶಿವಾನಂದ ಶೇಬಣ್ಣವರ, ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ ಅವರು ಸಹ ವಚನಗಳು, ಶರಣರ ಕುರಿತು ಮಾತನಾಡಿದರು.
ವಚನ ಓದು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಮೃದ್ಧಿ ಕತ್ತಿಕೈ, ದ್ವಿತೀಯ ಸ್ಥಾನ ಆದ್ಯಾ ಶೆಲ್ಲಿಕೇರಿ, ತೃತೀಯ ಸ್ಥಾನ ಅನಿತಾ ಕೊಡಬಳ್ಳಿ, ಚತುರ್ಥ ಸ್ಥಾನ ಸುನೀತಾ ಹೂಗಾರ, ಪಂಚಮ ಸ್ಥಾನವನ್ನು ಶ್ರೇಯಾ ಪಡೆದು ಬಹುಮಾನ ಗಿಟ್ಟಿಸಿಕೊಂಡರು. ಒಟ್ಟು 130 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರ ಸೊಬರದ, ಎಲ್ಐಸಿ ಪ್ರತಿನಿಧಿ ಶಿವಪ್ಪ ಉಣಚಗಿ, ಎಸ್.ವಿ. ಕುಪಸ್ತ, ದ್ಯಾಮಣ್ಣ ಕಾಡಪ್ಪನವರ, ರಂಜಾನಸಾಬ್ ನದಾಫ, ಈರಯ್ಯ ಮಠದ, ಮಹಾಂತೇಶ ಮರಿಗುದ್ದಿ, ಶಂಕರಗೌಡ ಗಿರಿಯಪ್ಪಗೌಡ್ರ, ವೀರನಗೌಡ್ರ, ಶರಣಪ್ಪ ಪೂಜಾರ, ರಮೇಶ ಐನಾಪೂರ, ಸುರೇಶ ಬನ್ನಿಗಿಡದ, ಪ್ರವೀಣ ಶೆಲ್ಲಿಕೇರಿ, ಶರಣಪ್ಪ ಮೆಣಸ, ಕುಮಾರ ಮರಿಗುದ್ದಿ, ಉಮೇಶ ಮರಿಗುದ್ದಿ, ಶಿದ್ದಲಿಂಗೇಶ ಶೆಟ್ಟರ, ಪ್ರವೀಣ ಸಂಗಳದಶೆಟ್ಟರ, ನಂದನ ಸೊಬರದ, ದ್ಯಾಮಣ್ಣ ತೆಗ್ಗಿ, ಸತ್ಯಾನಂದ ಚಿಕ್ಕನರಗುಂದ ಇದ್ದರು. ಪ್ರಶಾಂತ ಶೆಲ್ಲಿಕೇರಿ ಸ್ವಾಗತಿಸಿದರು. ಶಿದ್ದು ಅಂಗಡಿ ಕರ್ಯಕ್ರಮ ನಿರ್ವಹಿಸಿದರು.
