ಕೂಡಲಸಂಗಮ
ಲಿಂಗಾಯತ-ವೀರಶೈವದ ಸ್ಪಷ್ಟ ಪರಿಕಲ್ಪನೆ, ಇತಿಹಾಸದ ಅರಿವು ಇಲ್ಲದೇ ಮಾತನಾಡುವುದು ಸರಿಯಲ್ಲ. ಲಿಂಗಾಯತರು ಬಸವಣ್ಣನ ತತ್ವ ಸಿದ್ದಾಂತ ಒಪ್ಪಿಕೊಂಡು ಪ್ರತ್ಯೇಕ ಧರ್ಮದ ಮಾನ್ಯತೆಗೆ ಬದ್ದರಾಗಿದ್ದೆವೆ. ವೀರಶೈವರು ಬಸವಣ್ಣನನ್ನು ಒಪ್ಪಿಕೊಳ್ಳದೇ ಸಮಾಜ ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಬಸವಣ್ಣನನ್ನು ಧರ್ಮಗುರು ಎಂದು ಏಕೆ ಒಪ್ಪಿಕೊಳ್ಳುವುದಿಲ್ಲ, ಸ್ಪಷ್ಟಪಡಿಸಬೇಕು ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಮಂಗಳವಾರ ಕೂಡಲಸಂಗಮ ಬಸವಧರ್ಮ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತ-ವೀರಶೈವ ಎಂದು ಒಂದಾಗಲೂ ಸಾಧ್ಯವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ವೀರಶೈವರೇ ಅಡ್ಡಿಯಾಗಿದ್ದಾರೆ. ವೀರಶೈವರು ತಮಗೆ ಪ್ರತ್ಯೇಕ ಧರ್ಮ ಬೇಕಾದರೆ ಕೇಳಿಕೊಳ್ಳಲಿ. ಲಿಂಗಾಯತ ಧರ್ಮಕ್ಕೆ ತಳಕು ಹಾಕಿಕೊಳ್ಳುವುದನ್ನು ಬಿಡಬೇಕು.
ವೀರಶೈವರು ಕರೆಯುವ ಸಭೆಗೆ ಹೊಗುವವರು ಯಾರು ಎಂದು ಭಕ್ತರಿಗೆ ಗೊತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಲ್ಲಿ 104 ಉಪಜಾತಿಗಳು, ಬಸವಣ್ಣನೇ ಧರ್ಮಗುರು ಎಂದು ಒಪ್ಪಿಕೊಳ್ಳುವ ಯಾರೇ ಬಂದರು ಮುಕ್ತ ಅವಕಾಶ ಇದೆ.
ಹಲವು ವರ್ಷಗಳಿಂದ ಲಿಂಗಾಯತರನ್ನು ದಾರಿ ತಪ್ಪಿಸುವ ಕಾರ್ಯವನ್ನು ವೀರಶೈವರು ಮಾಡಿದ್ದಾರೆ. ಇವರ ಷಡ್ಯಂತರಕ್ಕೆ ಬಸವಭಕ್ತರು ಒಳಗಾಗಬಾರದು. ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಎಂದು ಒಪ್ಪಿಕೊಳ್ಳದ ವೀರಶೈವರೇ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಅಡ್ಡಿಯಾಗಿದ್ದಾರೆ. ಬಸವ ಸಂಸ್ಕೃತಿ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಯಶಸ್ಸು ಖಂಡಿದೆ ಇದನ್ನು ಸಹಿಸದ ಕೆಲವು ವೀರಶೈವ ಮಠಾಧೀಶರು ವಿರೋಧಿಸುವರು. ಅವರ ಮಾತಿಗೆ ಬೆಲೆ ಕೊಡಬೇಡಿ.
ಮುಂದಿನ ತಿಂಗಳು ನಡೆಯುವ ಜಾತಿವಾರು ಸಮೀಕ್ಷೆಯಲ್ಲಿ ಎಲ್ಲ ಬಸವ ಭಕ್ತರು ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಬರೆಸಬೇಕು ಎಂದರು.