ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು

ಶರಣ ವೀರಭದ್ರಪ್ಪ ಭಾವಿತಾಳ ಮತ್ತು ಶರಣೆ ಶಾರದಮ್ಮ ಭಾವಿತಾಳ ಅವರು ತಮ್ಮ ಪುತ್ರನ ಕಲ್ಯಾಣ ಮಹೋತ್ಸವವನ್ನು ಶರಣ ಸಂಸ್ಕೃತಿಯ ಅನುಸಾರವಾಗಿ ನೆರವೇರಿಸಿದರು.

ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಎಲ್ಲಾ ಬಸವಪರ ಸಂಘಟನೆಗಳ ಸಹಕಾರದಲ್ಲಿ
ನಡೆದ ಸಮಾರಂಭದಲ್ಲಿ ಬಂಧು ಮಿತ್ರರು ಹಾಗೂ ಊರ ಜನರೆಲ್ಲರೂ ತುಂಬು ಹೃದಯದಿಂದ ಭಾಗವಹಿಸಿ ಶರಣ ಸಂಸ್ಕೃತಿಯ ಸೊಬಗನ್ನು ಸವಿದರು.

ಈ ತಿಂಗಳ 4ರಂದು ಬೆಳಿಗ್ಗೆ ವರನ ಸ್ವಗೃಹ ಬಸವಪುರದಲ್ಲಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆದು, ಇಷ್ಟಲಿಂಗದ ಅವಶ್ಯಕತೆ ಮತ್ತು ಪರಿಣಾಮಗಳ ಕುರಿತು ಪಿ. ರುದ್ರಪ್ಪ, ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಜಿಲ್ಲಾ ಘಟಕ, ಅನುಭಾವ ಹಂಚಿಕೊಂಡರು.

ಬೈಲಹೊಂಗಲದ ಶರಣ ಶಿವಾನಂದ ಅರಭಾವಿ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕೆಲವರು ಹೊಸದಾಗಿ ಇಷ್ಟಲಿಂಗ ಧಾರಣೆ ಮಾಡಿಕೊಂಡರು.

11 ಗಂಟೆಗೆ ವರನ ಸ್ವಗೃಹದಲ್ಲಿ ಗುರುಲಿಂಗಜಂಗಮ ಪೂಜೆ ಪ್ರಯುಕ್ತ ಮದುಮಗನ ಸಂಸ್ಕಾರ ಕಾರ್ಯಕ್ರಮ ನೆರವೇರಿತು. ಪಿ. ಬಸವರಾಜ ಕುರುಕುಂದ, ವೀರಯ್ಯಸ್ವಾಮಿ ಚಿತ್ರಾಲಿ, ಬಸನಗೌಡ ಬಸಾಪುರ, ಅಮರೇಶ ಗುರಿಕಾರ ಕ್ರಿಯಾ ಮೂರ್ತಿಗಳಾಗಿ ಕಾರ್ಯಕ್ರಮ ನೆರವೇರಿಸಿದರು.

ಸಾಯಂಕಾಲ 6 ಗಂಟೆಗೆ ಸಿಂಧನೂರಿನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ವಧುವರರ ಬಸವ ಸಮ್ಮತಿ ಕಾರ್ಯಕ್ರಮ ಜರುಗಿತು. ಬೈಲಹೊಂಗಲದ ಶರಣ ಶಿವಾನಂದ ಅರಭಾವಿ ಅನುಭಾವ ನೀಡಿ, ಕ್ರಿಯಾಮೂರ್ತಿಗಳಾಗಿ ಕಾರ್ಯ ನಡೆಸಿಕೊಟ್ಟರು.

ಸಿದ್ಧಾರಾಮ ಜಂಬಲದಿನ್ನಿಯವರ ಮೊಮ್ಮಗ ಶರಣ ಅಮರೇಶ ಕೊಟ್ನಕಲ್ ವಚನ ಸಂಗೀತ ನಡೆಸಿಕೊಟ್ಟರು. 800ಕ್ಕೂ ಹೆಚ್ಚು ಜನ ಕಾರ್ಯಕ್ರಮವನ್ನು ವೀಕ್ಷಿಸಿದರು.

