ಶ್ರೀ ಸದಾಶಿವಾನಂದ ಸ್ವಾಮಿಗಳೆ
ವಚನಗಳು ಜಗತ್ತಿನ ಮೊದಲ ವಿದ್ರೋಹಿ ಬಂಡಾಯ ಸಾಹಿತ್ಯ. ಇದನ್ನು ನೀವು ಸನಾತನ ವ್ಯವಸ್ಥೆಯ ತೆಕ್ಕೆಗೆ ನೀಡುತ್ತಿರುವುದು ಹಾಸ್ಯಾಸ್ಪದ ಮತ್ತು ಖಂಡನೀಯ.
ಇದು ನಿಮ್ಮ ಬೌದ್ಧಿಕ ದಿವಾಳಿಯೋ ಅಥವಾ ಅಗ್ರಹಾರದ ಆಮಿಷ ಅಹವಾಲೋ? ಕಾಣದ ಕೈಗಳ ಗೊಂಬೆಯಾಗಿ ನೀವು ಖೋಟಾ, ಪ್ರಕ್ಷಿಪ್ತ ,ಹೆಚ್ಚಿನ ವಚನಗಳನ್ನೇ ಆಯ್ದುಕೊಂಡು ಮಾತನಾಡುತ್ತಿದೀರಿ.
ನಿಮ್ಮ ವ್ಯಂಗ್ಯ, ಕುಹುಕುತನದ ಮಾತುಗಳು ಬಸವಾಭಿಮಾನಿಗಳಿಗೆ ಅಚ್ಚರಿ ಮತ್ತು ನೋವು ತಂದಿದೆ. ಮೇಲಿಂದ ಮೇಲೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರನ್ನು ಮುಂದೆ ಮಾಡಿ ಅವರು ಐಕ್ಯವಾದ ಮೇಲೆ ನಿಮ್ಮ ಇಂತಹ ಮಾತುಗಳು ಕೇಳುತ್ತಿರುವುದು ಕನ್ನಡಿಗರ ದೌರ್ಭಾಗ್ಯವೆಂದೇ ನಂಬಿದ್ದೇನೆ.
1 ಶ್ರೀ ಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಇಂತಹ ಪ್ರಯತ್ನ ಏಕೆ ಮಾಡಲಿಲ್ಲ ?
2 ಬಸವಣ್ಣ ಯಜ್ಞೋಪವೀತವೆಂದು ಜನಿವಾರ ಹರಿದು ಮನೆ ಬಿಟ್ಟು ಹೋದ ಎಂದು ಹರಿಹರ ಬರೆದ ಸಾಲುಗಳು ಸುಳ್ಳೇ ?
3 ಬಸವಣ್ಣ ಮತ್ತು ಶರಣರು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿ ವಿರೋಧಿಸಿದ್ದು ಸುಳ್ಳೇ ?
4 275 ಕೊ ಅಧಿಕ ವಚನಗಳಲ್ಲಿ ವೇದಗಳನ್ನು ಧಿಕ್ಕರಿಸಿದ ವಚನಗಳು ತಮ್ಮ ಗಮನಕ್ಕೆ ಬಂದಿಲ್ಲವೇ ?
5 ಆದಯ್ಯನವರ ಉಲ್ಲೇಖ ಮಾಡಿದ ನೀವು ಅವರ ಇನ್ನೊಂದು ವಚನದಲ್ಲಿ ವೇದಗಳ ಹಿಂದೆ ಹೋಗದಿರು ಶಾಸ್ತ್ರಗಳ ಹಿಂದೆ ಸುಳಿಯದಿರು ಎನ್ನುವುದನ್ನು ನೀವು ನೋಡಿಲ್ಲವೇ ?
6 ಕಾವಿ ಲಾಂಛನಗಳ ಜಡತ್ವವನ್ನು ಖಂಡಿಸಿ ಬರೆದ ನೂರಾರು ವಚನಗಳನ್ನು ನೀವು ಇನ್ನೊಮ್ಮೆ ಓದಿ. ಇದು ದಾಂಪತ್ಯ ಧರ್ಮ, ನಿಮ್ಮ ಹಾಗೆ ಸನ್ಯಾಸ ಧರ್ಮವಲ್ಲ
7 ಅಂಕಿತಗಳಲ್ಲಿ ಬರುವ ಅವರ ಮೂಲ ದೇವರ ನಾಮಗಳನ್ನು ನೀವು ದೇವರೆಂದು ಬಿಂಬಿಸಿರುವುದು ಯಾವ ಸಾಧನೆಗೆ ?
8 ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎನ್ನುವ ತತ್ವ ನಿಮಗೆ ತಿಳಿಯದೆ ಹೋಯಿತೇ
9 ಅಷ್ಟಾವರಣ ಪಂಚಾಚಾರಗಳು ಶಿವದಾರವನ್ನು ಗಟ್ಟಿಗೊಳಿಸುವ ವ್ಯವಧಾನವಲ್ಲ. ಅವು ಕಾಯದ ಗುಣಗಳು ಎನ್ನುವ ಚಾಮರಸನ ಸಾಲುಗಳು ನೀವು ಓದಿಲ್ಲವೇ ?
10 ಶೂನ್ಯ ಸಂಪಾದನೆಯ ಕಾಲ ಘಟ್ಟದಲ್ಲಿ ವಚನಗಳು ವಿರೂಪಗೊಂಡವು ಪ್ರಕ್ಷಿಪ್ತವಾದವು ಎನ್ನುವ ಡಾ ಎಂ ಎಂ ಕಲಬುರ್ಗಿ ಗುರುಗಳು ಆದಿಯಾಗಿ ಅನೇಕ ಸಂಶೋಧಕರ ಅಭಿಮತವು ಸುಳ್ಳೇ ?
11 ಅರುಹಿನ ಕುರುಹು ಲಿಂಗ ಉಪಾಧಿಕವಸ್ತು ಅಲ್ಲ ಎನ್ನುವುದು ನಿಮಗೆ ಅರಿಯದೆ ಹೋಯಿತೇ ?
12 ಲಿಂಗಾಯತ ಇದು ಸಮಷ್ಟಿ ಪ್ರಜ್ಞೆ ಹೊಂದಿದ್ದು ಅದನ್ನು ಜಾತಿಗೆ ಸೀಮಿತಗೊಳಿಸುವ ನಿಮ್ಮ ಹೊಲಸು ಬುದ್ಧಿಗೆ ದಿಕ್ಕಾರ
13 ನೀವು ಹೇಳುವ ಗೀತೆ ಭಗವದ್ಗೀತೆ ಅಲ್ಲ, ಅದು ಶಿವ ಗೀತೆ ಎಂದು ಬಸವಣ್ಣ ಆದಿಯಾಗಿ ಅನೇಕ ಶರಣರು ಹೇಳಿದ್ದಾರೆ ಎನ್ನುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ?
14 ಆದಿ ಪುರಾಣವ ಅಸುರರಿಗೆ ಮಾರಿ ಗೀತ ಪುರಾಣವ ಹೋತಿಂಗೆ ಮಾರಿದೆ ಎನ್ನುವಲ್ಲಿ ನಿಮ್ಮ ಭಗವದ್ಗೀತೆಯ ಉಲ್ಲೇಖ ಇರುವುದನ್ನು ಏಕೆ ಮರೆ ಮಾಚಿದ್ದೀರಿ?
15 ಮೇಲೊಂದು ಕೈಲಾಸ, ಅದು ಹಾಳು ಮೊರಡಿ, ಅಲ್ಲಿ ಇರುವ ಶಿವ ಒಬ್ಬ ಹೆಡ್ಡ ಎನ್ನುವ ವಚನ ಓದಿಲ್ಲವೇ ?
16 ಸ್ವರ್ಗ ನರಕ ಪಾಪ ಪುಣ್ಯ ಎನ್ನುವ ಅಸಹ್ಯ ಪದಗಳನ್ನು ತಿರಸ್ಕರಿಸದ ಶರಣರನ್ನು ಇಂದು ವೈದಿಕ ಪರಂಪರೆಗೆ ಸೇರಿಸುವುದು ಯಾವ ನ್ಯಾಯ ?
17 ಶರಣರು ಶಿವ ಪದವನ್ನು ಬಳಸಿದ್ದಾರೆ ನಿಜ. ಆದರೆ ಅದು ನಿಮ್ಮ ಪೌರಾಣಿಕ ಶಿವನಲ್ಲ ಅದು ಚೈತನ್ಯ ಮಂಗಳ ಎನ್ನುವ ಅರ್ಥದಲ್ಲಿ ಎನ್ನುವುದು ನಿಮಗೆ ತಿಳಿಯದೆ ಹೋಯಿತೇ ?
18 ಅಕ್ಕನಾಗಮ್ಮನ ಪ್ರಾಣಲಿಂಗಿ ಪ್ರಸಾದದ ಪ್ರಜ್ಞೆಯನ್ನು ಅತ್ಯಂತ ಕೆಟ್ಟದಾಗಿ ವಿವರಿಸಿದ್ದು ಸರಿಯೇ ?
19 ಕೊನೆಗೆ ಬಸವಣ್ಣನಿಗೆ ಪೆಟ್ಟು ಬಿದ್ದು ಕೂಡಲ ಸಂಗಮಕ್ಕೆ ಬಂದನು ಎನ್ನುವ ನಿಮ್ಮ ಉದ್ದಟತನದ ಮಾತುಗಳಿಗೆ ಕಡಿವಾಣ ಹಾಕಿ
20 ಕಾಮಾಲೆಯಾದವನ ಕಣ್ಣಿಗೆ ಜಗತ್ತು ಹಳದಿ ಕಾಣುವ ಹಾಗೆ ವೈದಿಕ ಕನ್ನಡಕ ಧರಿಸಿದ ನಿಮಗೆ ವಚನ ದರ್ಶನವಾಗುವುದು ಖಂಡಿತ ಸಾಧ್ಯವಿಲ್ಲ
21 ವಿಭೂತಿ ಎಳೆಗಳು ಗಟ್ಟಿಯಾಗಬೇಕು ಎನ್ನುವ ನೀವು ಹಣೆಯ ಮೇಲೆ ಕುಂಕುಮವೇಕೆ ಇಡುತ್ತೀರಿ?
22 ಪಂಚಾಕ್ಷರ ಮಂತ್ರವ ಪಾವನ ಎನ್ನುವ ಮಹಾಪಾತಕನ ಮುಖವ ನೋಡಲಾಗದು ಎಂದು ಬಸವಣ್ಣನವರ ವಚನವನ್ನು ನೀವು ಓದಿಲ್ಲವೇ ?
ಏನೇನೋ ಬರೆದು ಪ್ರಸಿದ್ಧಿ ಪಡೆಯುವ ನಿಮ್ಮ ಅಹಂಕಾರಕ್ಕೆ ಕೊನೆ ಹೇಳಿ. ನಿಮ್ಮ ಅಧ್ಯಯನದ ಮೇಲೆ ವಿಶ್ವಾಸವಿದ್ದರೆ . ನಮ್ಮ ಜೊತೆಗೆ ಮೊದಲು ಸಂವಾದಕ್ಕೆ ಬನ್ನಿ. ನಿಮ್ಮ ಉದ್ದಟತನದ ಮಾತುಗಳಿಗೆ ಕಡಿವಾಣ ಹಾಕಿ ನಿಮ್ಮ ದೋಷಪೂರಿತ ಕೃತಿಯನ್ನು ಹಿಂದೆ ಪಡೆಯಲು ಉಗ್ರವಾಗಿ ಆಗ್ರಹಿಸುತ್ತೇವೆ