ಧಾರವಾಡ
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಡಾ.ಎಂ. ಎಂ.ಕಲಬುರ್ಗಿ ನೀಡಿರುವ ಚಿಂತನೆಗಳು ಹಾಗೂ ಸಂಶೋಧನಾ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಡಾ.ಎಂ.ಎಂ.ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.
ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ 11ನೇ ಹುತಾತ್ಮ ದಿನಾಚರಣೆ ವಿಶೇಷ ಉಪನ್ಯಾಸ, ಗ್ರಂಥ ಬಿಡುಗಡೆ ಹಾಗೂ ಆನ್ಲೈನ್ ಸರಣಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಆಲೂರ ಕಲಬುರ್ಗಿ ಅವರು ಬಸವಣ್ಣ ಮತ್ತು ಕನ್ನಡವನ್ನು ತಮ್ಮ ಬದುಕಿನ ಪ್ರಮುಖ ಆಶಯಗಳನ್ನಾಗಿ ತಮ್ಮ ಬದುಕಿನ ಪ್ರಮುಖ ಆಶಯಗಳನ್ನಾಗಿ ಮಾಡಿಕೊಂಡಿದ್ದರು. ಕನ್ನಡದ ಸಂಶೋಧನೆ ಮತ್ತು ವಚನ ಸಾಹಿತ್ಯದ ಅಧ್ಯಯನಕ್ಕೆ ಅವರು ನೀಡಿದ ಕೊಡುಗೆ ಅಪಾರ.
ಹಸ್ತಪ್ರತಿಗಳು, ಶಾಸನಗಳು ಹಾಗೂ ಕನ್ನಡದ ಜೀವಂತ ಪರಂಪರೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಮಹತ್ವ ನೀಡಿದರು.

ಸಂಶೋಧನೆಯಲ್ಲಿ ಆಕರಗಳ ಪ್ರಾಮಾಣಿಕತೆಗೆ ಕಲಬುರ್ಗಿ ಆದ್ಯತೆ ನೀಡುತ್ತಿದ್ದರು. ಯಾವುದೇ ವಿಚಾರ ಹೇಳುವ ಮೊದಲು ಅದರ ಆಧಾರವೇನು ಎಂಬುದನ್ನು ಪರಿಶೀಲಿಸಬೇಕು ಎಂಬುದು ಅವರ ನಿಲುವಾಗಿತ್ತು.
ಅವರ ಕೃತಿಗಳು ಹಾಗೂ ಸಂಶೋಧನಾ ಚಿಂತನೆಗಳು ಇಂದಿಗೂ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿವೆ
ಎಂದರು.

ಹಿರಿಯ ವಿದ್ವಾಂಸ ಡಾ ಶಾಂತಿನಾಥ ದಿಬ್ಬದ ಹಳೆಯ ವಿಚಾರಗಳನ್ನು ಪ್ರಶ್ನಿಸಿ, ಆಧಾರಗಳ ಮೂಲಕ ಹೊಸ ಸತ್ಯವನ್ನು ಹುಡುಕುವ ಪ್ರಯತ್ನ ಸಂಶೋಧನೆ ಎಂದು ಹೇಳಿದರು.
ಅಭಿಪ್ರಾಯ ಭಿನ್ನತೆ ಇದ್ದಾಗ ಸಂಶೋಧಕನನ್ನು ದಂಡಿಸುವ ಬದಲು ಆಧಾರಸಹಿತವಾಗಿ ವಿಚಾರ ಖಂಡಿಸ ಬೇಕು. ಆಧಾರಗಳಿಲ್ಲದೆ ಇತಿಹಾಸವಿಲ್ಲ, ಆಧಾರಗಳಿಲ್ಲದೆ ಸಂಶೋಧನೆಯಿಲ್ಲ ಎಂಬ ದೃಷ್ಟಿಕೋನದಿಂದ ಮೂಲ ಆಧಾರಗಳನ್ನು ಶೋಧಿಸಿ ಸಂರಕ್ಷಿಸಬೇಕು. ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ದೃಷ್ಟಿ ಕನ್ನಡಪರ ಚಿಂತನೆ, ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ದಾರಿದೀಪ ಎಂದರು.

ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸದಸ್ಯರಾದ ಹನುಮಾಕ್ಷಿ ಗೋಗಿ ಮಾತನಾಡಿದರು. ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನ ಸದಸ್ಯ ಪ್ರೊ. ಚಂದ್ರಶೇಖರ ವಸ್ತ್ರದ ವಂದಿಸಿದರು. ಉಮಾದೇವಿ ಎಂ. ಕಲಬುರ್ಗಿ ಇದ್ದರು.
