ಬಸವಕಲ್ಯಾಣ:
ಬಸವಾದಿ ಶರಣರ ನಾಡಾದ ಬಸವಕಲ್ಯಾಣದಲ್ಲಿ ಪ್ರತಿವರ್ಷ ಸರ್ಕಾರದಿಂದ ಬಸವ ಉತ್ಸವ ಆಚರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಬಸವತತ್ವ ಪ್ರಚಾರ ಕೇಂದ್ರದಿಂದ ತಹಶೀಲ್ದಾರ ದತ್ತಾತ್ರಿ ಗಾದಾ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸಲು ಸೂಚಿಸಿದೆ. ಆದ್ದರಿಂದ ಅವರ ತತ್ವಗಳ ಪ್ರಸಾರ-ಪ್ರಚಾರ ಇನ್ನಷ್ಟು ಅಗತ್ಯವಾಗಿದ್ದು, ರಾಜ್ಯಮಟ್ಟದಲ್ಲಿ ಬಸವ ಉತ್ಸವವನ್ನು ನಿಯಮಿತವಾಗಿ ಆಚರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿಂದಿನ ಕೆಲ ವರ್ಷಗಳಲ್ಲಿ ಇಂತಹ ಉತ್ಸವವನ್ನು ಇಲ್ಲಿ ಆಯೋಜಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಇತ್ತೀಚೆಗೆ ಅದು ನಿಂತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ವ್ಯತ್ಯಯವಾಗಬಾರದು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಮಾನವಿ ಸಲ್ಲಿಸುವ ಸಂದರ್ಭದಲ್ಲಿ ತಾಲ್ಲೂಕು ಬಸವತತ್ವ ಪ್ರಚಾರ ಕೇಂದ್ರದ ಅಧ್ಯಕ್ಷ ಜೈಪ್ರಕಾಶ ಸದಾನಂದ, ಕಾರ್ಯದರ್ಶಿ ಸಂಗಮೇಶ ತೊಗರಖೇಡೆ, ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೋಳಕೂರ, ಹುಲಸೂರ ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ನಿವೃತ್ತ ಪ್ರಾಚಾರ್ಯ ಎಸ್.ಜಿ. ಕರ್ಣೆ, ಚಂದ್ರಪ್ಪ ಗುಂಗೆ, ಲಕ್ಷ್ಮಿಬಾಯಿ ಪಾಟೀಲ, ಶಿವಕುಮಾರ ಬಿರಾದಾರ, ಮಹಾದೇವಪ್ಪ ಇಜಾರೆ, ನೀಲಕಂಠಯ್ಯ ಸ್ವಾಮಿ, ಚಂದ್ರಕಾಂತ ಮೋಳಕೆರೆ, ಕವಿತಾ ಮೂಲಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
