ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಣೆ, ವಚನ ಕಂಠ ಪಾಠ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವ ಸೇವಾ ಸಮಿತಿ ವತಿಯಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ನಗರದ ಬಸ್ ನಿಲ್ದಾಣದಲ್ಲಿ ಬಸವೇಶ್ವರ ಪ್ರತಿಮೆಗೆ ಶಾಸಕ ಹಾಗೂ ಮಾಜಿ ಮಂತ್ರಿ ಬೈರತಿ ಬಸವರಾಜ ಅವರ ಮಾಲಾರ್ಪಣೆಯೊಂದಿಗೆ ವಿದ್ಯುಕ್ತವಾಗಿ ಬುಧವಾರ ಚಾಲನೆ ನೀಡಲಾಯಿತು.

ನಂತರ ನಡೆದ ಸರಳ ಸಮಾರಂಭದಲ್ಲಿ ವಚನ ಕಂಠ ಪಾಠ ಸ್ಪರ್ಧೆಯನ್ನು ಶಾಸಕರು ಉದ್ಘಾಟಿಸಿದರು. ದಿನವಿಡೀ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ೧೪ ಸ್ಪರ್ದ್ಧಾರ್ಥಿಗಳಲ್ಲಿ ೫೦೧ ವಚನಗಳನ್ನು ಹೇಳಿ ಪ್ರಥಮ ಸ್ಥಾನ ಪಡೆದ ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ ನಗದು ರೂ. ೨೫೦೦೦ ಬಹುಮಾನವನ್ನು ಗಳಿಸಿದರು.

ಸಾಯಂಕಾಲ ನಡೆದ ಸಮಾರಂಭದ ಸಾನಿಧ್ಯ ವಹಿಸಿದ ಡಾ. ಶ್ರೀ ಶಿವಾನಂದ ಶಿವಾಚಾರ್ಯರು, ಮಠಾಧಿಪತಿಗಳು, ಹಿರೇಮಠ, ತುಮಕೂರು ಇವರು ಸಮಸ್ತ ಬಸವಾಭಿಮಾನಿಗಳು ಮತ್ತು ಸಹ ಸ್ಪರ್ಧಾರ್ಥಿಗಳ ಸಮ್ಮುಖದಲ್ಲಿ ಚಟ್ನಳ್ಳಿ ಅವರಿಗೆ ಪ್ರಥಮ ಬಹುಮಾನ ಮತ್ತು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿದರು.

ಇನ್ನುಳಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಸೂಕ್ತ ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಬಸವ ಜಯಂತಿಯ ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಮಕ್ಕಳ ಹೃದಯತಜ್ಞೆ ಶ್ರೀಮತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ‘ಬಸವ ಭೂಷಣ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಿವಾನುಭವ ತರಬೇತಿ ಕೇಂದ್ರವನ್ನು ಪೂಜ್ಯರು ಉದ್ಘಾಟಿಸಿ ತಮ್ಮ ಆಶೀರ್ವಚನದಲ್ಲಿ ಬಸವಣ್ಣನ ಸಪ್ತಶೀಲ ವಚನ ಕಳಬೇಡ ಕೊಲಬೇಡ ಕುರಿತು ಸವಿಸ್ತಾರವಾಗಿ ಅರ್ಥೈಸಿ ಇಂದಿನ ಕಾಲದಲ್ಲಿ ಅದರ ಅವಶ್ಯಕತೆ ಕುರಿತು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಸ್.ಜಿ. ನಾಗರಾಜ್ ಬಿಬಿಎಂಪಿ ಮಾಜಿ ಸದಸ್ಯ ನೆರವೇರಿಸಿ ಸಮಸ್ತರಿಗೆ ಬಸವ ಜಯಂತಿಯ ಶುಭಾಶಯ ಕೋರಿದರು.

ಶಿವಶರಣಪ್ಪ ಹೂಗಾರ ಅಧ್ಯಕ್ಷರು, ಶರಣಬಸವೇಶ್ವರ ಪತ್ತಿನ ಸಂಘ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಸವ ಭೂಷಣ’ ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನಿತರು ಬಸವಣ್ಣನವರ ಕಾಯಕದ ಮಹತ್ವವನ್ನು ತಿಳಿಸುವುದರೊಂದಿಗೆ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಮಿತಿಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬ. ಹಂಜಿಯವರು ಸ್ವಾಗತ ಕೋರಿದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಪ್ರಧಾನ ಕಾರ್ಯದರ್ಶಿ ಎ. ಎಸ್. ಓಂಕಾರಪ್ಪ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *