ಲಿಂಗಾಯತ, ವೀರಶೈವ ಪರಂಪರೆಗಳ ಭಿನ್ನತೆ ಸಾರುವ ಎರಡು ಚಿತ್ರಗಳು
ಸಿಂಧನೂರು
ವೀರಶೈವ ಲಿಂಗಾಯತ ಒಂದೇ, ಅವೆರಡು ಬೇರೆಬೇರೆ ಅಲ್ಲ ಎಂದು ವಾದಿಸುವ ಬಹುತೇಕ ಲಿಂಗಾಯತರು, ಮೇಲಿನ ಈ ಎರಡು ಚಿತ್ರದಲ್ಲಿರುವ ವ್ಯತ್ಯಾಸಗಳನ್ನು ಗಮನಿಸಬೇಕು. ಇದರಿಂದ ವೀರಶೈವ, ಲಿಂಗಾಯತ ಇವೆರಡರ ಮಧ್ಯೆ ಇರುವ ತಾತ್ವಿಕ ಭೇದ, ಆಚರಣೆ ಭೇದ, ಪರಿಣಾಮಗಳ ಭೇದವನ್ನು ಅರಿಯಲು ಸಾಧ್ಯವಾಗುತ್ತದೆ.
ಲಿಂಗಾಯತರು, ವೀರಶೈವರು ಯಾರು?
ಲಿಂಗಾಯತರೆನಿಸಿಕೊಂಡ ಸಮುದಾಯ ಬಸವ ಪೂರ್ವದಲ್ಲಿ ಶೂದ್ರರು ಎಂಬ ಹಣೆಪಟ್ಟಿ ಹೊತ್ತವರು. ಇವರಿಗೆ ಜನಿವಾರ ಧರಿಸಿದ ಆಚಾರ್ಯರು ಗುರುಗಳು. ಆ ಗುರುಗಳ ಹಿಡಿತದಿಂದ ಹೊರಬಂದು ಬಸವಣ್ಣನವರ “ಸ್ವಯಾಧ್ವೈತ” ಸಿದ್ದಂತವನ್ನು ನಂಬಿ ಅವರ ಅನುಯಾಯಿಗಳಾಗಿ ಲಿಂಗಾಯತರಾದರು. ಆದರೆ ಮುಂದೆ ಶ್ರೇಷ್ಠವಾದ ಆ ಆಚರಣಾ ನೆಲೆಯನ್ನು ಕಾಪಾಡಿಕೊಳ್ಳಲು ಅವರಿಗೆ ಸಾಧ್ಯವಾಗದೆ ಹೋಯಿತು.
ಬ್ರಾಹ್ಮಣ ಪುರೋಹಿತಶಾಯಿಯ ಭಾಗವಾದ ಆಂಧ್ರದ ಜಂಗಮರನ್ನು ಮೈಸೂರು ಅರಸರ ಕಾಲದಲ್ಲಿ, ಶಿರಚ್ಚೇದನ ಮಾಡಲ್ಪಟ್ಟ ಲಿಂಗಾಯತ ಸ್ವಾಮಿಗಳ ಜಾಗಕ್ಕೆ ನೇಮಿಸಲಾಯಿತು. ಶೈವ ಮಾರ್ಗದ ಚತುರಪೀಠಗಳು ಶಿವಗಂಗೆಯ ಬೆಟ್ಟದಲ್ಲಿ ಸಭೆಮಾಡಿ, ಐದನೇಯ ಪೀಠ ಸ್ಥಾಪನೆ ಮಾಡಿಕೊಂಡು, ಹಳ್ಳಿಗಳಲ್ಲಿನ ಬಸವಪ್ರಣೀತ ಚರಜಂಗಮರ ಹಿರೇಮಠಗಳನ್ನು ಐದು ಪೀಠಗಳಲ್ಲಿ ಭಾಗ ಮಾಡಿಕೊಂಡು ಇಷ್ಟಲಿಂಗ ಆಚರಣೆಗಳ ಜೊತೆ ಜೊತೆಗೆ ಶೈವದ ವೈದಿಕಗಳನ್ನು ತೂರಿಸಿದರು.
