ಬೆಂಗಳೂರು
ತಮಿಳುನಾಡಿನ ಈರೋಡ್ ಜಿಲ್ಲೆ ಆಂದಿಯೂರು ತಾಲೂಕಿನ ಹಳ್ಳಿಗಳಲ್ಲಿ ಅಂತರರಾಜ್ಯ ಶರಣ ಸಂಗಮ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇಲ್ಲಿರುವ 33 ಬೇಡಗಂಪಣ ಬುಡಕಟ್ಟು ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸಿದ್ದು ಇದೇ ಮೊದಲು ಎಂದು ಚಾಮರಾಜನಗರ ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಎನ್ರಿಚ್ ಮಹದೇವಸ್ವಾಮಿ ಹೇಳಿದರು.
ಇಲ್ಲಿನ ಕಾಡು ಪ್ರದೇಶದಲ್ಲಿರುವ ಬೇಡಗಂಪಣ ಜನಾಂಗದವರು ಮಲೆ ಮಹದೇಶ್ವರರಿಂದ ಲಿಂಗ ದೀಕ್ಷೆ ಪಡೆದರು. ಮಹದೇಶ್ವರ ಬೆಟ್ಟದಲ್ಲಿ ಇವರ ಬಳಗದವರೇ ಪೂಜೆ ಮಾಡುವುದು. ಕೊರಳಲ್ಲಿ ಲಿಂಗ ಕಟ್ಟಿಕೊಂಡು ಮಹದೇಶ್ವರರಿಗೆ ನಿಷ್ಠೆಯಿಂದ ನಡೆದುಕೊಂಡು ಬದುಕು ಮಾಡುತ್ತಿದ್ದರೂ ಇವರು ಲಿಂಗಾಯತರ ಯಾವುದೇ ಉಪ ಜಾತಿಗಳ ಪಟ್ಟಿಯಲ್ಲಿಯೂ ಗುರುತಿಸಲ್ಪಟ್ಟಿಲ್ಲ.

‘ಇವರಲ್ಲಿ ಮಹದೇಶ್ವರರೇ ನಮ್ಮ ಧರ್ಮ ಗುರು ಎನ್ನುವ ಭಾವನೆಯಿದೆ. ಬಸವಣ್ಣನವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈಗ ಶುರುವಾಗಿದೆ,’ ಎಂದು ಎನ್ರಿಚ್ ಮಹದೇವಸ್ವಾಮಿ ಹೇಳಿದರು.
ಮೇ 12ರ ಸಂಜೆ ಬರಗೂರು ಬೆಟ್ಟದ ದ್ರೋಣನ ಗಿರಿ ಮಠದಲ್ಲಿ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಆಶ್ರಯದಲ್ಲಿ ಬಸವ ಜಯಂತಿ ನಡೆಯಿತು.

ಬಸವಣ್ಣನವರ ಮೂರ್ತಿಯ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದ್ರೋಣನ ಗಿರಿ ಮಠದ ಪೂಜ್ಯ ಅಶೋಕ ರಾಜೇಂದ್ರ ಸ್ವಾಮೀಜಿಗಳು ಹಾಗೂ ಪೂಜ್ಯ ಸದಾಶಿವಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಚಾಮರಾಜನಗರ ಜಿಲ್ಲಾ ಬಸವಪರ ಸಂಘಟನೆಗಳ ಗೌರವಾಧ್ಯಕ್ಷರಾದ ಕೋಡಿಮೋಳೆ ರಾಜಶೇಖರ್ ರವರು ಅಧ್ಯಕ್ಷತೆ ವಹಿಸಿದ್ದರು. ಹನೂರು ತಾಲೂಕು ಬಸವಕೇಂದ್ರದ ಅಧ್ಯಕ್ಷರಾದ ಕಣ್ಣೂರು ವೃಷಭೇಂದ್ರ ರವರು ಸರ್ವರನ್ನು ಸ್ವಾಗತಿಸಿದರು.

ಎನ್ರಿಚ್ ಮಹಾದೇವಸ್ವಾಮಿ ಪ್ರಾಸ್ತಾವಿಕ ನುಡಿ ಮಾತನಾಡಿದರು. ಚಾಮರಾಜನಗರದ ಮುಖ್ಯ ಶಿಕ್ಷಕರಾದ ಎಚ್ ಎಂ ಮಹದೇವಸ್ವಾಮಿ ಅವರು ‘ವಚನಗಳಲ್ಲಿ ಲೋಕಾನುಭವ’ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಪ್ರಸಾದದ ನಂತರ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಎರಡು ಗಂಟೆಗಳ ಚಿಂತನ ಮಂಥನ ನಡೆಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಸುಮಾರು 40 ಜನರು ಚಿಂತನೆಯಲ್ಲಿ ಭಾಗವಹಿಸಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ಮಾಡುತ್ತಿರುವ RTO ಶಂಬು ಮತ್ತು ಮಹಾದೇವ ಸ್ವಾಮಿಯವರನ್ನು ಸತ್ಕರಿಸಲಾಯಿತು.
‘ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯುತ್ತದೆ. ಆದರೆ ತಮಿಳುನಾಡಿನಲ್ಲಿ ಲಿಂಗಾಯತರಿದ್ದರೂ ಯಾವುದೇ ಆಚರಣೆ ನಡೆಯುವುದಿಲ್ಲ. ಈ ಕೊರತೆಯನ್ನು ನೀಗಿಸುವ ಪ್ರಯತ್ನ ಈ ವರ್ಷದಿಂದ ಮಾಡುತ್ತಿದ್ದೇವೆ,’ ಎಂದು ಎನ್ರಿಚ್ ಮಹಾದೇವಸ್ವಾಮಿ ಹೇಳಿದರು.
ಭೇಡಗಂಪಣ ಸಮುದಾಯದ ದೊಡ್ಡ ಪಟಗಾರರು ಹಾಗೂ ಚಿಕ್ಕ ಪಟಗಾರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸೇಲಂ, ಈರೋಡ್, ಭವಾನಿ ತಾಲೂಕುಗಳಿಂದಲೂ ಜನ ಬಂದಿದ್ದರು. ಅವರೆಲ್ಲ ಅರೆ ಕನ್ನಡ ಮಾತಾಡಿದರೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭವಾನಿ ತಾಲೂಕಿನ ಸಂಗಮೇಶ್ವರ ದೇವಸ್ಥಾನದಲ್ಲಿ ಮುಂದಿನ ವರ್ಷ ಬಸವ ಜಯಂತಿ ಆಚರಿಸಲು ಅಹ್ವಾನ ಬಂದಿದೆ. ಸ್ಥಳೀಯರು 1,500 ಜನರನ್ನು ಸೇರಿಸುವುದಾಗಿ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲಾ ಜಾಗತಿಕ ಲಿಂಗಾಯಿತ ಮಹಾಸಭಾದ ಖಜಾಂಚಿ ಶಿವಪ್ರಸಾದ್,
ಅಖಿಲ ಭಾರತ ವೀರಶೈವ ಮಹಾಸಭಾದ ಚಾಮರಾಜನಗರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುಡ್ಲುಪುರ ಮಂಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಲಯನ್ ದುಗ್ಗಹಟ್ಟಿ ರಾಜೇಶ್, ಕೊಳ್ಳೇಗಾಲ ತಾಲೂಕು ಬಸವಕೇಂದ್ರದ ಅಧ್ಯಕ್ಷ ದನಗೆರೆ ಗುರುಸ್ವಾಮಿ, ಯಳಂದೂರು ತಾಲೂಕು ಬಸವಕೇಂದ್ರದ ಅಧ್ಯಕ್ಷರು ಹೊನ್ನೂರು ಮಂಜು, ಚಾಮರಾಜನಗರ ತಾಲೂಕು ಬಸವಕೇಂದ್ರದ ಅಧ್ಯಕ್ಷರು ಹೇಗ್ಗೋಟರ ಶಿವಸ್ವಾಮಿ, ಮಾಜಿ ಸೈನಿಕ ಗಂಗಾಧರ್, ತಮಿಳುನಾಡಿನ ಭವಾನಿ, ಸೇಲಂ, ಅಂದಿಯೂರು ತಾಲೂಕು ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಸವಾಭಿಮಾನಿಗಳು ಭಾಗವಹಿಸಿದ್ದರು
ಮಾಜಿ ತಾಲೂಕು ಪಂಚಾಯತ್ ಸದಸ್ಯ ಡಿ ಪಿ ಪ್ರಕಾಶ್ ವಂದಿಸಿದರು.