ಶ್ರೀಗಳಿಂದ ವಿಡಿಯೋ ಸಂದೇಶ: ಸಿದ್ಧತೆ ಶುರುವಾಗಿದೆ, ಎಲ್ಲರೂ ಸಹಕಾರ ನೀಡಬೇಕು
ಗದಗ
ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಕೋರಿ ಬಸವ ಸಂಘಟನೆಗಳ ನಿಯೋಗವೊಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪ್ರಮುಖರಾದ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳನ್ನು ಬುಧವಾರ ಸಂಜೆ ಭೇಟಿಯಾಗಿ ಮನವಿ ಸಲ್ಲಿಸಿದರು.
ಅದೇ ಸಮಯದಲ್ಲಿ ಮತ್ತೂಂದು ಬಸವ ಸಂಘಟನೆಗಳ ತಂಡ ಭಾಲ್ಕಿ ಶ್ರೀಗಳನ್ನು ಭೇಟಿ ಮಾಡಿ ಅವರಿಗೂ ಮನವಿ ಪತ್ರ ಸಲ್ಲಿಸಿತು.
ಜೊತೆಗೆ ನಾಡಿನ ಹಿರಿಯ ಚಿಂತಕರು ಬರೆದಿರುವ ಬಹಿರಂಗ ಪತ್ರ, ಗೊರುಚ ಅವರ ನೀಡಿರುವ ಸಲಹೆಗಳು, ಇವುಗಳಿಗೆ ಬೆಂಬಲವಾಗಿ ಬಂದಿರುವ 500ಕ್ಕೂ ಹೆಚ್ಚು ಶರಣ ಶರಣೆಯರ ಸಹಿಗಳ ಪ್ರತಿಗಳನ್ನೂ ನೀಡಲಾಯಿತು.
ಶ್ರೀಗಳಿಗೆ ನೀಡಿದ ಮನವಿ ಪತ್ರದಲ್ಲಿ ನಿಯೋಗ ಗೊರುಚ ಅವರು ನೀಡಿರುವ ಸಲಹೆಗಳನ್ನು ಜಾರಿಗೆ ತರುವಂತೆ ಶ್ರೀಗಳನ್ನು ಕೋರಿಕೊಂಡರು.
- ಎಲ್ಲಾ ಜಿಲ್ಲೆಗಳಲ್ಲಿ, ಹಳ್ಳಿಯಿಂದ ನಗರ ಕೇಂದ್ರಗಳವರೆಗೆ ಬಸವ ತತ್ವದ ಮಠಗಳನ್ನು ಮತ್ತು ಸಂಘಟನೆಗಳನ್ನು ತೊಡಗಿಸಿಕೊಂಡು ಅಭಿಯಾನ ನಡೆಯಬೇಕು.
- ಅಭಿಯಾನಕ್ಕೆ ನಾಡಿನ ಪ್ರಮುಖ ಮಠಾಧೀಶರು, ವಿಚಾರವಾದಿಗಳು, ಪ್ರಗತಿಪರ ಯುವಜನರು, ಮಹಿಳೆಯರು ಮತ್ತು ಸಮಾಜ ಮುಂದಾಳುಗಳು ಇರುವ ರಾಜ್ಯಮಟ್ಟದ ಪ್ರಾತಿನಿಧಿಕ ಸಮಿತಿಯೊಂದನ್ನು ರಚಿಸಬೇಕು.
- ಉನ್ನತಾಧಿಕಾರದ ಈ ಸಮಿತಿಯು ಅಭಿಯಾನದ ಸ್ಪಷ್ಟ ರೂಪು-ರೇಷೆಗಳನ್ನು ನಿರ್ಧರಿಸಿ, ಪ್ರತಿ ಜಿಲ್ಲೆಗೂ ಪರಿಣಿತರ ಒಂದೊಂದು ನಿಯೋಗ ಸಮಿತಿ ರಚಿಸಬೇಕು.
- ಅಭಿಯಾನದ ತಂಡಗಳಿಗೆ ಕನಿಷ್ಠ ಒಂದು ದಿನದ ತರಬೇತಿಗೆ ವ್ಯವಸ್ಥೆ ಮಾಡುವುದು. ಈ ತರಬೇತಿ ತಂಡದ ಸದಸ್ಯರನ್ನು ಕ್ಷೇತ್ರ ಕಾರ್ಯಕ್ಕೆ ಸಜ್ಜುಗೊಳಿಸುವಂತಿರಬೇಕು.
- ತರಬೇತಿಗೆ ಮತ್ತು ಇತರ ಚಟುವಟಿಕೆಗಳಿಗೆ ಬಳಕೆಯಾಗುವಂತಹ ಲಿಂಗಾಯತ ಚಳುವಳಿಯ ಹಿನ್ನೆಲೆ ಮತ್ತು ಅಭಿಮಾನದ ಆಶಯಗಳನ್ನು ತಿಳಿಸುವ ಒಂದು ಅಧಿಕೃತ ಟಿಪ್ಪಣಿಯನ್ನು ಸಿದ್ಧಪಡಿಸುವುದು.
- ಅಭಿಯಾನ ಸಂದರ್ಭದಲ್ಲಿ ಲಿಂಗಾಯತ ತತ್ವ ಸಿದ್ಧಾಂತಗಳ ಸ್ಪಷ್ಟ ತಿಳುವಳಿಕೆ ಇದ್ದವರು ಮಾತ್ರ ಮಾತನಾಡುವುದು.
ಈ ವಿಷಯದ ಮೇಲೆ ಶ್ರೀಗಳೊಂದಿಗೆ ನಿಯೋಗದ ಸದಸ್ಯರು ಒಂದು ಗಂಟೆ ಚರ್ಚಿಸಿದರು. ಶ್ರೀಗಳಿಂದ ಬಂದ ಪ್ರತಿಕ್ರಿಯೆಯ ಸಾರಾಂಶ:
- ಲಿಂಗಾಯತ ಮಠಾಧೀಶರ ಒಕ್ಕೂಟದವರು ಪರಸ್ಪರ ಸಂಪರ್ಕದಲ್ಲಿದ್ದಾರೆ. ಅಭಿಯಾನವನ್ನು ಯಶಸ್ವಿ ನಡೆಸಲು ಅನೇಕ ಗೂಗಲ್ ಮೀಟ್ ನಡೆದಿವೆ.
- ಅಭಿಯಾನಕ್ಕೆ ಸಂಪೂರ್ಣ ಬೆಂಬಲ, ಆಶೀರ್ವಾದ, ಸಹಯೋಗ ನೀಡಲು ಮಠಾಧಿಪತಿಗಳ ಒಕ್ಕೂಟದ ಸದಸ್ಯರಿಗೆ ಈಗಾಗಲೇ ಪತ್ರ ಬರೆಯಲಾಗಿದೆ.
- ಅಭಿಯಾನದ ಯಶಸ್ಸಿಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು, ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಎಲ್ಲಾ ಜಿಲ್ಲಾ ಘಟಕಗಳಿಗೆ ಈಗಾಗಲೇ ಪತ್ರ ಕಳಿಸಲಾಗಿದೆ.
- ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಸವ ಸಮಿತಿ, ಬಸವಪರ ಸಂಘಟನೆಗಳು, ಬಸವ ತತ್ವ ಪ್ರೇಮಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಗತಿಪರ ಸಂಘಟನೆಗಳು, ಆಸಕ್ತ ಸಾರ್ವಜನಿಕರನ್ನು ಒಳಗೊಂದು ಅಭಿಯಾನ ನಡೆಯಲಿರುವದು.
- ಅಭಿಯಾನದ ವಿವರಗಳಿರುವ ನಾಲ್ಕು ಪುಟದ ಕರಪತ್ರ ಈಗಾಗಲೇ ಮುದ್ರಣಗೊಂಡಿದೆ.
- ಬಸವಾದಿ ಶರಣರ ಭಿತ್ತಿಚಿತ್ರಗಳಿರುವ ‘ಬಸವ ರಥ’ವನ್ನು ಸಿದ್ಧಗೊಳಿಸುವ ತಯಾರಕರನ್ನು ನಿರ್ಧರಿಸಲಾಗಿದೆ. ಅವರು ಕಾರ್ಯ ಪೂರ್ಣಗೊಳಿಸಲು ಒಂದು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಅವರಿಗೆ ಆದೇಶ ನೀಡುವುದೊಂದೇ ಬಾಕಿ ಉಳಿದಿದೆ. ಆಗಸ್ಟ್ ಕೊನೆ ವಾರದಲ್ಲಿ ಹೊತ್ತಿಗೆ ‘ಬಸವ ರಥ’ ಸಿದ್ಧವಾಗುತ್ತದೆ.
- ಅಭಿಯಾನದಲ್ಲಿ ‘ಬಸವ ರಥ’ದ ಜೊತೆಗೆ ಮೆರವಣಿಗೆ-ಪಾದಯಾತ್ರೆ ಇರುತ್ತದೆ. ಸಾರ್ವಜನಿಕ ಸಮಾರಂಭ ನಡೆಯುತ್ತದೆ, ಒಬ್ಬರು ಸ್ವಾಮಿಗಳು ಮತ್ತು ಒಬ್ಬರು ಉಪನ್ಯಾಸಕರ ಅನುಭಾವ ನುಡಿಗಳು ಇರುತ್ತವೆ. ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ. ಆಯಾ ಜಿಲ್ಲೆಯ ಸ್ಥಳೀಯ ಕಲಾ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಒಳಗೊಳಿಸಲಾಗಿದೆ.
- ಅಭಿಯಾನ ಯಶಸ್ವಿಗೊಳ್ಳಲು ಜಿಲ್ಲಾ ಸಮಿತಿಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಬಸವತತ್ವ-ಜಾತ್ಯತೀತ ಸ್ವಾಮಿಗಳು, ಉತ್ಸಾಹಿ ಯುವಕ ಯುವತಿಯರು, ಹಿರಿಯರನ್ನು ಒಳಗೊಂಡ 15 ಜನರ ಸಮಿತಿ ರಚಿಸಬೇಕು.
- ಸಮಿತಿ ಮೂಲಕ ಕಾರ್ಯಕ್ರಮದ ಖರ್ಚಿಗೆ ಬೇಕಾದ ಆರ್ಥಿಕ ನೆರವನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಬೇಕು. ಸಾವಿರಾರು ಜನ ಕೂರಬಹುದಾದ ಬಯಲು ಅಥವಾ ಸಭಾಭವನವನ್ನು ವ್ಯವಸ್ಥೆ ಮಾಡುವುದು. ಬರುವ ಮಠಾಧೀಶರನ್ನು ಸ್ವಾಗತ ಮಾಡಿಕೊಳ್ಳುವುದು. ಕಾರ್ಯಕ್ರಮದ ಉಪನ್ಯಾಸಕರಿಗೆ ಪ್ರವಾಸ ಭತ್ತೆ, ಪ್ರಸಾದ, ವಸತಿ ವ್ಯವಸ್ಥೆ ಮಾಡಬೇಕು. ಅಭಿಯಾನದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ರಾತ್ರಿ ಪ್ರಸಾದದ ವ್ಯವಸ್ಥೆ ಆಗಬೇಕು. ಅಗತ್ಯ ಮತ್ತಿತರ ವ್ಯವಸ್ಥೆಗಳನ್ನು ರೂಪಿಸಬೇಕು, ವ್ಯವಸ್ಥೆಗೊಳಿಸಬೇಕು.
ಅಭಿಯಾನದಲ್ಲಿ ಪೂರ್ಣಾವಧಿಯಾಗಿ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದ್ದೇವರು, ಗದುಗಿನ ಡಾ. ಸಿದ್ದರಾಮ ಮಹಾಸ್ವಾಮಿಗಳು, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವರು. ಅವರ ಜೊತೆ ಬೇರೆ ಸ್ವಾಮೀಜಿಗಳು ಸಹ ಉಪಸ್ಥಿತರಿರುತ್ತಾರೆ.
ನಿಯೋಗಕ್ಕೆ ವಿಡಿಯೋ ಸಂದೇಶ ನೀಡಿದ ಶ್ರೀಗಳು ಅಭಿಯಾನದ ಬಗ್ಗೆ ಇಲ್ಲಿಯವರೆಗೆ ನಡೆದಿರುವ ಸಿದ್ಧತೆಗಳನ್ನು ವಿವರಿಸಿದರು. “ಅಭಿಯಾನಕ್ಕೆ ಎಲ್ಲಾ ಬಸವ ಪರ ಸಂಘಟನೆಗಳು, ಸ್ವಾಮೀಜಿಗಳು, ಸಾರ್ವಜನಿಕರು ಸಹಕಾರ, ಸಹಯೋಗ ನೀಡಬೇಕೆಂದು ಬಸವ ಮೀಡಿಯಾದ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ,” ಎಂದು ಶ್ರೀಗಳು ಹೇಳಿದರು.
ಶ್ರೀಮಠಕ್ಕೆ ಹೋಗಿ ಶ್ರೀಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಕೆ.ಎಸ್. ಚಟ್ಟಿ, ವಿ.ಕೆ. ಕರೇಗೌಡ್ರ, ಶಿವಣ್ಣ ಮುಗದ, ಪ್ರಕಾಶ ಅಸುಂಡಿ, ಎಸ್.ಎಸ್. ಕಳಸಾಪುರ, ಕಳಕಯ್ಯ ಸಾಲಿಮಠ, ಬಸವರಾಜ ಹಿರೇಹಡಗಲಿ, ಅಂದಪ್ಪ ರಡ್ಡೇರ, ಮಲ್ಲಿಕಾರ್ಜುನ ಅಂಗಡಿ, ರವೀಂದ್ರ ಹೊನವಾಡ ಮತ್ತಿತರರು ಇದ್ದರು.
ಡಾ. ಸಿದ್ದರಾಮ ಸ್ವಾಮೀಜಿಯವರ ಸಕಾರಾತ್ಮಕ ಸ್ಪಂದನೆಗೆ ಧನ್ಯವಾದಗಳು. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಚೆನ್ನಾಗಿ ನಡೆಯುವುದರಲ್ಲಿ ಸಂಶಯವೇ ಇಲ್ಲ.
ಪೂಜ್ಯ ನಿಜಗುಣಾನಂದ ಸ್ವಾಮೀಜಿ/ ಗುಲ್ಬರ್ಗ ಜಿಲ್ಲೆಯ ಪೂಜ್ಯ ಕೋರ್ಣೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಯುವ ಲಿಂಗಾಯತರನ್ನು ಒಳಗೊಂಡಂತೆ ರಾಜ್ಯಮಟ್ಟದ “ಗಣಾಚಾರ ಪಡೆ” ರೂಪುಗೊಂಡು ಜಿಲ್ಲಾಮಟ್ಟದಲ್ಲಿ ಗಣಾಚಾರ ಪಡೆ ರೂಪುಗೊಳ್ಳಲು ಸೂಚಿಸುವುದು ಇಂದಿನ ಕಾಲಮಾನದ ಅಗತ್ಯ ಎನ್ನಿಸುತ್ತದೆ…