ಇಂದಿನ ಅದ್ವಾನಕ್ಕೆ, ತಪ್ಪು ಕಲ್ಪನೆಗಳಿಗೆ ಇದೇ ಬಹುದೊಡ್ಡ ಕಾರಣವಾಗಿ ಬಸವತತ್ವಕ್ಕೆ ಮಾರಕವಾಗಿ ಪರಿಣಮಿಸಿತು.

ಹುಟ್ಟು, ಜಾತಿ ಮೇಲಾಯಿತು
ಬಸವಣ್ಣನವರಿಂದ ಪಡೆದ ಸಾಮಾಜಿಕ ಘನತೆ, ಧಾರ್ಮಿಕ ಹಿರಿಮೆ ಉಳಿಸಿಕೊಳ್ಳುವುದಕ್ಕಿಂತ ಬ್ರಾಹ್ಮಣರಷ್ಟೇ ಪವಿತ್ರರು ಎಂದು ಪ್ರತಿಪಾದಿಸುವುದೇ ಲಿಂಗಾಯತ ಮುಖ್ಯವಾಗಿ ಪಂಚಪೀಠದ ಸ್ವಾಮಿಗಳು ತಮ್ಮ ಗುರುಗಳು ಎಂದು ಆರಾಧಿಸತೊಡಗಿದರು. ಇದನ್ನು ಬಂಡವಾಳ ಮಾಡಿಕೊಂಡ ಪೀಠಗಳು ಹುಟ್ಟಿನಿಂದಲೇ ನಾವು ಶ್ರೇಷ್ಠ ಎಂದು ಬಿಂಬಿಸಿಕೊಂಡು ಭಕ್ತರ ತಲೆಯ ಮೇಲೆ ಕಾಲಿಟ್ಟು ಆಶೀರ್ವಾದ ಮಾಡಲು ಪ್ರಾರಂಭಿಸಿದರು. ಬಸವಣ್ಣನವರು ಬೋಧಿಸಿದ್ದ ಸೃಷ್ಟಿ ಆಧಾರಿತ “ಗುರುತತ್ವ” ಜಾತಿಯಾಗಿ ಪರಿವರ್ತನೆಯಾಯಿತು.
ಲಿಂಗಾಯತಕ್ಕೆ ಆಚರಣೆ ಮುಖ್ಯವಾದರೆ ವೀರಶೈವಕ್ಕೆ ಆಚರಣೆಗಿಂತ ಹುಟ್ಟು ಮುಖ್ಯ. ನೀನು ಹೇಗೆ ಜೀವನ ನಡೆಸುತ್ತಿರುವೆ?, ನಿನ್ನ ಬದುಕಿನ ಮಾರ್ಗ ಯಾವುದು? ಎನ್ನುವುದನ್ನು ಅದು ಪ್ರಶ್ನೆ ಮಾಡುವದಿಲ್ಲ, ಅದು ನೋಡುವದು ನೀನು ಯಾವ ತಂದೆ ತಾಯಿಗಳಿಂದ ಜನಿಸಿ ಬಂದೆ ಎನ್ನುವದು.
ವೀರಶೈವದ ಗುರುಗಳು ಎನಿಸಿಕೊಂಡವರು ಪ್ರತಿಪಾದನೆ ಮಾಡುವದು ಹುಟ್ಟಿನ ಶ್ರೇಷ್ಠತೆಯನ್ನು. ನಾವು ಹುಟ್ಟಿನಿಂದ ಗುರು ಪರಂಪರೆಯ ತಂದೆ ತಾಯಿಗಳಿಂದ ಬಂದಿರುವುದರಿಂದ ನಾವು ಹೇಗೆ ಇರಲಿ, ನಮ್ಮ ನಡುವಳಿಕೆ, ಆಚಾರ ವಿಚಾರ, ಜ್ಞಾನ, ಅಧ್ಯಾತ್ಮ ತಿಳುವಳಿಕೆ ಹೇಗೆ ಇರಲಿ ನಾವು ಗುರುಗಳಾಗಳು ಅರ್ಹರು ಎನ್ನುವದು. ಹಾಗಾಗಿ ಹತ್ತು ವರ್ಷ ವಯಸ್ಸಿಗಿಂತ ಕಡಿಮೆ ಇದ್ದವ ಜಾತಿ ಜಂಗಮ ಬಾಲಕನಿಗೆ ತೊಂಬತ್ತು ವರ್ಷ ವಯಸ್ಸು ಮಾಗಿದ ವ್ಯಕ್ತಿಯೂ ಕಾಲಿಗೆ ಬೀಳುವಂತಹ ಆಚರಣೆಗಳನ್ನು ನೀಡಲಾಯಿತು. ನಮ್ಮ ಪಾದಸ್ಪರ್ಶ ಮಾಡಿದರೆ ಭಕ್ತರ ಪಾಪಗಳೆಲ್ಲ ನಾಶವಾಗಿ, ಬದುಕಿನಲ್ಲಿ ಸುಖ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯನ್ನು ಸ್ಟಿರಗೊಳಿಸಲಾಯಿತು.
ಮೇಲಿನ ಚಿತ್ರದಲ್ಲಿ ಒಮ್ಮೆ ನೋಡಿ, 90 ವರ್ಷಕ್ಕೂ ಹೆಚ್ಚು ಜೀವನಾನುಭವ ಹೊಂದಿದ ಶಾಮನೂರ ಶಿವಶಂಕರಪ್ಪ ಅವರ ಹಣೆಯ ಬ್ರು ಮಧ್ಯಕ್ಕೆ ರಂಭಾಪುರಿ ಸ್ವಾಮೀಜಿಯವರ ಕಾಲಿನ ಬೆರಳು ಮುಟ್ಟಿಸಿದಾಗ, ಪುತ್ರ ಸಚಿವ ಮಲ್ಲಿಕಾರ್ಜುನ, ಸೊಸೆ ಸಂಸದೆ ಪ್ರಭಾವತಿ ಅವರ ಮುಖದಲ್ಲಿ ಕಂಡ ಧನ್ಯತಾಭಾವ ನೋಡಿ. ಹಾಗೆಯೇ ರಂಭಾಪುರಿ ಸ್ವಾಮೀಜಿಯವರ ಮುಖ್ಯದಲ್ಲಿನ ಗತ್ತು ನೋಡಿ. ಇಂತಹ ಅನಾಚಾರಗಳನ್ನು ನೋಡಿಯೇ ಶರಣರು “ಕುರುಡ ಕುರುಡನಿಗೆ ದಾರಿ ತೋರಿದಂತೆ” ಎಂದದ್ದು.
ಈ ಆಚರಣೆಯ ಬಳುವಳಿ ಎಲ್ಲಿಂದ ಬಂದಿತು ಎನ್ನುವದನ್ನ ಸ್ವಲ್ಪ ವಿಶ್ಲೇಷಣೆ ಮಾಡಬೇಕಾದುದು ಇಂದಿನ ಅಗತ್ಯ…
ಪೂರ್ವ ಸನಾತನ ಪದ್ಧತಿ
ಪೂರ್ವ ಸನಾತನ ಪದ್ಧತಿಯಲ್ಲಿ, ಲಿಂಗಾಯತ, ವೀರಶೈವ, ಶೈವ ಹುಟ್ಟದ ಮುನ್ನ ಬ್ರಾಹ್ಮಣನೇ ಸಾಕಾರದೈವ ಎಂದು ನಂಬಿಸಲಾಗಿತ್ತು. ದೇವರು ನಿರಾಕಾರ, ಆ ನಿರಾಕಾರ ಸ್ವರೂಪದ ಸಾಕಾರರೂಪವೇ ಬ್ರಾಹ್ಮಣ. ಆ ಬ್ರಾಹ್ಮಣ ವಂಶದಲ್ಲಿ ಹುಟ್ಟಿದವರೆಲ್ಲ ದೇವರ ಸಮಾನ ಎನ್ನುವ ಭ್ರಮೆಯನ್ನು ಭಾರತದ ಧಾರ್ಮಿಕ ಇತಿಹಾಸದಲ್ಲಿ ಗಟ್ಟಿಗೊಳಿಸಲಾಗಿತ್ತು. ಇದನ್ನು ಬಹುಕಾಲ ಉಳಿಸಿಕೊಂಡು ಬಂದ ಆ ವರ್ಗ ಈ ನಂಬಿಕೆಯನ್ನು ಶೋಷಣಾ ಮಾರ್ಗವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದಕ್ಕೆ ವಿರುದ್ಧವಾಗಿ ನೈಜ ಸೃಷ್ಟಿತತ್ವವನ್ನು ಹೇಳಲು ಪ್ರಯತ್ನಿಸಿದ ಬುದ್ಧ, ಮಹಾವೀರ, ಬಸವ, ಅಲ್ಲಮ, ಗುರುನಾನಕ, ಕಬೀರ, ರವಿದಾಸ ಅಂಥವರ ತತ್ವಗಳು ಜನಮಾನಸಕ್ಕೆ ಮುಟ್ಟದಂತೆ ನೋಡಿಕೊಳ್ಳುವ ಸತತ ಪ್ರಯತ್ನ ಆ ವರ್ಗದಿಂದ ಇತಿಹಾಸದಲ್ಲಿ ಗೊತ್ತಿಲ್ಲದಂತೆ ನಡೆಯಿತು.
