ಭಾಲ್ಕಿ:
ವಚನಗಳು ಸುಂದರ ಬದುಕಿನ ಮಾರ್ಗದರ್ಶಿಯಾಗಿವೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಜನವಾಡ ರಸ್ತೆಯ ಇನ್ಸ್ ಪೈರ್ ರೆಸಾರ್ಟ್ ನಲ್ಲಿ ಮೀನಾಕ್ಷಿ ಬಸವರಾಜ ಮೊಳಕೀರೆ ಅವರ 25ನೆಯ ಮದುವೆ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ನಡೆದ ವಚನ ಅರಿವು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

೧೨ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ಈ ವಚನ ಸಾಹಿತ್ಯವು ಕೇವಲ ಸಾಹಿತ್ಯಿಕ ಕೃತಿಯಾಗಿರದೆ, ಮನುಷ್ಯನ ದೈನಂದಿನ ಬದುಕಿಗೆ, ನೈತಿಕ ಮೌಲ್ಯಗಳಿಗೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಅತ್ಯಮೂಲ್ಯವಾದ ಮಾರ್ಗದರ್ಶಿಯಾಗಿದೆ.
ವಚನ ಅರಿವು ಮೌಲಿಕ ಗ್ರಂಥವಾಗಿದ್ದು ಪ್ರತಿಯೊಬ್ಬರು ಪ್ರತಿನಿತ್ಯ ವಚನ ಪಠಣ ಮಾಡಿ ಜೀವನ ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ. ಬಸವಲಿಂಗ ಪಟ್ಟದ್ದೇವರು ಹಲವು ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇದೀಗ ಹೊಸದಾಗಿ ರಚಿಸಿದ ವಚನ ಅರಿವು ಗ್ರಂಥ ಅತ್ಯಂತ ಉಪಯುಕ್ತವಾಗಿ ಪ್ರತಿಯೊಬ್ಬರು ಈ ಗ್ರಂಥ ಅಧ್ಯಯನ ಮಾಡಿ ಮೌಲಿಕ ವಿಚಾರಗಳನ್ನು ತಮ್ಮ ನಿಜ ಜೀವನದ ಆಚರಣೆಯಲ್ಲಿ ತರಬೇಕು ಎಂದರು.
ಶಿವಗಂಗಾ ಬಸವರಾಜ ಮೊಳಕೀರೆ, ಚಂದ್ರಕಲಾ ಅಶೋಕ ಬಿರಾಜದಾರ ದಂಪತಿಗಳು ಬಸವ ಗುರುವಿನ ಪೂಜೆ ನೆರವೇರಿಸಿದರು.

ಅಭಿಷೇಕ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಹಾಸ್ಯಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ಆಶಿಶ್ ಬಸವರಾಜ ಮೊಳಕೀರೆ ವಂದಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವಪ್ರಿಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಶಿವಲಿಂಗ ಕುಂಬಾರ ಸೇರಿದಂತೆ ಹಲವರು ಇದ್ದರು.
