ರೇಣುಕಾ ಜಯಂತಿ: ಪುರೋಹಿತ ವರ್ಗದ ಆಚರಣೆ (ಪಿ. ರುದ್ರಪ್ಪ ಕುರಕುಂದಿ)

ಜಾತಿ ಪರಿಗಣಿಸದೆ ಹುಟ್ಟು ಲಿಂಗಾಯತರು ಎಲ್ಲರಿಗೂ ಲಿಂಗ ಧರಿಸುವ ಅವಕಾಶ ಮಾಡಿಕೊಡಬೇಕು.

ರಾಯಚೂರು

(ರೇಣುಕಾಚಾರ್ಯ ಜಯಂತಿಗೆ ವಚನ ಮೂರ್ತಿ ಪಿ. ರುದ್ರಪ್ಪ ಕುರಕುಂದಿ ಅವರ ಪ್ರತಿಕ್ರಿಯೆ.)

1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?

ಬಸವರಾಜ ಬೊಮ್ಮಾಯಿ ಅವರ ಸರಕಾರ ಇದ್ದಾಗ ಪುರೋಹಿತ ವರ್ಗ ಈ ಜಯಂತಿ ಆಚರಣೆ ಆದೇಶವನ್ನು ಹೊರಡಿಸಿತು. ನಾನು ಕಳೆದ ಕಳೆದ ಎರಡು ವರ್ಷದಿಂದ ಇತಿಹಾಸವೇ ಇಲ್ಲದ, ಕಲ್ಲಿನಲ್ಲಿ ಜನಿಸಿದರೆಂದು ಹೇಳುವ ಈ ವ್ಯಕ್ತಿಯ ಆಚರಣೆಯನ್ನು ಕೇಳುತ್ತಿದ್ದೇನೆ. ಇದರ ವಿರುದ್ಧ ಹೈಕೋರ್ಟ್ ನಲ್ಲಿ ತಗಾದೆ ಅರ್ಜಿ ಇದೆ.

ಈಗೀಗ ಒಂದು ವರ್ಗದ ಜನ ಮತ್ತು ಕೆಲವು ಮುಗ್ಧ ಜಾತಿವಾದಿಗಳ ಸಹಕಾರದಿಂದ ಇದು ಹೆಚ್ಚುತ್ತಿದೆ.

2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?

ಅಸ್ತಿತ್ವದಲ್ಲಿಯೇ ಇರದ ಒಬ್ಬ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪ್ರಚಾರ ಮಾಡಲಾಗುತ್ತಿದೆ. ಇದರ ಉದ್ಧೇಶ ಬಸವಣ್ಣನವರ ತತ್ವಗಳನ್ನು ಜನರಿಂದ ದೂರ ಇರಿಸಿ, ತಮ್ಮ ಹುಟ್ಟಿನ ಶ್ರೇಷ್ಠತೆಯನ್ನು ಗಟ್ಟಿಗೊಳಿಸುವದು. ಹಿಂದೆ ಸನಾತನಿಗಳು ಮಾಡಿದ್ದು ಈಗ ಲಿಂಗವಂತ ಪುರೋಹಿತರು ಮಾಡುತ್ತಿದ್ದಾರೆ.

3) ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?

ತಾತ್ವಿಕವಾಗಿ ಚಿಂತನೆ ಮಾಡಲು ಆಹ್ವಾನಿಸಿದರೂ ಅವರು ಬರುವದಿಲ್ಲ. ಏಕೆಂದರೆ ಅವರ ಬಳಿ ಸಿದ್ಧಾಂತವೆ ಇಲ್ಲ, ಮತ್ತು ಬೇಕಾದ ಸಾಕ್ಷಿಗಳೆ ಇಲ್ಲ. ಸುಳ್ಳಿನ ಹಂದರದ ಮೇಲೆ ಅವರು ನಡೆಯುತ್ತಿದ್ದಾರೆ.

4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?

