ಹೊಸದುರ್ಗ:
ಪಟ್ಟಣದ ಸನ್ಶೈನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಚನ ಸಂಗೀತೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವಚನಗಳ ಪರಿಚಯ ಮಾಡಿಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯನಿ ಸೌಮ್ಯ ಅವರು ಮಾತನಾಡಿ, ವಚನ ಸಾಹಿತ್ಯವನ್ನು ಸಂಗೀತದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನ ಅತ್ಯಂತ ಅರ್ಥಪೂರ್ಣವಾಗಿದೆ. ಮಕ್ಕಳಿಗೆ ನೈತಿಕ ಮೌಲ್ಯಗಳು, ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ವಚನಗಳ ಪಾತ್ರ ಅಪಾರವಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಸನ್ಶೈನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ. ಶಿವಲಿಂಗಪ್ಪ ಮಾತನಾಡಿ ಶಾಲಾ, ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವುದು ಅಗತ್ಯವಾಗಿದ್ದು, ಈಗಿನ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
“ವಚನಗಳ ಸಂದೇಶ ಸಂಗೀತದ ಮೂಲಕ ಮನೆ ಮನೆಗೂ, ಯುವ ಜನತೆಯ ಹೃದಯಕ್ಕೂ ತಲುಪುವಂತಾಗಬೇಕು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸತ್ಯಕ್ಕ ಸೇರಿದಂತೆ ಶರಣರು ರಚಿಸಿರುವ ವಚನಗಳು ಕೇವಲ ಸಾಹಿತ್ಯ ಕೃತಿಗಳಲ್ಲ, ಅವು ಮಾನವೀಯತೆ, ಸಮಾನತೆ, ಕಾಯಕ, ದಾಸೋಹ ಹಾಗೂ ನೈತಿಕ ಮೌಲ್ಯಗಳನ್ನು ಸಾರುವ ಅಮೂಲ್ಯ ಜೀವನ ಸಂದೇಶಗಳಾಗಿದೆ.

ಇಂದಿನ ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿರುವ ಸ್ವಾರ್ಥ, ಅಸಹಿಷ್ಣುತೆ, ದ್ವೇಷ ಹಾಗೂ ಸಾಮಾಜಿಕ ಅಸಮಾನತೆ ನಿವಾರಣೆಗೆ ವಚನಗಳ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಮನಸ್ಸನ್ನು ಪರಿವರ್ತಿಸುವ ಅಪೂರ್ವಶಕ್ತಿ ಸಂಗೀತಕ್ಕಿದೆ. ವಚನಗಳನ್ನು ಸಂಗೀತದ ಮೂಲಕ ಮಕ್ಕಳಿಗೆ ಮತ್ತು ಯುವಜನತೆಗೆ ತಲುಪಿಸಿದರೆ ಅವರು ಭಾರತೀಯ ಸಂಸ್ಕೃತಿ, ಕನ್ನಡ ಸಾಹಿತ್ಯ ಹಾಗೂ ಶರಣರ ಆದರ್ಶಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಬಲಾ ಕಲಾವಿದ ಚಂದ್ರಪ್ಪ, ಓ ಮೂರ್ತಿ, ಸರಸ್ವತಿ ಪರಮೇಶ್ವರಪ್ಪ, ಶಶಿಕುಮಾರ, ವೆಂಕಟೇಶ, ಚಿತ್ರದುರ್ಗದ ಮಧು ಇನ್ನಿತರರಿದ್ದರು.
