ಶಿವಮೊಗ್ಗ
ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ
1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು.


ನಗರದ ಅಲ್ಲಮಪ್ರಭು ಮೈದಾನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ನಡೆದ ಸಾವಿರದ ವಚನ ಕಾರ್ಯಕ್ರಮ ಸಾವಿರಾರು ಜನ ಶೋತೃಗಳನ್ನು ಸೆಳೆಯಿತು. ಕಾರ್ಯಕ್ರಮದಲ್ಲಿ ಸಿ.ಅಶ್ವಥ್ ಅವರು ರಾಗ ಸಂಯೋಜಿಸಿದ್ದ ವಚನಗಳನ್ನು ಹಾಡಲಾಯಿತು. ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿ ವಚನದ ಅರ್ಥ ತಿಳಿಸಿದರು.

ಇದಕ್ಕು ಮುನ್ನ ಬಸವಣ್ಣನವರ ಪ್ರತಿಮೆಗೆ ವಿವಿಧ ಮಠಾಧೀಶರು, ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಹಾಡಿದ ವಚನಗಳ ಪಠ್ಯ ಮತ್ತು ಭಾವಾರ್ಥ ಇರುವ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಲಾಯಿತು. ಪಹಲ್ಗಾಮ್ ದಾಳಿಯಲ್ಲಿ ಮೃತರಾದವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.


ಸತ್ಯಕ್ಕ, ಅಜಗಣ್ಣ, ಪೋಡ ಶಿವಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದ 40 ಶಿವಶರಣರನ್ನು ಕೊಟ್ಟ ಶಿವಮೊಗ್ಗದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆದಿರುವುದು ಹೆಮ್ಮೆಯ ಸಾಧನೆ ಎಂದು ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ ಹೇಳಿದರು.

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಹಾರನಹಳ್ಳಿ, ಜಡೆ ಮಠ ಸೇರಿದಂತೆ ಮಲೆನಾಡು ಮಠಾಧೀಶರ ಪರಿಷತ್ತಿನ ಸ್ವಾಮೀಜಿಗಳು, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೋ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರೇಣುಕಾಚಾರ್ಯ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಪ್ರಮುಖರಾದ ಹೆಚ್.ಆರ್.ಬಸವರಾಜಪ್ಪ, ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಸೇರಿ ಹಲವರು ಇದ್ದರು.