5ರಂದು ಬಸವಪುರದಲ್ಲಿ ಬೆಳಿಗ್ಗೆ 6.30 ರಿಂದ 7.30ರವರೆಗೆ ಮಾಂಗಲ್ಯಧಾರಣ ಮತ್ತು ರುದ್ರಾಕ್ಷಿಧಾರಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಯದ್ದಲದೊಡ್ಡಿ ವಿರಕ್ತಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದು, ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರು ಲಿಂಗಾಯತ ತತ್ವದಡಿ ಜರುಗಿದ ಮಾಂಗಲ್ಯ ಧಾರಣ ಕಾರ್ಯಕ್ರಮ ವೀಕ್ಷಿಸಿ, ಇಂತಹುದೆ ಕಾರ್ಯಕ್ರಮ ಎಲ್ಲ ಲಿಂಗಾಯತ ಧರ್ಮಿಯರ ಮನೆಯಲ್ಲಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಕೇಳಿಬಂದಿತು.

ಸಾಯಂಕಾಲ 6.00 ಗಂಟೆಗೆ ಜಂಗಮ ಸಾಕ್ಷಿಯಾಗಿ ಶುಭಾರತಿ ಕಾರ್ಯಕ್ರಮ ಸಿಂಧನೂರಿನ ರಾಯಲ್ ಫಂಕ್ಷನ್ ಹಾಲ್ ನಲ್ಲಿ ನಡೆಯಿತು. ಯದ್ದಲದೊಡ್ಡಿ ವಿರಕ್ತ ಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಂಗೀತಗಾರರು ವಚನ ಪ್ರಾರ್ಥನೆ ನಡೆಸಿದರು. ನಂತರ ವರನ ತಂದೆ ವೀರಭದ್ರಪ್ಪ ಭಾವಿತಾಲ್ ಸ್ವಾಗತ ಕೋರಿದರು. ಫಂಕ್ಷನ್ ಹಾಲ್ ನ ಮಾಲೀಕರಾದ ನಬಿಸಾಬ್ ವಕೀಲರು ಕಾರ್ಯಕ್ರಮದಲ್ಲಿನ ಅತಿಥಿಗಳಿಗೆ ಸಸಿಗಳನ್ನು ನೀಡುವುದರ ಮೂಲಕ ಪರಿಸರ ಪ್ರೇಮ, ಜಾಗೃತಿ ಮೂಡಿಸಿದ್ದು ವಿಶೇಷವೆನಿಸಿತು.

ಬೈಲಹೊಂಗಲದ ಶರಣ ಮಂಜುನಾಥ ನೇಗಿನಾಳ, “ಸಂಸಾರ ಜೀವನ ಸದ್ಗತಿಗೆ ಮೂಲ” ಎಂಬ ವಿಷಯದ ಕುರಿತು ಅನುಭಾವ ನೀಡಿದರು. ನಂತರ ಪಿ. ರುದ್ರಪ್ಪನವರು ದಂಪತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಯದ್ದಲದೊಡ್ಡಿ ವಿರಕ್ತಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕ್ರಿಯಾ ಮೂರ್ತಿಗಳಾಗಿ ಶಿವಾನಂದ ಅರಭಾವಿ, ಪಿ. ಬಸವರಾಜ, ವೀರಯ್ಯ ಚಿತ್ರಾಲಿ, ಅಮರೇಶ್ ಗುರಿಕಾರ, ಮುದ್ದನಗೌಡ ಬಸಾಪುರ, ಪಿ. ಲಕ್ಷ್ಮಿದೇವಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಾವಿರಕ್ಕು ಹೆಚ್ಚು ಜನ ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿ, ದಂಪತಿಗಳಿಗೆ ಶುಭಕೋರಿದರು. ಮತ್ತು ವಚನಗಳ ಬಗ್ಗೆ ಜನಮಾನಸದಲ್ಲಿರುವ ಅಭಿಮಾನವನ್ನು ಸೂಚಿಸುವಂತಿತ್ತು.

ಶರಣು ಸಂಪರ್ಪಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ನೆರೆದವರು ತಟ್ಟೆಯಲ್ಲಿ ಪ್ರಸಾದವನ್ನು ಚೆಲ್ಲದೆ ಸ್ವೀಕರಿಸಬೇಕು, ಪ್ರಸಾದವೇ ಪರಮಾತ್ಮ ಎನ್ನುವ ಸಂದೇಶವನ್ನು ನಿರೂಪಣೆಕಾರರು ಸಮರ್ಥವಾಗಿ ಮುಟ್ಟಿಸಿದರು. ಅಮರೇಶ ಕೊಟ್ನಕಲ್ ಅವರ ವಚನ ಸಂಗೀತ ಬಹಳಷ್ಟು ಮುದನೀಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *