ಬೆಳಗಾವಿ
ಧರ್ಮವನ್ನು ಪೂಜ್ಯನೀಯಗೊಳಿಸಲು ಮೂಲಕಾರಣ ಆಗಿರುವ ವಚನ ಸಾಹಿತ್ಯವನ್ನು ನಾವು ಅನುಪಾಲನೆ ಮತ್ತು ಅನುಕರಣೆ ಮಾಡಲೇಬೇಕಾಗಿದೆ, ಅಂದಾಗ ಮಾತ್ರ ಸಮಾಜ ಮತ್ತು ಧರ್ಮ ಉಳಿಯುತ್ತದೆ ಎಂದು ಶರಣ ಶ್ರೀಕಾಂತ ಶಾನವಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಶ್ರಾವಣ ಸತ್ಸಂಗ ಕಾರ್ಯಕ್ರಮದಲ್ಲಿ, ‘ಶರಣರ ತತ್ವಗಳು ಮತ್ತು ಸಮಾಜ’ ವಿಷಯವಾಗಿ ಮಾತನಾಡಿದರು.
ವಚನಗಳು ಸರ್ವಧರ್ಮಗಳ, ಜನರ ತಾಯಿಬೇರು ಇದ್ದಂತೆ, ಅವನ್ನು ಓದಿ, ಅರಿತು ಆಚರಿಸುವ ಅನಿವಾರ್ಯತೆ ಈಗ ಬಂದೋದಗಿದೆ ಎಂದರು.

ತತ್ವಗಳ ಮರುಸ್ಥಾಪನೆ ಆಗಬೇಕಿದೆ. ಪ್ರಾಮಾಣಿಕತೆ, ಶ್ರದ್ಧೆಗೆ ಬೆಲೆ ಇಲ್ಲವಾಗಿದೆ, ವ್ಯಕ್ತಿಯನ್ನು ಭೋಗಿಯಾಗಿಸಿದೆ ಈ ಸಮಾಜ. ಸಂಘಟನೆಗಳು ಹುಟ್ಟಿ ಸಮಾಜವನ್ನು ಒಡೆಯುತ್ತಿವೆ ಹೊರತು ಸಂಘಟನೆ ಮಾಡುತ್ತಿಲ್ಲ. ಸಂಘಟನೆಯ ಹೆಸರಿನಲ್ಲಿ ನಾವೆಲ್ಲಾ ಒಡೆದು ಚೂರಾಗಿದ್ದೇವೆ. ಇನ್ನಾದರೂ ನಾವು ಸಂಘಟಿತರಾಗಬೇಕಿದೆ. ತತ್ವಗಳು ಗೊತ್ತಿದ್ದರೂ ಗೊತ್ತಿಲ್ಲದಂತೆ ಬದುಕುವ ಪರಿಸ್ಥಿತಿ ಬಂದಿದೆ ಅದು ಬೇಡ ಎಂದು ಶಾನವಾಡ ಹೇಳಿದರು.
ಇದೇ ಸಂದರ್ಭದಲ್ಲಿ ದಕ್ಷತೆ, ಪ್ರಾಮಾಣಿಕತೆಯ ಸೇವೆ ಸಲ್ಲಿಸಿ ತಮ್ಮದೇ ನಡೆಯಿಂದ ಸರ್ಕಾರದ ಕಣ್ತೆರೆಸಿ ಈಗ ಬೆಳಗಾವಿ ನಗರದ ಡಿಸಿಪಿ ಆಗಿ ನೇಮಕಗೊಂಡಿರುವ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಭರಮನಿ, ಸರ್ವರು ನನ್ನ ಮೇಲೆ ಪ್ರೀತಿ ಇಟ್ಟಿರುವಿರಿ, ನಿಮ್ಮ ವಿಶ್ವಾಸಕ್ಕೆ ಕುಂದು ಬಾರದ ರೀತಿಯಲ್ಲಿ ಕಾನೂನು ರಕ್ಷಿಸುವ ಮತ್ತು ಪ್ರಾಮಾಣಿಕ ಸೇವೆಯನ್ನು ಸಮಾಜಕ್ಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಜೊತೆಗೆ ಎಲ್ಲರೂ ಸಹ ಶರಣ ತತ್ವಗಳ ಅನುಪಾಲನೆ ಮಾಡಿ ನಮ್ಮ ಜೀವನಕ್ಕೆ ಅರ್ಥ ಬರುವ ರೀತಿಯಲ್ಲಿ ಮುಂದೆ ಸಾಗೋಣ ಎಂದರು.

ಶಂಕರ ಗುಡಸ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ, ವಿಜಯ ಹುದಲಿಮಠ, ವಿ.ಕೆ. ಪಾಟೀಲ, ರಮೇಶ ಕಳಸನ್ನವರ, ಬಸವರಾಜ ಬಿಜ್ಜರಗಿ, ಶಿವಾನಂದ ನಾಯಕ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಜಯಶ್ರೀ ಚಾವಲಗಿ, ಶೋಭಾ ದೇಯನ್ನವರ, ಬಿ.ಪಿ. ಜೇವನಿ, ಜ್ಯೋತಿ ಬದಾಮಿ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಗಿ, ಮಹದೇವ ಕೆಂಪಿಗೌಡರ, ಮಹಾದೇವಿ ತೆಗ್ಗಿ, ಕೆಂಪಣ್ಣ ರಾಮಪೂರಿ, ವಿರೂಪಾಕ್ಷಿ ದೂಡ್ಡಮನಿ, ಸಿದ್ದಪ್ಪ ಸಾರಾಪೂರಿ, ಗುರುಸಿದ್ದಪ್ಪ ರೇವಣ್ಣವರ, ಲಕ್ಷ್ಮಿಕಾಂತ ಗುರವ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಶರಣರು ಉಪಸ್ಥಿತರಿದ್ದರು.
ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ, ಎ.ಆಯ್. ತುಪ್ಪದ ಅವರು ದಾಸೋಹ ಸೇವೆ ಸಲ್ಲಿಸಿದರು.
ಆರಂಭದಲ್ಲಿ ಸುರೇಶ ನರಗುಂದ ಸ್ವಾಗತಿಸಿದರು. ಮಹಾದೇವಿ ಅರಳಿಯ ಪ್ರಾರ್ಥಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.