ಮನುಸ್ಮೃತಿಯನ್ನು ರಚಿಸಿ ಶ್ರೇಣಿಕೃತ ಜಾತಿವ್ಯವಸ್ಥೆ, ದೇವನಿರ್ಮಿತ, ಅದು ದೇವವಾಣಿ ಎಂದು ಪ್ರಚಾರಮಾಡಲಾಯಿತು. ಅದರ ನೆರಳಲ್ಲಿ ಇಂದಿಗೂ ಧಾರ್ಮಿಕ ಹಿರಿತನ, ಎಲ್ಲವೂ ಒಂದು ವರ್ಗದ ಹಿಡಿತದಲ್ಲಿ ಉಳಿದುಕೊಂಡಿದೆ. ಇದನ್ನು ಯಾವ ಪ್ರಜ್ಞಾವಂತರು ಒಪ್ಪಲಾರರು. ಈ ರೀತಿ ನಂಬಿ ಹಾಳಾದ ಘಟಾನುಘಟಿ ಭಕ್ತರ ಬಗ್ಗೆ ಶರಣ ಉರಿಲಿಂಗದೇವ ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋ
ವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.
ಅದಂತಿರಲಿ,
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.
ಮೈಲಾರನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.
ಭೈರವನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ಕರುಳ ಬೆರಳ ಕಡಿದಿಕ್ಕಿ, ಬಾಹಿರನಾದನು.
ಮಾಯಿರಾಣಿಯೇ ದೈವವೆಂದು ಆರಾಧಿಸಿದಾತನು
ಕೊರಳಿಗೆ ಕವಡಿಯ ಕಟ್ಟಿ, ತಲೆಯಲ್ಲಿ ಕೆರಹ ಹೊತ್ತು,
ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ.
ಈ ಬಿನುಗು ದೈವಂಗಳ ಭಕ್ತಿ ಬಣಗು ನಾಯಿ ಒಣಗಿದೆಲುವ ಕಚ್ಚಿಕೊಂಡು
ಕಂಡ ಕಂಡೆಡೆಗೆ ಹರಿದಂತಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಇಷ್ಟಲಿಂಗಕ್ಕೆ ಕಾಯದ ಕೈಯಿಂದ ಮುಟ್ಟಿ
ಅಷ್ಟವಿಧಾರ್ಚನೆ, ಷೋಡಶೋಪಚಾರ
ಮೈದೋರಿದಲ್ಲದೆ ಆಕಾರನಾಸ್ತಿಯಾಗದು.
ಬೆರಣಿಯಲ್ಲಿ ಅಗ್ನಿ ಮೈದೋರದಿದ್ದಡೆ ಆಕಾರನಾಸ್ತಿಯಾಗದು.
ಲಿಂಗದಲ್ಲಿದ್ದ ಜವನಿಕೆ ಬಗೆದೆಗೆದಡೆ ಕಾಯವಿಲ್ಲದೆ ಪ್ರಾಣದ ಪರಿ ನಷ್ಟ,
ಜ್ಞಾನಾಗ್ನಿಯಿಂದ ಭೋಗ ನಷ್ಟ.
ಇದು ಕಾರಣ,
ನಿಮ್ಮ ಶರಣರ ಮರ್ತ್ಯರೆಂದಡೆ ನರಕ ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ….
