ಬಾಗಲಕೋಟೆ
‘ಲಿಂಗವು ಜಗತ್ತಿನ ಬ್ರಹ್ಮಾಂಡ ಶಕ್ತಿಯ ಸಾರವಾಗಿದೆ. ಅಪ್ರತಿಮ ಲಿಂಗವೇ ಕೂಡಲಸಂಗಮದೇವ ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗುವಿನ ಮಹತ್ವ ಅರಿಯಿರಿ’ ಎಂದು ಇಳಕಲ್ಲ-ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಯುವ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಭಾನುವಾರ ಚರಂತಿಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗ ದೀಕ್ಷೆ, ಲಿಂಗ ಪೂಜೆ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ‘ಇಂದಿನ ಕಾಲಕ್ಕೆ ಬಹಳ ಅವಶ್ಯವಿರುವ ಕಾರ್ಯಕ್ರಮ ಇದಾಗಿದೆ. ಸಂಸ್ಕಾರ ನೀಡುವ ಕೆಲಸ ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.
‘ಲಿಂಗಾಯತರಲ್ಲಿನ ಸಂಸ್ಕಾರ ಶಿಥಿಲವಾಗುತ್ತಿದೆ. ದಶಕಗಳ ಹಿಂದೆ ಭಕ್ತರ ಮನೆಗಳಿಗೆ ಹೋದಾಗ ಎಲ್ಲರ ಕೊರಳಲ್ಲಿಯೂ ಲಿಂಗ ಇರುತ್ತಿತ್ತು. ಈಗ ಬದಲಾಗಿದೆ. ಲಿಂಗವನ್ನು ಯಾವಾಗಲೂ ಧರಿಸಿರಬೇಕು. ಮಕ್ಕಳಲ್ಲಿ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಇಂತಹ ಕಾರ್ಯಕ್ರಮ ನಿಲ್ಲಬಾರದು. ಆಗಾಗ ಆಯೋಜಿಸಬೇಕು’ ಎಂದರು.
ನಂತರ ನಡೆದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಪನೆಲ್ ಇಂಟರ್ಕನೆಕ್ಟ್ ಪ್ರೈವೇಟ್ ಕಂಪನಿ ಎಜಿಎಂ ಶೈಲಜಾ ಕೌಜಗೇರಿ ಮಾತನಾಡಿ, ‘ಇಂದಿನ ಸ್ಪರ್ಧಾ ಯುಗದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಅಂತರಿಕ್ಷಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಉದಾಹರಣೆಯಾಗಿದ್ದಾರೆ’ ಎಂದರು.
‘ಹಿಂಜರಿಕೆ ಬಿಟ್ಟು ಪ್ರಯತ್ನಶೀಲರಾಗಿರಿ. ಸತತ ಪ್ರಯತ್ನದಿಂದ ಯಾವುದೇ ಕಾರ್ಯ ಅಸಾಧ್ಯವಲ್ಲ. ಗುರಿ ಇದ್ದಾಗ ಯಶಸ್ಸು ಸಾಧ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷೆ ಮೇಘಾ ಜಿಗಜಿನ್ನಿ ಮಾತನಾಡಿ, ದೇಶದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಲಿಂಗ ಸಮಾನತೆ ಎಂಬುದು ಮಹಿಳೆಯ ಸಮಸ್ಯೆಯಲ್ಲ, ಆರ್ಥಿಕ ಸಮಸ್ಯೆಯಾಗಿದೆ. ಸಮಾಜದಲ್ಲಿ ಸಮಾನತೆ ಹೊಂದಿರುವ ದೇಶ ಬಲವಾದ ದೇಶ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಗುಳೇದ, ಗೌರವಾಧ್ಯಕ್ಷೆ ಶಂಕ್ರಮ್ಮ ಮುಚ್ಚಂಡಿ ಮಾತನಾಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಅಧ್ಯಕ್ಷರಾಗಿರುವ ವಕೀಲ ಎಸ್.ಎಸ್. ಮಿಟ್ಟಲಕೊಡ ಅವರನ್ನು ಸನ್ಮಾನಿಸಲಾಯಿತು. ಯುವ ಸಾಹಿತಿ ಜಾಹ್ನವಿ ವಾಲಿ ಹಾಗೂ ಜಿಲ್ಲೆಯ ಪ್ರಥಮ ಅಗ್ನಿವೀರರಾಗಿ ನೌಕಾಪಡೆ ಸೇರಿರುವ ಸಹನಾ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೀಲವಂತರ, ಯುವ ಘಟಕದ ಅಧ್ಯಕ್ಷ ವಿನಯ ನಾವಲಗಿ, ಉಪಾಧ್ಯಕ್ಷ ಸಂಗಮೇಶ ಅಂಗಡಿ, ಕಾರ್ಯದರ್ಶಿ ಮಹಾಂತೇಶ ಜೋಳದ, ಮಹಿಳಾ ಘಟಕದ ಕಾರ್ಯದರ್ಶಿ ಶಿವಲೀಲಾ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.