ನಾಗನೂರು
ನಮ್ಮ ಧರ್ಮವನ್ನು ಉಳಿಸಿಕೊಳ್ಳುವುದರ ಜೊತೆಗೆ ಅನ್ಯ ಧರ್ಮೀಯರಿಂದ ದಾಳಿಗೆ ಒಳಗಾಗದಂತೆ ರಕ್ಷಿಸಿಕೊಳ್ಳಲು ಈ ಅಭಿಯಾನ ಅಗತ್ಯವಿದೆ. ಉದಾಹರಣೆಗೆ “ವಚನ ದರ್ಶನ” ಪುಸ್ತಕ ಹಾಗೂ “ಶರಣರ ಶಕ್ತಿ” ಚಿತ್ರಗಳು ಇವು ನಮ್ಮದೇ ಧರ್ಮದ ಹೆಸರಿನಲ್ಲಿ ನಮ್ಮ ಧರ್ಮವನ್ನೇ ಅವನತಿಗೊಳಿಸಲು ಸಮಾಜಕ್ಕೆ ಬಂದ ಕೃತ್ಯಗಳಾಗಿವೆ. ಹಾಗೂ ನಮ್ಮ ಧರ್ಮದ ನಿಜವಾದ ಪರಿಚಯ, ಶರಣರ ಬಲಿದಾನಗಳ ಅರಿವಾಗಲು ಈ ಅಭಿಯಾನ ಅಗತ್ಯವಿದೆ.
ಸ್ವರೂಪ
ಈ ಅಭಿಯಾನದ ಸ್ವರೂಪ ಒಂದು ರೀತಿಯಲ್ಲಿ ಚಳುವಳಿಯಂತಾಗಬೇಕು. 1857ರಲ್ಲಿ “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಆರಂಭವಾದರೆ ನಮಗೆ ಅದರ ಪ್ರತಿಫಲ ದೊರೆತದ್ದು 1947ರಲ್ಲಿ. ಸತತ 90 ವರ್ಷಗಳ ಹೋರಾಟದ ಫಲವೇ ಅಂದು ನಮ್ಮ ತ್ರಿವರ್ಣ ಧ್ವಜ ಬಾನೆತ್ತರಕ್ಕೆ ಹಾರಿತು. ಅಂತೆಯೇ ನಮ್ಮ ಇಂದಿನ ಅಭಿಯಾನದ ಸತ್ಫಲ ನಮಗೆ ದೊರೆಯಬೇಕಾದರೆ ನಾವು ವೈಯಕ್ತಿಕ ಪ್ರತಿಷ್ಠೆಗಳನ್ನು, ಭಾವನೆಗಳನ್ನು ಬದಿಗಿಟ್ಟು ಕೇವಲ ಬಸವಾನುಯಾಯಿಗಳಾಗಿ ಹೋರಾಡಬೇಕಿದೆ.
ಪೂರ್ವಸಿದ್ಧತೆ
ಇನ್ನು ಈ ಅಭಿಯಾನದ ಪೂರ್ವಸಿದ್ಧತೆಯು ಬಿತ್ತಿಚಿತ್ರಗಳನ್ನು ಹಂಚುವುದು, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಾಧ್ಯವಾದಷ್ಟು ತಳಮಟ್ಟದಿಂದ ಅಂದರೆ ಹಳ್ಳಿಗಳಿಂದ ಆರಂಭವಾಗಬೇಕು.
ಅಭಿಯಾನದಲ್ಲಿ ಮಹಿಳೆಯರನ್ನು ಮುನ್ನೆಲೆಗೆ ತರುವುದು ಹೇಗೆ?
- ವೈಜ್ಞಾನಿಕ ಹಿನ್ನಲೆಯುಳ್ಳ ಬಸವಧರ್ಮದ ಬಗ್ಗೆ ವಿಶೇಷವಾಗಿ ಮತ್ತು ವಿವರವಾಗಿ ನಿಜವಾದ ತಿಳುವಳಿಕೆಯನ್ನು ಮಹಿಳೆಯರಿಗೆ ನೀಡಬೇಕು. ಅವರಿಗೆ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಮ್ಮ ತತ್ವದ ತಿರುಳನ್ನು ತಿಳಿ ಹೇಳಿ ಅವರು ಧರ್ಮ ಸಂಸ್ಕಾರವನ್ನು ಸ್ವೀಕರಿಸಲು ಮನವೊಲಿಸಬೇಕು.
