‘ಮುರುಘಾಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಬಸವ ಮೀಡಿಯಾ
ಬಸವ ಮೀಡಿಯಾ

ಶ್ರೀಮಠದಲ್ಲಿ 5 ಅಂತರ್ಜಾತಿ ಸೇರಿದಂತೆ 26 ಜೋಡಿಗಳ ವಿವಾಹ

ಚಿತ್ರದುರ್ಗ

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು.

ಕಾರ್ಯಕ್ರಮದ ಸಮ್ಮಖ ವಹಿಸಿ ಮಾತನಾಡಿದ ಡಾ. ಬಸವಕುಮಾರ ಸ್ವಾಮಿಗಳು ಶ್ರೀಮಠವು ಕಂದಾಚಾರ, ಮೌಢ್ಯವನ್ನು ನಿರಾಕರಿಸಿ ಅಮಾವಾಸ್ಯೆ, ಶೂನ್ಯಮಾಸ, ಆಷಾಡದಲ್ಲೂ ಪ್ರತಿವರ್ಷ ವಿವಾಹಗಳನ್ನು ಮಾಡುತ್ತಿದೆ. ನೂರಾರು ಜೋಡಿಗಳು ಇಂಥ ವಿವಾಹಗಳನ್ನು ಆಗಿದ್ದು, ಅವರೆಲ್ಲರೂ ಸುಖ ಜೀವನದಲ್ಲಿದ್ದಾರೆ ಎಂದರು.

ಎಲ್ಲ ವಧುವರರು, ಸಂಬಂಧಿಕರು ತಮ್ಮ ಮನೆಗಳ ಮುಂದೆ ಗಿಡ ನೆಡುವ ಮೂಲಕ ಹಸಿರು ಕ್ರಾಂತಿಗೆ ಕಾರಣವಾಗಬೇಕು. ವಿಶ್ವ ಪರಿಸರ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಬೇಕು, ಎಂದು ಕರೆ ಕೊಟ್ಟರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಶ್ರೀಮಠವು ಕಳೆದ ೩೫ ವರ್ಷಗಳಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತಿದೆ. ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತ, ಮೌಢ್ಯತೆಯನ್ನು ನಿವಾರಿಸುತ್ತ ಅಕ್ಷರ, ಅನ್ನ ದಾಸೋಹವನ್ನು ಮಾಡುತ್ತಿರುವುದು ಸ್ವಾಗತಾರ್ಹ. ವಿವಾಹಗಳ ಮೂಲಕ ದುಂದುವೆಚ್ಚ ಮಾಡುವುದನ್ನು ತಪ್ಪಿಸಲು ಈ ರೀತಿಯ ಕಾರ್ಯವನ್ನು ಮಾಡುತ್ತಿದೆ, ಎಂದು ಹೇಳಿದರು.

ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಕಳೆದ ೩೫ ವರ್ಷಗಳಿಂದ ಸುಮಾರು ೨೫ ಸಾವಿರ ವಧುವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎನ್ನುವ ಶರಣರ ನುಡಿಯಂತೆ ಸತಿ-ಪತಿಗಳು ಸಂಸಾರದಲ್ಲಿ ಹೊಂದಿಕೊಂಡು ಬದುಕಿನ ಬಾಳ ದೀಪ ಮಾಡಿಕೊಳ್ಳಬೇಕು, ಎಂದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ ತಾಳಿ ಮತ್ತು ವಸ್ತ್ರಗಳನ್ನು ವಿತರಿಸಿ ಮಾತನಾಡಿದ ಶಾಸಕ ವೀರೇಂದ್ರ ಪಪ್ಪಿ ಅವರು ವಿವಾಹ ಗಟ್ಟಿಯಾಗಿ ನಿಲ್ಲಬೇಕಾದರೆ ಷರತ್ತುಬದ್ಧ ಪ್ರೀತಿ ಇರಬಾರದು. ಸತಿ ಪತಿಯರಲ್ಲಿ ಅಪನಂಬಿಕೆ ಇರಬಾರದು. ಮುಕ್ತ ಮನಸ್ಸಿನಿಂದ ಮಾತನಾಡಬೇಕು.

ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ ಪ್ರೇಮದ ಹಿಂದೆ ಯಶಸ್ಸು, ಸಂಪತ್ತು ಬರುತ್ತದೆ. ಆದ್ದರಿಂದ ನವಜೋಡಿಗಳಲ್ಲಿ ಪ್ರೇಮ ಮುಖ್ಯ. ಪ್ರೀತಿ-ಪ್ರೇಮದಿಂದ ದಾಂಪತ್ಯ ಜೀವನ ನಡೆಸಿದರೆ ಯಶಸ್ಸು ಮತ್ತು ಸಂಪತ್ತು ಬರುತ್ತದೆ. ಸಾಮೂಹಿಕ ಕಲ್ಯಾಣ ಕಾರ್ಯವು ಸಮಾನತೆಯ ಸಾರವಾಗಿ ಕಾಣುತ್ತಿದೆ ಎಂದು ಹೇಳಿದರು.

ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಡಾ. ಕೆ. ಮಂಜುನಾಥ ನಾಯ್ಕ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ೧) ಎಸ್.ಹೇಮತ್ ಭದ್ರಾವತಿ (ವಿಶ್ವಕರ್ಮ) – ಸ್ನೇಹ ಬೆಂಗಳೂರು (ಆದಿಕರ್ನಾಟಕ), ೨) ಎ.ಎನ್. ಉಪೇಂದ್ರ ಕೊಡಗು (ಕೊಡವ) – ಸಿ.ಎಂ. ಚೊಂದಮ್ಮ ಕೊಡಗು (ಲಿಂಗಾಯತ), ೩) ಇ. ನಾಗರಾಜ ಬೆಂಗಳೂರು (ಲಿಂಗಾಯತ) – ಬಿ. ಶಶಿಕಲಾ ಶಿಕಾರಿಪುರ (ಕುರುಬ), ೪) ಬಿ. ಪ್ರಕಾಶ್ ದಾವಣಗೆರೆ (ಲಿಂಗಾಯತ) – ಡಿ. ಪ್ರೇಮಜ್ಯೋತಿ ದಾವಣಗೆರೆ (ಕ್ರಿಶ್ಚಿಯನ್) ಮತ್ತು ೫) ವಿ. ಮಂಜುನಾಥ್ ದಾವಣಗೆರೆ (ಲಿಂಗಾಯತ) – ಅನ್ನಪೂರ್ಣ ಪ್ರಕಾಶ್ ಭಜಂತ್ರಿ ಹುಬ್ಬಳ್ಳಿ (ಕೊರವರು) – ಐದು ಅಂತರ್ಜಾತಿ ವಿವಾಹ ಸೇರಿದಂತೆ ೨೬ ಜೋಡಿಗಳ ವಿವಾಹ ನೆರವೇರಿತು.

ಡಾ|| ಜೆ.ಎಸ್. ಪ್ರಫುಲ್ ತುಮಾಟಿ, ಮತ್ತು ಮಹೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ವಿಶ್ವಪರಿಸರ ದಿನದ ಅಂಗವಾಗಿ ನೂತನ ವಧು ವರರಿಗೆ ಸಸಿಗಳನ್ನು ವಿತರಿಸಲಾಯಿತು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಶ್ರೀಮತಿ ಎಸ್.ಆರ್. ನೇತ್ರಾವತಿ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *