ಅಲ್ಲಮಪ್ರಭು ಮೈದಾನದಲ್ಲಿ ಅಲ್ಲಮಪ್ರಭು ಜಯಂತಿ
ಶಿವಮೊಗ್ಗ:
ನಗರದ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಯುಗಾದಿ ಹಾಗೂ ಅಲ್ಲಮಪ್ರಭು ದೇವರ ಜಯಂತಿ ಆಚರಣೆ ನಡೆಯಿತು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, ಪ್ರಜಾಪ್ರಭುತ್ವದ ಪ್ರಥಮ ಮಾದರಿ ಎನಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಕನ್ನಡದ ಅನುಭಾವ ಪರಂಪರೆಗೆ ಹೊಸ ಮೌಲ್ಯಗಳನ್ನು ಕೊಟ್ಟವರು.

ದೇಶ ಸಂಚಾರ ಮಾಡಿ ಸಾಮಾನ್ಯನಿಂದ ಸಾಧಕನವರೆಗೂ ಎಲ್ಲರ ಸಾಧನೆಯ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ಕಳಿಸಿದ ಮಹಾನುಭಾವಿ ಅಲ್ಲಮಪ್ರಭುವಿನ ವಚನಗಳ ಮೌಲ್ಯಗಳು ನಮಗೆಲ್ಲ ಪ್ರೇರಣೆಯಾಗಿವೆ ಎಂದು ಚಿಕ್ಕಮಗಳೂರು ಬಸವತತ್ವ ಪೀಠ ಹಾಗು ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ತಿಳಿಸಿದರು.

ಆನಂದಪುರಂ ಮುರುಘಾಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ‘ಅಲ್ಲಮಪ್ರಭುದೇವರ ಬಯಲ ತತ್ವವು ಕನ್ನಡದ ಆಧ್ಯಾತ್ಮ ಪರಂಪರೆಯ ಅಪರೂಪದ ಪರಿಕಲ್ಪನೆಯಾಗಿದೆ.

ಬಯಲಾಗುವುದು ಪ್ರತಿಯೊಬ್ಬ ಮಾನವನಿಗೂ ಸಾಧ್ಯ. ತಾನು ಬದುಕಿನ ಯಾವುದೇ ಸ್ಥಿತಿಯಲ್ಲಿದ್ದರೂ ಬಯಲೆಡೆಗೆ ಸಾಗುವ ಸುಲಭ ಮಾರ್ಗ ತೋರಿದ್ದು ಅಲ್ಲಮಪ್ರಭುದೇವರು. ಮುಕ್ತಾಯಕ್ಕನಿಂದ ಗೋರಕ್ಷನವರೆಗೂ ಅಲ್ಲಮನನ್ನು ಮುಖಾಮುಖಿಯಾದ ಎಲ್ಲರೂ ಬಯಲ ಸಿದ್ಧಿಗೆ ಏರಿದ್ದಾರೆ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಎಲ್ಲಾ ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.
