ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಬಲವಾಗಿದ್ದ ಶರಣ ಚಳವಳಿ: ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮಾತು
ಮೈಸೂರು
ವಚನ ದರ್ಶನದ ಮಲ್ಲೇಪುರಂ ವೆಂಕಟೇಶ್ ಹಿಂದೆ ಸರಿದ ಮೇಲೆ ನಗರದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಯಾವುದೇ ವಿವಾದವಿಲ್ಲದೆ ಸಂಭ್ರಮದಿಂದ ನಡೆಯಿತು.
ಶರಣ ಸಾಹಿತ್ಯ ಸಮ್ಮೇಳನವನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ರವಿವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಾಗಭೂಷಣಸ್ವಾಮಿ ಶರಣರ ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ವಚನಗಳು ಪ್ರಕಟವಾಗಿವೆ, ಇನ್ನೂ 5-6 ಸಾವಿರ ವಚನಗಳು ಸಂಗ್ರಹವಾಗಿದ್ದು, ಪ್ರಕಟವಾಗಿಲ್ಲ.
ಆದರೂ ಸಭೆಗಳಲ್ಲಿ, ಭಾಷಣಗಳಲ್ಲಿ 10 ರಿಂದ 20 ವಚನಗಳನ್ನು ಮಾತ್ರ ಬಳಸುತ್ತಿಕೊಳ್ಳುತ್ತೇವೆ. ಮಿಕ್ಕ ವಚನಗಳಲ್ಲಿ ಏನಿದೆ ಎನ್ನುವ ಕುತೂಹಲವೂ ನಮಗೆ ಇಲ್ಲ ಎಂದು ಅವರು ಹೇಳಿದರು.

ಅಮೂಲ್ಯವಾದ ಸಂಪತ್ತಾಗಿರುವ ಶರಣ ಸಾಹಿತ್ಯದ ಬೆಲೆ ಅರಿಯದೇ ಮಕ್ಕಳ ರೀತಿಯಲ್ಲೇ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.
ಶರಣ ಸಾಹಿತ್ಯದಲ್ಲಿ ಯಾವ ಪ್ರಶ್ನೆಗಳು ಕಾಡುತ್ತಿವೆ ಎಂಬ ಸ್ಪಷ್ಟವಾದ ಅರಿವು ಸಹ ನಮಗಿಲ್ಲ. ಇಂಗ್ಲಿಷಿನ ಪ್ರಭಾವ ಇಲ್ಲದ, ಅನ್ಯ ಮತೀಯರ ದಾಳಿಯೂ ನಡೆಯದ ಹಾಗೂ ತಂತ್ರಜ್ಞಾನದ ಆರಂಭದ ಸ್ಥಿತಿಯ ಕಾಲದಲ್ಲಿ ಲಭ್ಯವಿದ್ದಂತಹ ಜ್ಞಾನ ಹಾಗೂ ಚಿಂತನೆಯನ್ನು ಒಳಗೊಂಡು, ಬದುಕಿಗೆ ಬೇಕಾದ ಸಂಗತಿಗಳನ್ನು ಯಾವ ರೀತಿಯಲ್ಲಿ ಶರಣರು ನಮಗೆ ನೀಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಬಲವಾದ ಚಳವಳಿ
ಶರಣ ಸಾಹಿತ್ಯ ಚಳವಳಿಯು ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಬಲವಾದ ಸಾಮಾಜಿಕ ಚಳವಳಿಯಾಗಿತ್ತು. ಇದನ್ನು ಕಾಲೇಜು–ವಿಶ್ವವಿದ್ಯಾಲಯಗಳಲ್ಲಿ ಹೇಳುತ್ತಿಲ್ಲ’ ಎಂದು ಹೇಳಿದರು.