(ಸಂಪುಟ 6 ವಚನ ಸಂಖ್ಯೆ 2.)
ವಿಭಿನ್ನ ಪರಂಪರೆಗಳು
ಇನ್ನೊಂದು ಚಿತ್ರದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು, ಅದೇ ಶಾಮನೂರು ಶಿವಶಂಕ್ರಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವರನ್ನು ಭೇಟಿ ಮಾಡಿ, ಕೈಹಿಡಿದುಕೊಂಡು ಸಾಂತ್ವನದ ನುಡಿಗಳ ಮೂಲಕ ಶುಭಾಶೀರ್ವಾದ ಮಾಡಿದ ರೀತಿ, ರಂಭಾಪುರಿ ಶ್ರೀಯವರ ನಡೆಗಿಂತ ಭಿನ್ನವಾಗಿ ಕಂಡು ಬಂದದ್ದು ಆಶ್ಚರ್ಯಕರವಲ್ಲವೇ?.

ಇಬ್ಬರು ಗುರು ಸ್ಥಾನದಲ್ಲಿ ಇರುವವರೇ, ಭಕ್ತ ಒಬ್ಬರೇ, ಇದು ಲಿಂಗಾಯತದ ಆಚರಣೆ ಎಂದು ಎಲ್ಲರೂ ಹೇಳುವದು. ಹಾಗಾದರೆ ಲಿಂಗಾಯತ ಏನನ್ನು ಪ್ರತಿಪಾದಿಸುತ್ತದೆ?
ಲಿಂಗಾಯತದ ಧರ್ಮದ ವಿಶೇಷತೆ ಏನು? ಸೃಷ್ಟಿಯ ರಚನೆಯಲ್ಲಿ ಮಾನವ ಜೀವಿ ವಿಶೇಷ ನೆಲೆಯನ್ನು ಹೊಂದಿದ ಜೀವಿ.
ಪ್ರತಿಮಾನವನ ಕಾಯದಲ್ಲಿ ಪರವಸ್ತು ಸಾಕಾರದ ನೆಲೆಯನ್ನು ಬ್ರುಮಧ್ಯದಲ್ಲಿ ಅಡಗಿಸಿಟ್ಟಿದೆ. ಹಾಗಾಗಿ ಮಾನವನ ತಲೆಗೆ, ಹಣೆಗೆ, ಬ್ರು ಮಧ್ಯಕ್ಕೆ ವಿಶೇಷ ಗೌರವ ಸ್ಥಾನ. ಕಾರಣವೇನೆಂದರೆ ಸೃಷ್ಟಿಕರ್ತ ಪರವಸ್ತುವೆ ಅಲ್ಲಿ ನೆಲೆಸಿದೆ ಎನ್ನುವ ಕಾರಣಕ್ಕಾಗಿ.
ಲಿಂಗಾಯತದಲ್ಲಿ ಗುರುಗಳು ಲಿಂಗದೀಕ್ಷೆ ಮಾಡುವಾಗಲೂ ತಲೆಯ ಮೇಲೆ ಹಸ್ತಸ್ಪರ್ಶ ಮಾಡುತ್ತಾರೆಯೇ ಹೊರತು ಕಾಲನ್ನು ಇಡುವದಿಲ್ಲ. ಪ್ರತಿ ಜೀವಿಯಲ್ಲಿಯೂ ಶಿವನ ಇರುವಿಕೆಯನ್ನು ಗುರುತಿಸಿ ಗೌರವ ಕೊಡುವ ಧರ್ಮ ಲಿಂಗಾಯತ. ಇದನ್ನರಿತ ಪಂಡಿತಾರಾಧ್ಯರು ಹಿರಿಮೆ ಪ್ರದರ್ಶನ ಮಾಡದೇ ಕೈಹಿಡಿದು ತಮ್ಮ ಸರಿಸಮನಾಗಿ ಕಂಡದ್ದು.