ರೇಣುಕರ ಜಯಂತಿಯ ಮೂಲ ಉದ್ದೇಶ: ವೀರಶೈವ ಒಂದು ಧರ್ಮ, ಅದನ್ನು ಬಸವಣ್ಣನವರು ಉದ್ಧರಿಸಿದರು. ಅವರು ಹೊಸ ಧರ್ಮವನ್ನು ಕಟ್ಟಲಿಲ್ಲ. ವೇದ ಆಗಮಗಳಲ್ಲಿ ಇದ್ದುದನ್ನೇ ಕನ್ನಡದಲ್ಲಿ ಹೇಳಿದರು. ಇಷ್ಟಲಿಂಗ ಬಸವಣ್ಣನವರ ಪೂರ್ವದಲ್ಲಿಯೇ ಇತ್ತು, ನಾವು ಶ್ರೇಷ್ಠ ಗುರುಪರಂಪರೆಯವರು, ಎಲ್ಲ ಮಠಗಳಿಗೂ ನಮ್ಮನ್ನು ಹೊರತುಪಡಿಸಿ ಬೇರೆಯವರು ಪೀಠಾಧಿಕಾರಿಗಳು ಆಗಬಾರದು ಮುಂತಾದವುಗಳನ್ನು ಪ್ರತಿಪಾದಿಸುವುದು.

5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?

ಪಂಚ ಪೀಠದವರು ಮತ್ತು ಅವರ ವಂಶದವರು ಇದರ ಪರಿಪಾಲಕರು. ಮತ್ತು ಜಾತಿ ಶ್ರೇಷ್ಠತೆಯ ಅಹಂಗೆ ಒಳಗಾದ ಹುಟ್ಟಿನಿಂದ ಲಿಂಗಾಯತ ಎನಿಸಿಕೊಂಡವರ ಬೆಂಬಲವಿದೆ.

6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?

ಶ್ರೇಷ್ಠ ಬಸವಪ್ರಣೀತ ಲಿಂಗಾಯತ ಧರ್ಮದ ವಾರಸುದಾರರಾದ ಲಿಂಗಾಯತರು ಈ ಸಮುದಾಯದ ಹುನ್ನಾರವನ್ನು ಅರಿಯಬೇಕು. ಬಸವಣ್ಣನವರ ಲಿಂಗತತ್ವವನ್ನು ಅರಿತು, ಲಿಂಗಧರಿಸಿ ಪ್ರಜ್ಞಾವಂತರೆನಿಸಿಕೊಳ್ಳಬೇಕು. ನಮ್ಮದು ಆಗಮೋಕ್ತ ಎಂದು ಕರೆದುಕೊಂಡರೆ ನಮ್ಮನ್ನು ನಾವು ಸಣ್ಣವರನ್ನಾಗಿ ಮಾಡಿಕೊಂಡಂತೆ. ಏಕೆಂದರೆ ಆಗಮಗಳ ಕೊರತೆಯನ್ನು ಬಸವಣ್ಣನವರು ನಿವಾರಿಸಿದ್ದಾರೆ.

ಹರಿ ಹರ ಬ್ರಹ್ಮರಿಗೂ ಅರ್ಥವಾಗದ ಇಷ್ಟಲಿಂಗ ತತ್ವವನ್ನ ಬಸವಣ್ಣನವರು ಜಗತ್ತಿಗೆ ನೀಡಿದ್ದಾರೆ.

ಯಾರು ತಮ್ಮೊಳಗಿನ ಬೆಳಕನ್ನು ಕಾಣಲು ಇಷ್ಟಪಡುತ್ತಾರೋ, ಜಾತಿ ಪರಿಗಣಿಸದೆ ಅವರೆಲ್ಲರಿಗೂ ಲಿಂಗ ಧರಿಸುವ ಅವಕಾಶ ಮಾಡಿಕೊಡಬೇಕು. ಇದು ಇಂದಿನ ಹುಟ್ಟು ಲಿಂಗಾಯತರು ಅನುಸರಿಸಬೇಕಾದ ಅವಶ್ಯಕತೆಯಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FfnvVrZr7jWFggbitEJjky

Share This Article
Leave a comment

Leave a Reply

Your email address will not be published. Required fields are marked *