ವಿಜಯೇಂದ್ರ ವಿರುದ್ಧ ಯತ್ನಾಳ್ ಬೆಂಬಲಿಗರು ಘೋಷಣೆ ಕೂಗಿದಾಗ, ಸಿಟ್ಟಿಗೆದ್ದ ಸಿದ್ದು ಸವದಿ ಎದ್ದು ಧಿಕ್ಕಾರ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ
ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪ ಗುಡ್ಡದಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ನಡೆಯುತ್ತಿರುವ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಜನ ಬಂದು ಪಾಲ್ಗೊಂಡರು. ಆಗಮಿಸಿದ ಜನಸಾಗರದಿಂದ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲುಗಡೆ ಆಗಿತ್ತು.
ವೇದಿಕೆಯಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಜೊತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಸಿ. ಸಿ. ಪಾಟೀಲ, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯೇಂದ್ರ ವಿರುದ್ಧ ಯತ್ನಾಳ್ ಬೆಂಬಲಿಗರು ಘೋಷಣೆ ಕೂಗಿದಾಗ, ಸಿಟ್ಟಿಗೆದ್ದ ಸಿದ್ದು ಸವದಿ ಎದ್ದು ಧಿಕ್ಕಾರ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಿಜಯೇಂದ್ರ ಸುವರ್ಣ ವಿಧಾನಸೌಧಕ್ಕೆ ತೆರಳಿದರು. ವಿಜಯೇಂದ್ರ ನಿರ್ಗಮಿಸಿದ ಮೇಲೆ ಬಂದ ಯತ್ನಾಳ್ ಅವರಿಗೆ ‘ ಹುಲಿ ಹುಲಿ’ ಎಂದು ಕೂಗಿ ಅವರ ಬೆಂಬಲಿಗರು ಸ್ವಾಗತಿಸಿಕೊಂಡರು.
ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ನಿಷೇಧದ ಮಧ್ಯೆಯೂ ಪಂಚಮಸಾಲಿ ಹೋರಾಟಕ್ಕೆ ಟ್ರ್ಯಾಕ್ಟರ್ ತರಲು ಯತ್ನಿಸಿದ ಹೋರಾಟಗಾರರನ್ನು ಹಿರೇಬಾಗೇವಾಡಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದರು.
5 ಸಾವಿರ ಟ್ರ್ಯಾಕ್ಟರ್ಗಳ ಮೆರವಣಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೋರಟಗಾರರು ಯೋಜಿಸಿದ್ದರು. ಇದಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.