- ಮಹಿಳೆಯರು ಜಾಸ್ತಿ ಹೊತ್ತು ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಅವರು ತಮ್ಮ ಮಕ್ಕಳನ್ನು ಸದಾ ಉತ್ತಮ ಸಂಸ್ಕಾರವಂತರಾಗಿರಬೇಕೆಂದು ಬಯಸುತ್ತಾರೆ. ಅಂತಹವರಿಗೆ ಬಸವಧರ್ಮದ ಬಗ್ಗೆ ತಿಳಿಸಲು, ಇಲ್ಲಿರುವ ಸರಳವಾದ ವಚನಗಳ ವಿವರಣೆ ಕೊಟ್ಟು ಉದಾಹರಣೆಗೆ ಕಳಬೇಡ, ಕೊಲಬೇಡ ಹಾಗೂ ಮನೆ ಕಿಚ್ಚು ಮನೆಯ ಸುಟ್ಟಲ್ಲದೆ ಇಂತಹ ವಚನಗಳ ಮೂಲಕ ಅವರ ಮಕ್ಕಳ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿ ಅವರನ್ನು ವಚನ ಸಾಹಿತ್ಯದೆಡೆಗೆ ತರಬೇಕು. ಅವರ ಮನಸ್ಸಿನ ಹಾಗೂ ಜೀವನದ ಮೇಲೆ ಪರಿಣಾಮ ಬೀರಿದ ವಚನಗಳು ಅವರನ್ನು ಅಭಿಯಾನಕ್ಕೆ ಕರೆತರುತ್ತವೆ.
- ಸ್ವ-ಸಹಾಯ ಸಂಘಗಳ ಸಭೆಗಳಲ್ಲಿ ಬೇರೆಲ್ಲ ಚಟುವಟಿಕೆಗಳು ಸಾಮಾನ್ಯವಾಗಿ ನಡೆಯುತ್ತವೆ. ಅಂತಲ್ಲಿ ಹೋಗಿ ವಚನ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕು.
- ಮಹಿಳೆಯರಿಗೆ ವಿಶೇಷವಾದ ಸ್ಪರ್ಧೆಗಳನ್ನು ಏರ್ಪಡಿಸುವುದು.
೧. ವಚನ ಕಂಠಪಾಠ ಸ್ಪರ್ಧೆ.
೨. ವಚನಗಳ ಅರ್ಥ ಬಿಡಿಸುವುದು.
೩. ವಚನಗಳ ಮೇಲೆ ಪ್ರಬಂಧ ಬರೆಯುವುದು.
೪. ವಚನಗಳನ್ನು ಕುರಿತ ಭಾಷಣ.
೫. ವಚನ ಗಾಯನ ಸ್ಪರ್ಧೆ.
ಹೀಗೆ ಹಲವಾರು ಸ್ಪರ್ಧೆಗಳ ಮೂಲಕ ಅವರಲ್ಲಿ ವಚನ ಪ್ರಜ್ಞೆಯನ್ನು ಉಂಟುಮಾಡಬಹುದು ಜೊತೆಗೆ ಬಹುಮಾನವಾಗಿ ವಚನ ಸಾಹಿತ್ಯವನ್ನೇ ಕೊಡುವ ವ್ಯವಸ್ಥೆಯಾಗಬೇಕು. ಇದರಿಂದ ವಿದ್ಯಾವಂತ ಅವಕಾಶ ವಂಚಿತ ಮಹಿಳೆಯರು ವಚನಸಾಹಿತ್ಯದ ಬಗ್ಗೆ ಕುತೂಹಲಗೊಂಡು ಕ್ರಮೇಣ ಅಭಿಯಾನಕ್ಕೆ ಜೊತೆಯಾಗುತ್ತಾರೆ.
- ಪ್ರತೀ ಮಹಿಳೆಯು ಒಂದಲ್ಲಾ ಒಂದು ರೀತಿಯ ಒತ್ತಡಗಳಿಗೆ ಗುರಿಯಾಗಿರುತ್ತಾಳೆ. ಅದು ಮಾನಸಿಕ ಅಥವಾ ದೈಹಿಕವೂ ಆಗಿರಬಹುದು. ಅಂತಹ ಮಹಿಳೆಯರಿಗೆ ಶರಣೆಯರೇ ಬರೆದ ಉದಾಹರಣೆಗೆ; ಹೆದರದಿರು ಮನವೇ ಬೆದರದಿರು ತನುವೇ ಹಾಗೂ ಈ ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಎಂಬ ವಚನಗಳ ಮೂಲಕ ಆತ್ಮಸ್ಥೈರ್ಯವನ್ನು ತುಂಬಿದಾಗ ಅವರು ಆಕರ್ಷಿತರಾಗಿ ಬಸವ ಧರ್ಮದ ಅರಿವನ್ನು ಹೊಂದಲು ಉತ್ಸುಕರಾಗಿ ಅಭಿಯಾನಕ್ಕೆ ಕೈ ಜೋಡಿಸುತ್ತಾರೆ.
- ಶರಣೆಯರ ಜೀವನ ಗಾಥೆಗಳನ್ನು ಕೇವಲ ಹತ್ತರಿಂದ ಹದಿನೈದು ನಿಮಿಷಗಳ ಸನ್ನಿವೇಶಗಳ ರೂಪಕಗಳನ್ನು ಸಿದ್ಧಪಡಿಸಿ ಬೀದಿ ನಾಟಕಗಳಂತೆ ಪ್ರದರ್ಶಿಸಬೇಕು. ಇಲ್ಲಿ ಶರಣರಿಗಿಂತ ಶರಣೆಯರಿಗೇ ಪ್ರಾಮುಖ್ಯತೆಯನ್ನು ಕೊಟ್ಟಾಗ ಮಹಿಳೆಯರ ಮನಸ್ಸನ್ನು ಬೇಗ ಮುಟ್ಟಬಹುದು. ಉದಾಹರಣೆಗೆ; ಆಯ್ದಕ್ಕಿ ಲಕ್ಕಮ್ಮನ ಈಸಕ್ಕಿಯಾಸೆಯ ಪ್ರಸಂಗ, ಅಥವಾ ಅಕ್ಕಮಹಾದೇವಿ ತಾಯಿಯ ಉಡುತಡಿ ಪ್ರವೇಶ ಪ್ರಸಂಗ ಹೀಗೆ ಕೇವಲ ಪ್ರಸಂಗಗಳನ್ನು ಮುಖ್ಯವಾಗಿರಿಸಿಕೊಂಡರೆ ಪ್ರೇಕ್ಷಕರಿಗೂ ಬೇಸರವಾಗದು ಹಾಗೇ ನಮ್ಮ ತತ್ವದ ತಿರುಳನ್ನೂ ಸಹ ಅತೀ ಕಡಿಮೆ ಸಮಯದಲ್ಲಿ ತಿಳಿಸಿ ಮಹಿಳೆಯರನ್ನು ಬಡಿದೆಬ್ಬಿಸುವ ಕಾರ್ಯವಾಗುತ್ತದೆ.
