ನವದಂಪತಿಗಳಿಗೆ ಇಷ್ಟಲಿಂಗಧಾರಣೆ; ಮಾದಾರ ಚೆನ್ನಯ್ಯ, ಬಸವಣ್ಣನವರ ಸ್ಮರಣೆ
ಹೊಸಪೇಟೆ:
ಹೊಸಪೇಟೆಯ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಸುಭಾಷ್ ಡಿ.ಹೆಚ್. ಮತ್ತು ಭಾವನ ಅವರುಗಳ ವಚನ ಕಲ್ಯಾಣ ಮಹೋತ್ಸವ ಆಗಸ್ಟ್ 23 ನಡೆಯಿತು.
ಇವರು ಕಲ್ಲಹಳ್ಳಿ ಗ್ರಾಮದ ದಲಿತವರ್ಗದ ಹುಲಿಗೆಮ್ಮ, ಧರ್ಮಪ್ಪ ಹೆಗಡೆ, ಮತ್ತು ಹೊಳಗುಂದಿ ಗ್ರಾಮದ ಹನುಮಕ್ಕ, ಮೈಲಪ್ಪ ಕಟ್ಟೋಜಿ ಅವರ ಮಕ್ಕಳು.
ಬಸವತತ್ವದ ಕಲ್ಯಾಣ ಮಹೋತ್ಸವವನ್ನು ಇಷ್ಟಲಿಂಗ ಅಧ್ಯಯನ ಕೇಂದ್ರ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರುಗಳು ವಚನ ಕ್ರಿಯಾಮೂರ್ತಿಗಳಾಗಿ ನಡೆಸಿಕೊಟ್ಟರು.

ಬಸವ ಗುರುಪೂಜೆಯೊಂದಿಗೆ ಕಲ್ಯಾಣ ಮಹೋತ್ಸವವನ್ನು ಆರಂಭಿಸಿ, ನಂತರ ನವದಂಪತಿಗಳಿಗೆ ಇಷ್ಟಲಿಂಗಧಾರಣೆ ಮಾಡಿಸುವುದರ ಮೂಲಕ ಕಲ್ಯಾಣ ನೆರವೇರಿಸಲಾಯಿತು.
ಜೊತೆಗೆ ಲಿಂಗಾಯತ ನಿಜಾಚರಣೆಗಳ ಬಗ್ಗೆ ವಚನಮೂರ್ತಿ ಡಾ. ಟಿ. ಹೆಚ್. ಬಸವರಾಜ ಅವರು ಆಗಮಿಸಿದ ಸಾವಿರಾರು ಜನರಿಗೆ ಅನುಭಾವ ನೀಡಿದರು.

ಅವರು ಅನುಭಾವ ನೀಡುತ್ತ, ಮಾದಾರ ಚೆನ್ನಯ್ಯರ ವ್ಯಕ್ತಿತ್ವಕ್ಕೆ ಮಾರುಹೋಗಿ ಬಸವಣ್ಣನವರು ಅವರನ್ನು ಅಪ್ಪ ಎಂದು ಕರೆದರು. ಅಂತಹ ಶರಣ ಮಾರ್ಗದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ ಪರಂಪರೆಯ ನಿಜವಾದ ವಾರಸುದಾರ ಲಿಂಗಾಯತರು ನೀವಾಗಿದ್ದೀರಿ. ಲಿಂಗಾಯತ ಪರಂಪರೆ, ಶರಣ ಸಂಸ್ಕೃತಿ ನಿಮ್ಮೆಲ್ಲರ ಆಚರಣೆ ಆಗಬೇಕು.
ಇವತ್ತಿನ ಪರಿಸ್ಥಿತಿಯಲ್ಲಿ ಬಸವತತ್ವದ ಕಡೆ ತಾವೆಲ್ಲ ಮುಖ ಮಾಡಿರುವುದು, ತಮ್ಮ ಮೂಲವನ್ನು ಅರಿಸಿಕೊಂಡು ಮರಳಿ ಮನೆಗೆ ಅನ್ನುವ ಪ್ರಕ್ರಿಯೆಯಾಗಿದೆ. ಸ್ವಯಂಪ್ರೇರಣೆಯಿಂದ ತಾವೆಲ್ಲ ಇದಕ್ಕೆ ಒಳಗಾಗಿರುವುದು ಒಳ್ಳೆಯದು. ತಾವೆಲ್ಲ ಶರಣ ಸಂಸ್ಕೃತಿ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ, ಸಂತಸದಾಯಕ ವಿಷಯ ಎಂದರು.

ಕಲ್ಯಾಣ ಮಹೋತ್ಸವದಲ್ಲಿ ಹೆಗಡೆ ಮತ್ತು ಕಟ್ಟೋಜಿ ಕುಟುಂಬಸ್ಥರು, ಬಂಧು-ಮಿತ್ರರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಾವಿನಹಳ್ಳಿ ಬಸವರಾಜ ಹಾಗೂ ಪ್ರಮುಖರು, ಇಷ್ಟಲಿಂಗ ಅಧ್ಯಯನ ಕೇಂದ್ರ, ಬಸವ ಬಳಗದ ಸದಸ್ಯರು, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ವಚನ ಮಾಂಗಲ್ಯ ನೆರವೇರಿಸಿದ ಎಲ್ಲಾ ಬಸವ ನಿಷ್ಠರಿಗೆ ಶರಣುಗಳು