ಸೇಡಂ:
12ನೇ ಶತಮಾನದ ಶರಣರ ವಚನ ಸಾಹಿತ್ಯವು ಮಾನವಕುಲಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.
ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವದ ಅಂಗವಾಗಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೋಲಿ ಘರ್ಜನೆ ಹಾಗೂ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು, ಕೋಲಿ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಅನುಭವ ಮಂಟಪವು ಅಂದು ಕೇವಲ ಚರ್ಚಾ ವೇದಿಕೆಯಾಗಿರದೆ, ಶೋಷಿತರ ಧ್ವನಿಯಾಗಿತ್ತು. ಜನರ ನೇರ ಪಾಲ್ಗೊಳ್ಳುವಿಕೆಯೊಂದಿಗೆ ಮೂಡಿಬಂದ ಅನುಭಾವದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಈ ಸಾಹಿತ್ಯಕ್ಕೆ ತಳಸಮುದಾಯದ ಮತ್ತು ಹಿಂದುಳಿದ ವರ್ಗಗಳ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.
ಅಂಬಿಗರ ಚೌಡಯ್ಯನವರ ಸ್ಮರಣಾರ್ಥ ವಿಧಾನಸೌಧದ ಮುಂಭಾಗದಲ್ಲಿ ಅವರ ಮೂರ್ತಿಯನ್ನು ಸ್ಥಾಪಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಸಚಿವ, ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮಾತಾ ಮಾಣಿಕೇಶ್ವರಿ ಪ್ರಾಧಿಕಾರ ರಚನೆಯಾಗುತ್ತಿದ್ದು, ಅದಕ್ಕೆ 500 ಕೋಟಿ ರೂ. ಅನುದಾನ ನೀಡಬೇಕು, ಕಲಬುರಗಿಯ ವಿಧಾನ ಸೌಧದ ಮುಂದೆಯೂ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಮಾತನಾಡಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಹಾಲಪ್ಪಯ್ಯ ವಿರಕ್ತಮಠದ ಶ್ರೀ ಪಂಚಾಕ್ಷರ ಸ್ವಾಮಿ, ಅಲ್ಲಮಪ್ರಭು ಸಂಸ್ಥಾನಮಠ ತೊನಸನಹಳ್ಳಿಯ ಶ್ರೀ ಡಾ. ಮಲ್ಲಣ್ಣಪ್ಪ ಸ್ವಾಮಿ ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕ ರಾಜಕುಮಾ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಯಶಪಾಲ ಆನಂದ ಸುವರ್ಣ, ಎಂಎಲ್ಸಿ ಸಾಯಬಣ್ಣ ತಳವಾರ, ಬಸವರಾಜ ಪಾಟೀಲ ಊಡಗಿ, ಕೋಲಿ ಸಮಾಜ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ದತ್ತಾತ್ರೇಯ ರೆಡ್ಡಿ ಮುದಿರಾಜ, ಲಚ್ಚಪ್ಪ ಜಮಾದಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕರ್, ಶಿವಾಜಿ ಮೆಟೆಗಾರ, ರವಿ ನಂದಿಗಾವ, ಮಿನುಗಾರಿಕೆ ನಿಗಮ ಮಂಡಳಿ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ, ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ರಮೇಶ ಭೀಮರಾವ ಅಳ್ಳೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಕೃಪೆ: ವಾರ್ತಾಭಾರತಿ
