ಶಿವಮೊಗ್ಗ
ಇಂದಿನ ಸಾಮಾಜಿಕ ಮೌಲ್ಯಗಳ ಕುಸಿತ, ಹಿಂಸೆ, ಅಸಹಿಷ್ಣತೆ, ಮನುಷ್ಯ ಮನುಷ್ಯರ ನಡುವೆ ದ್ವೇಷ, ದಳ್ಳುರಿ, ಜಾಗತಿಕ ಅಶಾಂತಿ, ಮೌಢ್ಯತೆ, ಕಂದಾಚಾರಗಳ ಆಚರಣೆ, ಮಾನವ ಹಕ್ಕುಗಳ ಮೇಲಿನ ದಾಳಿ, ನೈತಿಕ ಅಧಃಪತನದಂತಹ ಮಾನವ ಸಮಾಜದ ಈಗಿನ ವಿಪ್ಲವಗಳಿಗೆ ಬಸವಣ್ಣ ದೊಂದಿಯಾಗಿ ಬೆಳಕು ತೋರುತ್ತಾರೆ ಎಂದು ಬೆಳಗಾವಿಯ ವೈದ್ಯ ಡಾ. ಅವಿನಾಶ್ ಕವಿ ಹೇಳಿದರು.
ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಶುಕ್ರವಾರ ಸಂಜೆ ಬಸವ ಜಯಂತಿ ಆಚರಣೆ ಸಮಿತಿ ಆಯೋಜಿಸಿದ್ದ ‘ಬಸವೋತ್ಸವ’ ಹಾಗೂ ‘ಸಾವಿರದ ವಚನ’ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಹೀಗಾಗಿಯೇ ರಾಷ್ಟ್ರಕವಿ ಕುವೆಂಪು ಕಾರ್ತಿಕದ ಕತ್ತಲಲ್ಲಿ ಆಕಾಶದೀಪವಾಗಿ ಬಂದವರು ಎಂದು ಬಸವಣ್ಣನವರನ್ನು ಬಣ್ಣಿಸಿದ್ದರು ಎಂಬುದನ್ನು ಉಲ್ಲೇಖಿಸಿದರು.
ಜಾತಿ, ವರ್ಣ, ವರ್ಗ, ಲಿಂಗ ಬೇಧಗಳನ್ನು ಹೊಡೆದೋಡಿಸಿ ಇವನಾರವ ಇವನಾರವ ಎಂದೆನಿಸದೇ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪುವ ಸಮ ಸಮಾಜದ ರಚನೆಯ ಹಾದಿಯಲ್ಲಿ ನಡೆದುಬಂದ ಬಸವಣ್ಣನವರೊಂದಿಗೆ ಅನೇಕ ಶರಣರು, ದಾರ್ಶನಿಕರು, ಕವಿಗಳು ಪ್ರೇರಣೆ ಪಡೆದು ಅವರೊಂದಿಗೆ ಆತ್ಮಸಖ್ಯ ಬೆಳೆಸಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಬಸವಣ್ಣ ಬರೀ ಲಿಂಗಾಯತರಿಗೆ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೆ ಸಾಂಸ್ಕೃತಿಕ ನಾಯಕ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮ ಇಡೀ ನಾಡಿಗೆ ಹೊಸ ಸಂದೇಶ ನೀಡುತ್ತಿದೆ. ಒಂದು ವೇದಿಕೆ ಸಾವಿರ ಕಂಠ, ಸಮಾನ ಧ್ವನಿಯಾಗಿ ಬಸವಣ್ಣನವರ ವಿಶ್ವಸಂದೇಶವನ್ನು ಜಗತ್ತಿಗೆ ಮುಟ್ಟಿಸುವ ವೇದಿಕೆ ಆಗಿರುವುದು ವಿಶೇಷ. ಪರಿಕಲ್ಪನೆ ಬಸವ ಮರುಳಸಿದ್ಧ ಸ್ವಾಮೀಜಿ, ಆಶೀರ್ವದಿಸಿದವರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಆಸರೆಯಾದವರು ಬಸವ ಜಯಂತಿ ಆಚರಣೆ ಸಮಿತಿಯವರು ಎಂದು ಶ್ಲಾಘಿಸಿದರು.
ಸಾವಿರ ವರ್ಷಕ್ಕೂ ಮುನ್ನಡೆಯುವ, ಮಾರ್ಗದರ್ಶನ ನೀಡುವ ಈ ವಚನಗಳು ಇಡೀ ಸಮಾಜಕ್ಕೆ ಪ್ರೇರಣೆ ನೀಡುತ್ತಿವೆ. ಬಸವಣ್ಣನವರ ಅನುಭವ ಮಂಟಪದ ಸಾಂಸ್ಕೃತಿಕ ಸಂಘಟನೆಯ ವ್ಯಕ್ತರೂಪವಾಗಿ ಈ ಬಸವೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಭೌತಿಕವಾಗಿ ಸಾಕ್ಷಿಯಾಗಿರುವುದು ಪುಣ್ಯದ ಸಂಗತಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಡಾ. ಧನಂಜಯ ಸರ್ಜಿ ಮಾತನಾಡಿ, ಕಾರ್ಯಕ್ರಮದ ಆಯೋಜನೆಯ ಹಿಂದಿನ ಆಶಯ ಬಿಚ್ಚಿಟ್ಟರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಬಿ.ಕೆ. ಸಂಗಮೇಶ, ಡಿ.ಜಿ. ಶಾಂತನಗೌಡ, ಡಿ.ಎಸ್. ಅರುಣ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಬಸವೋತ್ಸವ ಸಮಿತಿ ಅಧ್ಯಕ್ಷ ಎಸ್. ರುದ್ರೇಗೌಡ, ಮಾಜಿ ಶಾಸಕ ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸುಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ, ಬಸವೋತ್ಸವ ಸಮಿತಿಯ ಎಸ್.ಎಸ್. ಜ್ಯೋತಿಪ್ರಕಾಶ್, ಎಚ್.ಸಿ. ಯೋಗೀಶ್, ಬಳ್ಳೇಕೆರೆ ಸಂತೋಷ, ಮಾಡಾಳ್ ಮಲ್ಲಿಕಾರ್ಜುನ, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಉಪಸ್ಥಿತರಿದ್ದರು.