ಸಾಂಸ್ಕೃತಿಕ ಉದಾಸೀನತೆ, ಧಾರ್ಮಿಕ ದ್ವೇಷ ಹೆಚ್ಚಾಗಿದೆ. ಬಿಜ್ಜಳನ ಸುತ್ತಲಿದ್ದ ಕೆಟ್ಟವರೇ ಈಗಲೂ ಇದ್ದಾರೆ. ವಚನಕಾರರಂತೆ ಚಳವಳಿ ಹುಟ್ಟುಹಾಕಬೇಕಿದೆ’ ಎಂದು ಕರೆ ನೀಡಿದರು.
ಕಳಪೆ ಗುಣಮಟ್ಟದ ಸಾಮಗ್ರಿಗಳು
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅನುಭವ ಮಂಟಪದ ಪ್ರೇರಣೆಯಿಂದಲೇ ಶಾಸನ ಸಭೆಗಳು ರೂಪುಗೊಂಡಿವೆ ಎನ್ನುತ್ತಾರೆ.
ಆದರೆ ಈಗ ಸಂಸತ್, ಶಾಸನ ಸಭೆಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಕಳುಹಿಸುತ್ತಿದ್ದೇವೆ. ಹೀಗಾಗಿ, ಅನುಭವ ಮಂಟಪ ದಂತಹ ಚರ್ಚೆಗಳು ನಡೆಯುತ್ತಿಲ್ಲ ಎಂದು
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ.ಹರೀಶ್ ಗೌಡ, ಡಾ.ಡಿ.ತಿಮ್ಮಯ್ಯ, ಜಲ ಸಾಹಸಿ ಅನನ್ಯ ಪ್ರಸಾದ್, ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಪದಾಧಿಕಾರಿಗಳಾದ ದೇವರಾಜು ಪಿ. ಚಿಕ್ಕಳ್ಳಿ, ಟಿ.ಎಸ್. ಕುಮಾರಸ್ವಾಮಿ, ಬಿ.ಎನ್. ನಂದೀಶ್ವರ, ಎಂ. ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಮೊದಲಾದವರು ಇದ್ದರು.

ವಚನ ಜಾಗೃತಿ ಜಾಥಾ
ಶರಣ ಸಾಹಿತ್ಯ ಸಮ್ಮೇಳನ ಅಂಗವಾಗಿ ಮೆಟ್ರೊಪೋಲ್ ವೃತ್ತದಿಂದ ಕಲಾಮಂದಿರದವರೆಗೆ ವಚನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಈ ಜಾಥಾಗೆ ರಂಗಾಯಣದ
ನಿರ್ದೇಶಕ ಸತೀಶ್ ತಿಪಟೂರು ಚಾಲನೆ ನೀಡಿದರು.
ಕಂಸಾಳೆ, ವೀರಗಾಸೆ, ಡೊಳ್ಳು, ನಗಾರಿ, ನಾದಸ್ವರ, ಶರಣದ ಛದ್ಮವೇಷಧಾರಿಗಳು ವಚನ ಫಲಕಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

5 ಕೃತಿಗಳ ಬಿಡುಗಡೆ
ಕಾರ್ಯಕ್ರಮದಲ್ಲಿ ಪ್ರೊ.ಡಿ.ಎಸ್. ಸದಾಶಿವ ಮೂರ್ತಿ ಸಂಪಾದಕತ್ವದ ಕೂಡಲ ಸಂಗಮ, ಮಳಲೆಕೆರೆ ಗುರು ಮೂರ್ತಿ ಅವರ ಸೋಮೇಶ್ವರ ಶತಕ, ಶ್ರೀ ವಿಜಯಕುಮಾರ ಸ್ವಾಮೀಜಿ ಅವರ ಲಿಂಗಲೀಲಾ ವಿಲಾಸ ಹಾಗೂ ಲಿಂಗಾಂಗ ಸಂಯೋಗ, ಡಾ. ಪುಟ್ಟಪ್ಪ ಮುಡಿಗುಂಡ ಅವರ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ಹಾಗೂ ಮ.ಗು. ಸದಾನಂದಯ್ಯ ಸಂಪಾದಿಸಿರುವ ವಚನ ಶ್ರಾವಣ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಬಸವ ಭಕ್ತರ ಒಕ್ಕೊರಲಿನ ವಿರೋದದ ಧ್ವನಿಯಿಂದ ಮಲ್ಲೇಪುರಂ ವೆಂಕಟೇಶ್ ಕಾರ್ಯಕ್ರಮದಿಂದ ಹಿಂದೆ ಸರಿದರು ಇದೆ ರೀತಿ ಶರಣತತ್ವದ ಮತ್ತು ಬಸವಣ್ಣನವರ ವಿಚಾರಗಳಲ್ಲಿ ಅವಿರತವಾಗಿ ಬಸವ ಮೀಡಿಯಾ ನ್ಯೂನತೆಯ ವಿರುದ್ಧ ಎಚ್ಚರಿಸಿದ ಪರಿಣಾಮ ಬಸವ ಭಕ್ತರಿಗೆ ವಿಷಯ ತಿಳಿದು ಪ್ರಬಲವಾಗಿ ಪ್ರತಿಕ್ರಿಯಿಸಲು ಸಾಧ್ಯವಾಯಿತು.