- ಲಿಂಗ ಸಮಾನತೆಯನ್ನು ಸಾರಿದ ಏಕೈಕ ಧರ್ಮವಾದ ಬಸವಧರ್ಮದ ಬಗ್ಗೆ, ಧರ್ಮಗುರುವಿನ ಬಗ್ಗೆ ಸರಿಯಾದ ತಿಳುವಳಿಕೆ ಕೊಟ್ಟು ಇದನ್ನು ಕೇವಲ ಹೇಳಿಲ್ಲ ಆಚರಣೆಯಲ್ಲಿಯೂ ತಂದಿದ್ದಾರೆ ಎಂದು ತಿಳಿಸಬೇಕು. ನಾವು ಅಂದರೆ ಮಹಿಳೆಯರು ಋತುಚಕ್ರದ ಸಮಯದಲ್ಲಿಯೂ ಕೂಡ ಸ್ನಾನ ಮಾಡಿ ಶುಧ್ದರಾಗಿ ಇಷ್ಠಲಿಂಗ ಪೂಜೆಯನ್ನು, ವಚನಸಾಹಿತ್ಯದ ಅಧ್ಯಯನವನ್ನೂ ಇಂದಿಗೂ ಲಿಂಗವನ್ನು ಧರಿಸಿದ ಪ್ರತಿಯೊಬ್ಬ ಮಹಿಳೆಯೂ ಮಾಡುತ್ತಾಳೆ ಎಂದು ಪ್ರತ್ಯಕ್ಷವಾಗಿ ಮನದಟ್ಟು ಮಾಡಬೇಕು. ಹಾಗೂ ಈ ಸಂದರ್ಭದಲ್ಲಿ ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಂಡುಬರುವುದು ಸಹಜ. ಇದನ್ನು ಶಿವಯೋಗದ ಮೂಲಕ ನಿಗ್ರಹಿಸಬಹುದು ಅಷ್ಟೇ ಅಲ್ಲದೇ ನಮ್ಮ ಸಂಕಲ್ಪಗಳು ಶಿವಯೋಗದಿಂದ ನೆರವೇರುತ್ತವೆ ಎಂದು ಧೈರ್ಯ ತುಂಬಬೇಕು.
- ಸಾಮಾಜಿಕ ಜಾಲತಾಣಗಳಲ್ಲಿ Online Quizನ್ನು ವಚನಸಾಹಿತ್ಯದ ಮೇಲೆಯೇ ಏರ್ಪಡಿಸಿ ಎಲ್ಲರೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ಆನ್ಲೈನ್ ಮೂಲಕವೇ ವಿತರಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಮಹಿಳೆಯರು ಹೆಚ್ಚು ವಚನಸಾಹಿತ್ಯದ ಅಧ್ಯಯನಕ್ಕೆ ಉತ್ಸುಕರಾಗಿ ಅಭಿಯಾನಕ್ಕೆ ಮುಂದೆ ಬರುವ ಸಾಧ್ಯತೆಗಳಿವೆ.
- ನೊಂದ ಮಹಿಳೆಯರು ಜ್ಯೋತಿಷ್ಯ ಹೇಳುವವರ ಮೊರೆಹೊಕ್ಕಾಗ ಅವರನ್ನು ಹೇಗೆ ಬೇಕೋ ಹಾಗೇ ಅವರು ದುರುಪಯೋಗಪಡಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ ಕೇವಲ ಶಿವಯೋಗ, ನಿತ್ಯ ವಚನ ಸಾಹಿತ್ಯದ ಅಧ್ಯಯನ ಹಾಗೂ ಜಂಗಮ ದಾಸೋಹದ ಮೂಲಕ ನಿಮ್ಮ ಕಷ್ಟಗಳು ಸಾಧ್ಯವಾದಷ್ಟು ಕಡಿಮೆ ಆಗುತ್ತವೆ ಎಂದು ಅವರ ಭಾವನೆಗಳನ್ನು ಅರಳಿಸಿ ಭಾವನಾತ್ಮಕ ನಂಟನ್ನು ತತ್ವದೊಂದಿಗೆ ಬೆಸೆಯುವ ಕೆಲಸ ಆಗಬೇಕು.
ಮನಸ್ಸು ಮಾಡಿದ ಮಹಿಳೆ ಏನನ್ನಾದರೂ ಸಾಧಿಸಬಲ್ಲಳು. ಈ ವಾಕ್ಯವನ್ನು ನಮ್ಮ ಮನದಲ್ಲಿಟ್ಟುಕೊಂಡು ಅಭಿಯಾನದಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳುವ ಕಾರ್ಯ ಬಹಳ ಮುತುವರ್ಜಿ ವಹಿಸಿ ಮಾಡಿದರೆ ಅದರಲ್ಲಿ ಯಶ ಸಿಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಒಳ್ಳೆಯ ಸಲಹೆಗಳು ಮತ್ತು ಕಾರ್ಯಸಾಧುವಾದ🙏