ಸ್ವ-ಸ್ವರೂಪವೇ ದೇವ ಸ್ವರೂಪ
ಲಿಂಗಾಯತದ ಮತ್ತೊಂದು ವಿಶೇಷತೆ ಎಂದರೆ ತನ್ನ ಸ್ವ-ಸ್ವರೂಪ ದರ್ಶನದಲ್ಲಿಯೇ ದೇವ ಸ್ವರೂಪವನ್ನು ಕಾಣುವದು. ತನ್ನನ್ನು ಬಿಟ್ಟು ಅನ್ಯದೈವವನ್ನು ಆರಾಧಿಸುವದು ಲಿಂಗಾಯತದ ಮಾರ್ಗವಲ್ಲ. ಹಾಗಾಗಿ ಗುರುಗಳಾದವರು ಶಿಷ್ಯನನ್ನು ತಮ್ಮ ಸಮನಾಗಿ ನೋಡುತ್ತಾರೆ. ಆತನಿಗೆ ಶಿವ ಸ್ವರೂಪವನ್ನು ನೋಡುವ ಶಕ್ತಿ ಪಡೆಯಲು ಇಷ್ಟಲಿಂಗ ಧಾರಣೆ ಮಾಡುತ್ತಾರೆ. ಇಷ್ಟೊಂದು ಅಜಗಜಾಂತರ ವ್ಯತ್ಯಾಸ ಇರುವಾಗ ವೀರಶೈವ, ಲಿಂಗಾಯತ ಎರಡು ಒಂದೇ ಎನ್ನುವದು ನಗೆಪಾಟಲಲ್ಲವೇ?. ಸಿದ್ದಾಂತ ಸಂಪೂರ್ಣವಾಗಿ ವೈರುಧ್ಯದಿಂದ ಕೂಡಿದೆ. ಲಿಂಗಾಯತದಲ್ಲಿ ಶಿವಬೆಳಗನ್ನು ಅಂತರಂಗಕ್ಕೆ ವೇಧಿಸಿಕೊಳ್ಳುವ ಮಾರ್ಗದ ಮೂಲಕ ಸಾವನ್ನು ಮೀರುವ ವಿಶಿಷ್ಟ ಸಾಧನಮಾರ್ಗ.
ಇದಕ್ಕೆ ಆಕರ್ಷಿತರಾಗಿ, ನಂಬಿ, ವೀರಶೈವದ ಮೂಲದಿಂದ ಶ್ರೀಶೈಲ ಪಂಡಿತಾರಾಧ್ಯರು, ವೈಷ್ಣವ ಪಂಥದ ಗುಪ್ತ ಮಂಚಣ್ಣ, ಮಧುವರಸ, ಲಕ್ಷ್ಮಮ್ಮ, ನಾಥಪಂಥದ ಅಲ್ಲಮ, ಸಿದ್ಧರಾಮ, ಸೂಫಿ ಶರಣ ಮರುಳಶಂಕರದೇವ, ಶೈವಪಂಥದ ಮೋಳಿಗೆ ಮಾರಯ್ಯ, ಮಹಾದೇವಮ್ಮ, ಏನು ಅರಿಯದ ಮುಗ್ಧ ಕಾಯಕಜೀವಿಗಳು ಬಂದು ಲಿಂಗಾಯತದ ಬೆಳವಣಿಗೆಗೆ ಕಾರಣರಾದದ್ದು ದೊಡ್ಡ ಇತಿಹಾಸ. ಇಷ್ಟು ಸಾಕಲ್ಲವೇ ಲಿಂಗಾಯತದ ಶ್ರೇಷ್ಠತೆ ಹೇಳಲು?
ಈ ಲೇಖನವನ್ನು ತಾವು ಫೇಸ್ ಬುಕ್ ನಲ್ಲಿ ಕಳುಹಿಸಿರಿ, ಬಹು ಜನರಿಗೆ ತಲುಪುವದು
ಇಲ್ಲಿ ನಾವು ನೋಡುವದು ಭಿನ್ನವಾದ ನಡವಳಿಗೆ. ಈ ಪಂಚಾಚಾರ್ಯರು ಸಮಾಜದ ತಲೆಯಲ್ಲಿ ವಿಷವನ್ನು ಬಿತ್ತಿ ತಾವು ಮೇಲಿನವರೆಂದು ಪ್ರತಿಫಡೀಸಲು ಹೆಣಗುತ್ತಾರೆ. ನಾವು ಜಾಗ್ರತರಾಗಿ ನಿಲ್ಲಬೇಕು.